ಶಿವಮೊಗ್ಗ: ದೀಪಾವಳಿ ಹಿಂದೂಗಳ ಪವಿತ್ರ ಹಬ್ಬ ಈ ಹಬ್ಬದಲ್ಲಿ ಗೋ ಪೂಜೆಗೆ ಅತಿಮುಖ್ಯ ಸ್ಥಾನವಿದೆ. ಇಂತಹ ಹಬ್ಬ ಆಚರಣೆ ಭಾಗವಾದ ಗೋಪೂಜೆ ವೇಳೆ ಹೊಸನಗರದಲ್ಲಿ ಅಚಾತುರ್ಯವೊಂದು ನಡೆದುಹೋಗಿದ್ದು ವೈದ್ಯರ ಸಕಾಲಿಕ ಶ್ರಮದಿಂದ ಎಲ್ಲವೂ ಸುಖಾಂತ್ಯವಾಗಿದೆ.
ಹೊಸನಗರ ತಾಲೂಕಿನ ಮತ್ತಿಮನೆ ಗ್ರಾಮದಲ್ಲಿ ಗೋಪೂಜೆ ವೇಳೆ ಪೂಜೆಗಿಟ್ಟಿದ್ದ ಬಂಗಾರದ ಸರವನ್ನು ಮನೆಯ ಹಸು ನುಂಗಿದ ಘಟನೆ ನಡೆದಿದೆ. ಶ್ಯಾಮ ಉಡುಪ ಎಂಬುವವರಿಗೆ ಸೇರಿದ ಹಸು ಆ ಬಂಗಾರದ ಸರವನ್ನು ನುಂಗಿತ್ತು. ಗೋಪೂಜೆಗೆಂದು ತೆಗೆದಿಟ್ಟಿದ್ದ ಸರ ಮಾಯವಾಗಿತ್ತು. ಶ್ಯಾಮ ಉಡುಪ ಕುಟುಂಬಸ್ಥರು ಎಲ್ಲಡೆ ಹುಡುಕಾಟ ನಡೆಸಿದ್ದರು.
ಆದರೆ ಎಲ್ಲೂ ಸಿಗದಿದ್ದಾಗ, ಪ್ರಸಾದದ ಜೊತೆ ಬಂಗಾರದ ಸರವನ್ನೂ ಹಸು ನುಂಗಿರಬಹುದು ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ಅಲ್ಲಿಗೂ ಕುಟುಂಬಸ್ಥರು ಬಂಗಾರದ ಸರ ಹೋದರೆ ಹೋಗಲಿ, ನಮ್ಮ ಹಸು ತಣ್ಣಗಿರಲಿ ಎಂದು ಸುಮ್ಮನಾಗಿದ್ಧರು. ಆದರೆ ಇತ್ತ ಆತಂಕಕಾರಿ ಬೆಳವಣಿಗೆಯಲ್ಲಿ ಬಂಗಾರದ ಸರ ನುಂಗಿದ್ದ ಹಸು ಮೇವು ತಿನ್ನುವುದನ್ನು ಕಡಿಮೆ ಮಾಡಿತ್ತು.
ಮುಂದೆ ಅದು ಹಸುವಿನ ಪ್ರಾಣಕ್ಕೆ ಕುತ್ತು ತರಬಹುದು ಎಂಬ ಆತಂಕ ಅವರಲ್ಲಿ ಮಡುವುಗಟ್ಟಿದೆ. ನಂತರ ಶ್ಯಾಮ ಉಡುಪ ಪಶುವೈದ್ಯರನ್ನು ಕರೆಸಿ ಶಸ್ತ್ರಚಿಕಿತ್ಸೆ ನಡೆಸಿ ಹಸುವಿನ ಹೊಟ್ಟೆಯೊಳಗಿದ್ದ ಬಂಗಾರದ ಸರವನ್ನು ಹೊರತೆಗೆಗಿದ್ದಾರೆ. ಪಶು ವೈದ್ಯ ಡಾ. ಆನಂದ ಅವರು ಆ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ.