ಶಿವಮೊಗ್ಗ: ಶಿವಮೊಗ್ಗ ಏರ್ಪೋರ್ಟ್ ಕುವೆಂಪು ಹೆಸರಿಟ್ಟು ಬಿಎಸ್ ವೈ ಘೋಷಣೆ ಮಾಡಿದ ಕೆಲವೇ ಗಂಟೆಗಳಲ್ಲಿ ಮತ್ತೊಂದು ಸಮುದಾಯದಿಂದ ಅಸಮಾಧಾನ ಹೊರಬಿದ್ದಿದೆ. ಬಂಗಾರಪ್ಪ ಹೆಸರು ಇಡದೇ ಇರುವುದಕ್ಕೆ ಆರ್ಯ ಈಡಿಗ ಸಂಘ ಬೇಸರ ವ್ಯಕ್ತ ಪಡಿಸಿದೆ.
ಆರ್ಯ ಈಡಿಗ ಸಂಘದ ಅಧ್ಯಕ್ಷ ಶ್ರೀಧರ್ ಹುಲ್ತಿಕೊಪ್ಪ ಹೇಳಿಕೆ ನೀಡಿ, ಬಂಗಾರಪ್ಪ ಶಿವಮೊಗ್ಗ ಜಿಲ್ಲೆಯ ಸಂಪೂರ್ಣ ಅಭಿವೃದ್ಧಿಗೆ ನಾಂದಿಹಾಡಿದರು. ಶಿವಮೊಗ್ಗ ಸ್ಮಾರ್ಟ್ ಸಿಟಿ ಬಗ್ಗೆ ಕನಸು ಕಂಡವರು ಬಂಗಾರಪ್ಪನವರು. ತುಂಗಾ ಏತಾ ನೀರಾವರಿ ಹಾಗೂ ತುಂಗಾ ಮೇಲ್ದಂಡೆ ಯೋಜನೆ ಜಾರಿಗೆ ತಂದವರು. ಅಂತವರ ಹೆಸರನ್ನ ವಿಮಾನ ನಿಲ್ದಾಣಕ್ಕೆ ಹೆಸರಿಡಬೇಕಿತ್ತು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬಂಗಾರಪ್ಪ ಯಾವುದೇ ಪಕ್ಷ, ಜಾತಿ ನೋಡಿರದ ವ್ಯಕ್ತಿ. ಕಾವೇರಿ ನೀರು ವಿಚಾರ ಬಂದಾಗ ಸುಗ್ರೀವಾಜ್ಞೆ ಹೊರಡಿಸಿದವರು. ರೈತರಿಗೆ ಉಚಿತವಾಗಿ ವಿದ್ಯುತ್ ನೀಡಿದವರು. ಆಶ್ರಯ ಯೋಜನೆ, ಆರಾಧನಾ ಯೋಜನೆ ತಂದರು. ಶೇ. 15 ಗ್ರಾಮೀಣ ಕೃಪಾಂಕವನ್ನು ತಂದಿದ್ದಾರೆ.
ನೂರಾರು ಯೋಜನೆ ತಂದು ಧೀಮಂತ ನಾಯಕ ಎನಿಸಿಕೊಂಡಿದ್ದ ಬಂಗಾರಪ್ಪನವರ ಹೆಸರನ್ನ ಸೋಗಾನೆ ಏರ್ಪೋರ್ಟ್ ಗೆ ಇಡಬೇಕು ಎಂದು ಮನವಿ ಮಾಡಲಾಗಿತ್ತು. ಯಡಿಯೂರಪ್ಪ ಹಾಗೂ ಬೊಮ್ಮಾಯಿ ಅಧಿಕಾರಕ್ಕೆ ಬರುವುದಕ್ಕೆ ಬಂಗಾರಪ್ಪರವರೇ ಕಾರಣ. ಬಂಗಾರಪ್ಪ ಹೆಸರು ಇಡಲೇಬೇಕು ಎಂದು ಶ್ರೀಧರ್ ಆಗ್ರಹಿಸಿದರು.
ಶಿವಮೊಗ್ಗದಲ್ಲಿ ಅತಿಹೆಚ್ಚು ಜನರು ಇರುವ ಸಮುದಾಯ ಇರುವುದು ಆರ್ಯ ಈಡಿಗರದ್ದು, ಹಾಗಾಗಿ ಬಂಗಾರಪ್ಪ ದೀಮಂತ ನಾಯಕ. ಕುವೆಂಪು ಹೆಸರನ್ನು ಹಲವಾರು ಕಡೆ ಇಡಲಾಗಿದೆ ಸರ್ಕಾರ ಬಂಗಾರಪ್ಪರವರನ್ನು ಕಡೆಗಣಿಸುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.