ಶಿವಮೊಗ್ಗ: ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಹೆಸರಲ್ಲಿ ಫೇಸ್ಬುಕ್ನಲ್ಲಿ ನಕಲಿ ಖಾತೆ ತೆರೆದು ಅವರ ವ್ಯಕ್ತಿತ್ವ, ಪಕ್ಷ ಚುಟುವಟಿಕೆಗೆ ಧಕ್ಕೆ ಬರುವಂತಹ ಪೋಸ್ಟ್ಗಳನ್ನು ಹಾಕಲಾಗಿದೆ. ‘ಶ್ರೀಮಾನ್ಯ ಮಧು ಬಂಗಾರಪ್ಪ ಜಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವರು’ ಹೆಸರಿನಲ್ಲಿ ನಕಲಿ ಫೇಸ್ಬುಕ್ ಗ್ರೂಪ್ ತೆರೆದು ಡಿಪಿಗೆ ಸಚಿವರ ಫೋಟೋ ಹಾಕಲಾಗಿದೆ.
ಎಐಸಿಸಿ ಮುಖಂಡರಾದ ಸೋನಿಯಾಗಾಂಧಿ, ರಾಹುಲ್ ಅವರು ಹಣ ಲೂಟಿ ಹೊಡೆದಿದ್ದಾರೆ ಎಂದೂ, ರಾಜ್ಯ ಕಾಂಗ್ರೆಸ್ ಸರಕಾರದ ಗ್ಯಾರಂಟಿ ಯೋಜನೆಗಳನ್ನು ಅಪಹಾಸ್ಯ ಮಾಡಿದಂತೆ ಪೋಸ್ಟ್ ಅನ್ನು ಹಾಕಲಾಗಿದ್ದು, ಸಚಿವರಿಗೆ ಕೆಟ್ಟ ಹೆಸರು ಬರುವಂತೆ ಮತ್ತು ಅವರ ಘನತೆಗೆ ಧಕ್ಕೆ ತರುವಂತೆ ಮಾಡಲಾಗಿದೆ. ಕುಂದಾಪುರ ವಿರಾಟ ಹೆಸರಿನ ಫೇಸ್ಬುಕ್ ಬಳಕೆದಾರರಿಂದ ದುರ್ಬಳಕೆ ಮಾಡಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.
ಅಚ್ಚೆದಿನ್ ವಿಚಾರವಾಗಿ ಸಚಿವರ ಹಾಗೂ ಕಾಂಗ್ರೆಸ್ ಪಕ್ಷದ ವಿರುದ್ಧವಾದಂತಹ ಫೋಸ್ಟ್ ಹಾಕಲಾಗಿದೆ. ಯೇ ಹೈ ಅಚ್ಚೇ ದಿನ್ ದೇಶವನ್ನು ನುಂಗಿ ನೀರು ಕುಡಿದಿದ್ದ ಕಾಂಗ್ರೆಸ್. ಬಹಳ ಜನ ಅಚ್ಚೇ ದಿನ್ ಎಲ್ಲಿ ಅಂತ ಕೇಳಿದ್ರು .ಇದು ಅಚ್ಚೇ ದಿನ್ ನೋಡಿ ಖುಷಿ ಪಡಿ ಎಂದು ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಫೋಟೋ ಹಾಕಿ ಅವಹೇಳನ ಮಾಡಲಾಗಿದೆ.
ಈ ಬಗ್ಗೆ ಕಾಂಗ್ರೆಸ್ ಮುಖಂಡ ಜಿಡಿ ಮಂಜುನಾಥ್ ಎನ್ನುವರು ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಐಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ