ಶಿವಮೊಗ್ಗ: ಸೂಕ್ತ ಸಮಯಕ್ಕೆ ಆಯಂಬುಲೆನ್ಸ್ ಸೇವೆ ದೊರಕದೇ ನವಜಾತ ಶಿಶು ಸಾವಿಗೀಡಾಗಿರುವ ಕರುಣಾಜನಕ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ತುಮರಿಯಲ್ಲಿ ನಡೆದಿದೆ.
ತುಮರಿ ಸಮೀಪದ ಚದರವಳ್ಳಿಯ ಚೈತ್ರಾ ಎಂಬುವರ ಹೆಣ್ಣುಮಗು ಮೃತಪಟ್ಟಿದೆ. ನಿನ್ನೆ ರಾತ್ರಿ ಹೆರಿಗೆ ನೋವು ಕಾಣಿಸಿಕೊಂಡ ವೇಳೆ ಕುಟುಂಬಸ್ಥರು ಚೈತ್ರಾರನ್ನು ತುಮರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತಂದಿದ್ದರು. ಆಯಂಬುಲೆನ್ಸ್ ಇಲ್ಲದೇ ಖಾಸಗಿ ವಾಹನದಲ್ಲಿ ಗರ್ಭಿಣಿಯನ್ನು ಕರೆತಂದಿದ್ದರು. ಈ ವೇಳೆ ಚೈತ್ರಾ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಗುವಿಗೆ ಜನ್ಮ ನೀಡಿದ್ದರು.
ಗರ್ಭಿಣಿ ಚೈತ್ರಾರನ್ನು ತಡವಾಗಿ ಕರೆತಂದಿದ್ದರಿಂದ ತಾಯಿ ಹಾಗೂ ಮಗುವಿನ ಆರೋಗ್ಯದಲ್ಲಿ ಏರುಪೇರಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗೆಂದು ಸಾಗರ ತಾಲೂಕು ಆಸ್ಪತ್ರೆಗೆ ತೆರಳುವಂತೆ ವೈದ್ಯರು ಸಲಹೆ ನೀಡಿದ್ದರು. ಬಳಿಕ ಖಾಸಗಿ ವಾಹನದಲ್ಲಿ ಸಾಗರಕ್ಕೆ ತೆರಳುವ ಮಾರ್ಗ ಮಧ್ಯೆಯೇ ನವಜಾತ ಶಿಶು ಮೃತಪಟ್ಟಿದೆ. ಸಮಪರ್ಕ ಸೇವೆ ಸಿಗದೇ ಸರ್ಕಾರಿ ಅವ್ಯವಸ್ಥೆಗೆ ನವಜಾತ ಶಿಶು ಬಲಿಯಾಗಿದೆ.