ಶಿವಮೊಗ್ಗ: ಮಹಾಶಿವರಾತ್ರಿಗೆ ಶಿವಮೊಗ್ಗ ಹಾಲು ಒಕ್ಕೂಟ ರೈತರಿಗೆ ಸಿಹಿ ಸುದ್ದಿ ನೀಡಿದೆ. ಪ್ರತಿ ಲೀಟರ್ ಹಾಲಿಗೆ 2.50 ರೂ. ಹೆಚ್ಚಳ ಮಾಡಲಾಗಿದೆ.
ಶಿವಮೊಗ್ಗ ಹಾಲು ಒಕ್ಕೂಟದ ಅಧ್ಯಕ್ಷ ಶ್ರೀಪಾದ ರಾವ್ ನಿಸರಾಣಿ ಸೋಮವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಕಳೆದ ವರ್ಷ ಕೊರೋನ ಹಿನ್ನೆಲೆಯಲ್ಲಿ ಹಾಲು ಒಕ್ಕೂಟಕ್ಕೆ ನಷ್ಟವಾಗಿತ್ತು. ಹಾಗಾಗಿ ಹಾಲಿನ ದರವನ್ನು 1.75 ಪೈಸೆ ಕಡಿತಗೊಳಿಸಲಾಗಿತ್ತು. ಇದೀಗ ಹಾಲು ಒಕ್ಕೂಟ ಲಾಭದ ಕಡೆಗೆ ಬಂದಿದೆ. ಲಾಭಾಂಶವನ್ನು ರೈತರಿಗೆ ನೀಡುತ್ತಿದ್ದೇವೆ. ನಿರಂತರವಾಗಿ ಈ ದರವನ್ನು ನೀಡುವ ಅಪೇಕ್ಷೆ ಹೊಂದಿದ್ದೇವೆ ಎಂದರು.
ಹಾಲಿನ ದರ ಏರಿಕೆಯಿಂದ ಶಿವಮೊಗ್ಗ-ದಾವಣಗೆರೆ-ಚಿತ್ರದುರ್ಗ ಹಾಲು ಒಕ್ಕೂಟದ ವ್ಯಾಪ್ತಿಯ 1.65 ಲಕ್ಷ ರೈತರಿಗೆ ಇದರಿಂದ ಲಾಭವಾಗಲಿದೆ. ಶಿವಮೊಗ್ಗ ಹಾಲು ಒಕ್ಕೂಟದಲ್ಲಿ ಪ್ರತಿನಿತ್ಯ 5.20 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದೆ. ಇದರಲ್ಲಿ 3 ಲಕ್ಷ ಲೀಟರ್ ಹಾಲು ಮತ್ತು ಹಾಲಿನ ಉತ್ಪನ್ನಗಳು ಮಾರಾಟವಾಗುತ್ತಿದೆ. ಉಳಿದ 70 ಸಾವಿರ ಲೀಟರ್ ಹಾಲನ್ನು ಹಾಲಿನ ಪುಡಿ ಮತ್ತು ಬೆಣ್ಣೆಗೆ ಬಳಸಲಾಗುತ್ತಿದೆ. ಜನವರಿಯಲ್ಲಿ ಹಾಲು ಒಕ್ಕೂಟ 5.5 ಕೋಟಿ ಲಾಭ ಗಳಿಸಿದೆ. ಬರುವ ಮಾರ್ಚ್ ವೇಳೆಗೆ 6 ಕೋಟಿ ರೂ. ನಿವ್ವಳ ಲಾಭ ಗಳಿಸುವ ನಿರೀಕ್ಷೆ ಇದೆ. ಲಾಭಾಂಶವನ್ನು ರೈತರಿಗೆ ನೀಡುತ್ತಿದ್ದೇವೆ ಎಂದರು.