ಶಿವಮೊಗ್ಗ : ಜಿಲ್ಲೆಯ ಹೊಸನಗರ ತಾಲೂಕು ಬಸ್ ನಿಲ್ದಾಣದಲ್ಲಿ ನಿಂತಿದ್ದ ಅಪ್ರಾಪ್ತೆಯನ್ನು ಯುವಕರ ಗುಂಪೊಂದು ಪುಸಲಾಯಿಸಿ ಕರೆದುಕೊಂಡು ಹೋಗಿ ಅತ್ಯಾಚಾರವೆಸಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಕಳೆದ ಜನವರಿ 15ರಂದು ಬಾಲಕಿ ಹೊಸನಗರ ಬಸ್ ನಿಲ್ದಾಣದಲ್ಲಿ ಬಸ್ಗಾಗಿ ಕಾಯುತ್ತಾ ನಿಂತಿದ್ದಳು. ಈ ವೇಳೆ ಬಾಲಕಿಯ ಮನೆಗೆ ಜೆಸಿಬಿ ಕೆಲಸಕ್ಕೆಂದು ಬರುತ್ತಿದ್ದ ಸಮಯದಲ್ಲಿ ಪರಿಚಯವಾಗಿದ್ದ ಸಂತೋಷ ಮತ್ತು ಸುನಿಲ್ ಇಬ್ಬರು ಬಾಲಕಿಯನ್ನು ಕರೆದು ನಾವು ನಿಮ್ಮ ಗ್ರಾಮಕ್ಕೆ ಹೋಗುತ್ತಿದ್ದೇವೆಂದು ಪುಸಲಾಯಿಸಿ ಆಕೆಯನ್ನು ಕಾರಿನಲ್ಲಿ ಕರೆದೊಯ್ದು ಅತ್ಯಾಚಾರವೆಸಗಿದ್ದಾರೆ. ಅತ್ಯಾಚಾರವೆಸಗಿ ವಿಡಿಯೋ ಸಹ ಮಾಡಿಕೊಂಡಿದ್ದು, ಈ ಘಟನೆ ಬಗ್ಗೆ ಯಾರಿಗೂ ಹೇಳದಂತೆ ಬಾಲಕಿಗೆ ಬೆದರಿಕೆ ಹಾಕಿದ್ದರು. ಹೀಗಾಗಿ, ಬಾಲಕಿ ಈ ಬಗ್ಗೆ ಪೋಷಕರ ಬಳಿ ಬಾಯ್ಬಿಟ್ಟಿರಲಿಲ್ಲ.
ಇದಾದ ಬಳಿಕ ಯುವಕರು ಮತ್ತೆ ತಮ್ಮ ಜೊತೆ ಬರುವಂತೆ ಬಾಲಕಿಗೆ ಒತ್ತಾಯಿಸಿದ್ದಾರೆ. ಆದರೆ, ಬಾಲಕಿ ಪುನಃ ಕರೆದಾಗ ನಿರಾಕರಿಸಿದ್ದಾಳೆ. ಬಾಲಕಿ ನಿರಾಕರಿಸಿದ್ದಕ್ಕೆ ಬೇರೆಯವರ ಮೊಬೈಲ್ಗೆ ಅತ್ಯಾಚಾರದ ವಿಡಿಯೋ ಕಳುಹಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಘಟನೆ ಸಂಬಂಧ ಜ. 21ರಂದು ಹೊಸನಗರ ಪೊಲೀಸ್ ಠಾಣೆಯಲ್ಲಿ ಬಾಲಕಿಯ ಪೋಷಕರು ದೂರು ದಾಖಲಿಸಿದ್ದಾರೆ.
ದೂರು ಆಧರಿಸಿ ಆರೋಪಿಗಳಾದ ಸಂತೋಷ್ (24) ಹಾಗೂ ಸುನೀಲ್ (26) ಅನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಯುವಕರು ಈ ಹಿಂದೆ ಬಾಲಕಿಯ ಮನೆಗೆ ಜೆಸಿಬಿ ಕೆಲಸಕ್ಕೆಂದು ಬಂದ ವೇಳೆ ಪರಿಚಯವಾಗಿದ್ದರು.