ಶಿವಮೊಗ್ಗ : ಸಂಸತ್, ಶಾಸನ ಸಭೆ ಹಾಗೂ ಸಾರ್ವಜನಿಕವಾಗಿ ಚರ್ಚಿಸದೆ ಮುಚ್ಚಿದ ಲಕೋಟೆಯಲ್ಲಿ ಟೆಂಡರ್ ತೆರೆದ ರೀತಿಯಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳಿಸಿದ್ದು, ಇದಕ್ಕೆ ತಮ್ಮ ವಿರೋಧವಿದೆ ಎಂದು ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಹೇಳಿದರು.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎನ್ಇಪಿಗೆ ಮಾಜಿ ಸಿಎಂ ಸಿದ್ದರಾಮಯ್ಯನವರು ಈಗಾಗಲೇ ವಿರೋಧ ಮಾಡಿದ್ದಾರೆ ಎಂದ ಅವರು, ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಗೆ ಸಂಪೂರ್ಣ ವಿರೋಧವಿದೆ. ವಿದ್ಯಾರ್ಥಿ ಸಂಘಟನೆಗಳೊಂದಿಗೆ, ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಸಂಘಸಂಸ್ಥೆಗಳೊಂದಿಗೆ ಚರ್ಚಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಗಾಡಿಯ ಮುಂದೆ ಕುದುರೆ ಕಟ್ಟಿ ಓಡಿಸಬೇಕು. ಆದರೆ ಎನ್ಇಪಿಯಲ್ಲಿ ಗಾಡಿಯ ಹಿಂದೆ ಕುದುರೆ ಕಟ್ಟಿ ಓಡಿಸಲಾಗುತ್ತಿದೆ. ಶಿಕ್ಷಣ ಖಾಸಗೀಕರಣದ ಮೊದಲ ಮೆಟ್ಟಿಲು ಇದಾಗಿದೆ. ಬಹುಸಂಸ್ಕೃತಿ, ಬಹುಧರ್ಮ, ಜಾತಿ, ನಂಬಿಕೆಯನ್ನು ಹೊಂದಿರುವ ರಾಷ್ಟ್ರ ಇದಾಗಿದೆ. ಹೀಗಿದ್ದರೂ ಕೂಡ ಅದಕ್ಕೆ ಚ್ಯುತಿ ಬರಬುವ ನಿಟ್ಟಿನಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತರಲಾಗಿದೆ ಎಂದರು.
ಮಗುವಿನ 3ಮೇ ವಯಸ್ಸಿನಿಂದ 18 ನೇ ವಯಸ್ಸಿನವರೆಗಿನ ಶಿಕ್ಷಣವನ್ನು ಸರ್ಕಾರವೇ ನೋಡಿಕೊಳ್ಳಬೇಕು. ಅದನ್ನು ಬಿಟ್ಟು ಖಾಸಗೀಕರಣ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ. ಸನಾತನ ವಿಚಾರಗಳ ಹೆಚ್ಚು ಒತ್ತು ನೀಡಲಾಗಿದೆ. 130 ಕೋಟಿ ಜನ ಸಂಖ್ಯೆ ಇರುವ ಈ ದೇಶದಲ್ಲಿ ಕೇವಲ 2 ಲಕ್ಷ ಜನರೊಂದಿಗೆ ಎನ್ಇಪಿ ಕುರಿತು ಚರ್ಚಿಸಲಾಗಿದೆ ಎಂದು ಹೇಳುತ್ತಿರುವುದು ಸರಿಯಾದ ಕ್ರಮವಲ್ಲ ಎಂದರು.
ತಂತ್ರಜ್ಞಾನದ ಮೂಲಕವೇ ಶಿಕ್ಷಣ ನೀಡಲಾಗುವುದೆಂದು ಹೇಳಲಾಗುತ್ತಿದೆ. ಆದರೆ ತಂತ್ರಜ್ಞಾನ ಎಷ್ಟು ವಿದ್ಯಾರ್ಥಿಗಳ ಬಳಿ ಇದೆ ಎಂಬುದು ಪ್ರಶ್ನಾರ್ಹವಾಗಿದೆ. ಮೊಬೈಲ್, ಲ್ಯಾಪ್ಟಾಪ್ಗಳನ್ನು ಎಷ್ಟು ವಿದ್ಯಾರ್ಥಿಗಳು ಖರೀದಿಸುವ ಸಾಮರ್ಥ್ಯ ಹೊಂದಿದ್ದಾರೆಂಬುನ್ನು ನೋಡಬೇಕಿದೆ. ಮಲೆನಾಡು ತಾಲೂಕುಗಳಲ್ಲಿ ಶೇ.80 ರಷ್ಟು ನೆಟ್ವರ್ಕ್ ಇಲ್ಲ. ಪರಿಸ್ಥಿತಿ ಹೀಗಿರುವಾಗ ತಂತ್ರಜ್ಞಾನ ಮೂಲಕ ಶಿಕ್ಷಣ ನೀಡಲು ಹೇಗೆ ಸಾಧ್ಯವೆಂದರು.
ಬಿಜೆಪಿವರು ಅತ್ಯಂತ ಬುದ್ಧಿವಂತರು. ಇದರಲ್ಲಿ ಎರಡು ಮಾತಿಲ್ಲ. ಬುದ್ಧಿವಂತಿಕೆಯಲ್ಲಿ ಅವರನ್ನು ಹಿಂದಿಕ್ಕಲು ಸಾಧ್ಯವಿಲ್ಲ. ಆದರೆ ಕಳ್ಳ ಮಾರ್ಗದಲ್ಲಿ ಕೆಲವು ಕಾಯ್ದೆಗಳನ್ನು ಜಾರಿಗೊಳಿಸುತ್ತಿದ್ದಾರೆ. ಹೀಗೆ ಜಾರಿಗೊಳಿಸುವುದನ್ನು ತಡೆಯಲಾಗದು. ಆದರೆ ನ್ಯೂನತೆಯ ವಿರುದ್ಧ ನಿರಂತರ ಹೋರಾಟ ಮಾಡುವುದು ಅನಿವಾರ್ಯವಾಗಲಿದೆ ಎಂದು ಕಿಮ್ಮನೆ ರತ್ನಾಕರ್ ಹೇಳಿದರು.