ಶಿವಮೊಗ್ಗ : ಆರ್ಎಸ್ಎಸ್ ಹಿನ್ನೆಲೆ ಇರುವ ಸಾವಿರಾರು ಮಂದಿ ಐಎಎಸ್, ಐಪಿಎಸ್ ಆಗುತ್ತಿದ್ದಾರೆ ಎನ್ನುವುದನ್ನು ಒಪ್ಪುವುದಿಲ್ಲ. ಎಲ್ಲಾ ಕ್ಷೇತ್ರಗಳಲ್ಲಿಯೂ ಕೂಡ ಸಂಘದ ಹಿನ್ನೆಲೆಯವರು ಇದ್ದಾರೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಗುರುವಾರ ಶಿವಮೊಗ್ಗ ದಸರಾ ಉತ್ಸವಕ್ಕೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರಾದರೂ ಆರ್ಎಸ್ಎಸ್ ಸಹಕಾರ ಕೇಳಿದರೆ ಅವರಿಗೆ ಸಹಾಯ ಮಾಡಿದೆ. ಆರ್ಎಸ್ಎಸ್ ನಿಂದ ಸಂಸ್ಕಾರ ಪಡೆಯುತ್ತಾರೋ, ಅವರೆಲ್ಲರೂ ದೇಶ ಸಂರಕ್ಷಣೆ ಮಾಡುತ್ತಾರೆ. ಅದು ಯಾವುದೇ ಕ್ಷೇತ್ರ ಇರಬಹುದೆಂದು ಹೇಳಿದರು.
ಕೊರೋನಾ ಭೀತಿಯ ನಡುವೆಯೇ ದಸರಾವನ್ನು ಈ ಬಾರಿ ಆಚರಿಸಲಾಗುತ್ತಿದೆ. ನಿರ್ಭಂಧದ ನಡುವೆಯೇ ಈ ಬಾರಿಯೂ ದಸರಾ ಆಚರಣೆ ಮಾಡಲಾಗುತ್ತಿದೆ. ವಿಶ್ವ ವಿಖ್ಯಾತ ದಸರಾವನ್ನು ಈ ಬಾರಿ ರಾಜಕೀಯ ಮುತ್ಸದ್ದಿ ಎಸ್.ಎಂ. ಕೃಷ್ಣ ಅವರು ಉದ್ಘಾಟಿಸಿರುವುದು ಸಮಯೋಚಿತವಾಗಿದೆ ಎಂದರು.
ನನ್ನ ಹೆಸರು ಹೇಳಿಕೊಂಡು ಕೆಲವರು ಹಣ ವಸೂಲಿ ಮಾಡಿರುವುದು ಗಮನಕ್ಕೆ ಬಂದಿದೆ. ಹಣ ಕಳೆದಕೊಂಡ ಮೇಲೆ ನನ್ನ ಬಳಿ ಬಂದಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ. ಮೂವರು ತಲೆ ಮರೆಸಿಕೊಂಡಿದ್ದಾರೆ. ಅವರ ಬಂಧನಕ್ಕೆ ಸೂಚನೆ ನೀಡಲಾಗಿದೆ. ಜನ ಇಂತಹವರ ಬಗ್ಗೆ ಹುಷಾರಾಗಿ ಇರಬೇಕೆಂದು ಹೇಳಿದರು.
ಸಂಸ್ಕಾರ ಇಲ್ಲದ ವ್ಯಕ್ತಿಗಳು ಈ ಮಾದಕ ವಸ್ತುಗಳ ದುಶ್ಚಟದಲ್ಲಿ ಸಿಕ್ಕಿ ಹಾಕಿಕೊಳ್ಳುತ್ತಿದ್ದಾರೆ. ಪೋಷಕರು ಮಕ್ಕಳ ಬಗ್ಗೆ ನಿಗಾ ಇಡಬೇಕು. ಸ್ಟಾರ್ ನಟರೆಂದಾಕ್ಷಣ ಯಾರೂ ಕೂಡ ಮೇಲಿಂದ ಇಳಿದು ಬಂದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.