ಚಿಕ್ಕಮಗಳೂರು-ಕಡೂರು: ಅನೇಕ ದೇಶಗಳು ಇಂದು ದಿವಾಳಿಯಾಗಿದ್ದು ಭಾರತ ಆರ್ಥಿಕವಾಗಿ ಸದೃಢವಾಗಿ ನಿಂತಿದೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತವೇ ಪ್ರಪಂಚಕ್ಕೆ ನಿದರ್ಶನವಾಗಿದೆ ಎಂದು ರಾಜ್ಯ ಬಿಜೆಪಿ ಮಹಿಳಾ ಮೋರ್ಚದ ಅಧ್ಯಕ್ಷೆ ಹಾಗೂ ವಿಧಾನಪರಿಷತ್ ಸದಸ್ಯೆ ಭಾರತಿಶೆಟ್ಟಿ ತಿಳಿಸಿದರು.
ಪಟ್ಟಣದ ಎಪಿಎಂಸಿ ಆವರಣದಲ್ಲಿ ಬಿಜೆಪಿ ಕಡೂರು ಮಂಡಲ ಆಯೋಜಿಸಿದ್ದ ಭಾರತೀಯ ಜನತಾ ಪಾರ್ಟಿ ಚಿಕ್ಕಮಗಳೂರು ಜಿಲ್ಲಾ ಮಹಿಳಾ ಮೋರ್ಚ ಸಮಾವೇಶ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೊರೊನಾ ನಂತರದಲ್ಲಿ ಅನೇಕ ರಾಷ್ಟ್ರಗಳು ಬೆಲೆ ಏರಿಕೆಯಿಂದ ತತ್ತರಿಸಿ ಹೋಗಿವೆ. ಆದರೆ ಭಾರತದಲ್ಲಿ ಜನ ಸಾಮಾ ನ್ಯನ ಬದುಕುವ ರೀತಿಯಲ್ಲಿ ಬೆಲೆ ನಿಯಂತ್ರಣ ದಲ್ಲಿದೆ ಇದಕ್ಕೆ ಮೋದಿ ಆಡಳಿತವೇ ಕಾರಣವಾಗಿದೆ.ಕಾಂಗ್ರೆಸ್ ಪಕ್ಷ ಇದ್ದಿದ್ದರೆ ದೇಶ ದಿವಾಳಿಯಾಗುತ್ತಿತ್ತು ಎಂಬುದನ್ನು ಮಹಿಳೆಯರು ತಿಳಿದುಕೊಳ್ಳಬೇಕು ದೇಶದ ಮಹಿಳೆ ಜಾಗೃತಳಾಗಿದ್ದು ದೇಶದ ಭೂಮಿ, ಜಲ, ನೆಲ,ಸಂಪತ್ತು, ಉಳಿಸುವ ನಿಟ್ಟಿನಲ್ಲಿ ಮೋದಿ ಅವರನ್ನು ಬೆಂಬಲಿಸಬೇಕಾಗಿದೆ ಎಂದರು.
ಪ್ರಪಂಚದ ೨೫ ರಾಷ್ಟ್ರಗಳ ಸಾಲಿನಲ್ಲಿ ಭಾರತ ಇದೀಗ ನಾಲ್ಕನೇ ಸ್ಥಾನ ಪಡೆದಿದೆ,ಈ ರಾಷ್ಟ್ರದಲ್ಲಿ ಮಹಿಳಾ ಸಂಘಗಳನ್ನು ಗುರುತಿಸಿದ್ದು ನಮ್ಮ ಹೆಮ್ಮೆಯ ಪ್ರಧಾನಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಸಲ್ಲುತ್ತದೆ.
೨೦೧೪ ಯಿಂದ ರಾಜ್ಯಕ್ಕೆ ೬,೭೫೦ ಕೆ.ಮೀ ರಸ್ತೆ ನಿರ್ಮಾಣವಾಗಿದ್ದು ಬಿಜೆಪಿ ಆಡಳಿತದಲ್ಲಿ ೧೩.೫೦೦ ಕಿ.ಮೀ ರಸ್ತೆ ನಿರ್ಮಣವಾಗಿದೆ. ಅದೇ ರೀತಿ ರೈಲ್ವೆಯು ೧೦೦ ಪಟ್ಟು ದಾಖಲೆ ಮಾಡಿದೆ ರಾಜ್ಯದಲ್ಲಿ ವಿಮಾನ ನಿಲ್ದಾಣಗಳ ಸಂಖ್ಯೆ ಹೆಚ್ಚಿದೆ. ಕಣಿವೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಜಾರಿಯಾಗಿದೆ ಇದನ್ನು ಮಾಡಲು ಕಾಂಗ್ರೆಸ್ ಪಕ್ಷದಿಂದ ಸಾಧ್ಯ ಇತ್ತ? ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ಪ್ರಚಾರಕ್ಕಾಗಿ ಇಬ್ಬರ ಸಹಿ ಇರುವ ಒಂದು ಚೆಕ್ ಹಿಡಿದು ಕೊಂಡು ಓಡಾಡುತ್ತಿರುವುದು ವಿಪರ್ಯಾಸ ಎಂದು ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವ ಕುಮಾರ್ ಅವರನ್ನು ಟೀಕಿಸಿದರು. ನಾಡಿನ ಪ್ರತಿಯೊಬ್ಬ ಮಹಿಳೆಯು ಮೋದಿ ಅವರ ಯೋಜನೆಗಳನ್ನು ತಿಳಿದು ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ೫ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಿಸಬೇಕೆಂದು ಪಣ ತೊಡಬೇಕು ಎಂದು ಮಹಿಳೆಯರಿಗೆ ಕರೆ ನೀಡಿದರು.
ರಾಷ್ಟ್ರ ಬಿಜೆಪಿ ಕಾರ್ಯದರ್ಶಿ ಸಿ.ಟಿ.ರವಿ ಮಾತನಾಡಿ, ಸಿದ್ದರಾಮಯ್ಯ ಅವರ ಅಧಿಕಾರದ ಅವಧಿಯಲ್ಲಿ ಜಾತಿಗಳನ್ನು ಎತ್ತಿಕಟ್ಟಲಾಗುತ್ತಿತ್ತು. ಅವರ ಯೋಜನೆಗಳು ಜಾತಿಗಳಿಗೆ ಸೀಮೀತವಾಗಿದ್ದು ಶಾದಿ ಮಹಲ್,ಮಕ್ಕಳ ಪ್ರವಾಸದಲ್ಲಿ ಇಂತಹ ಜಾತಿಗೆ ಸೇರಿದವರಿಗೆ ಮಾತ್ರ ಪ್ರವಾಸ ಎಂದು ಮಕ್ಕಳ ಮನಸ್ಸಿನಲ್ಲಿ ವಿಷ ಬೀಜವನ್ನು ಬಿತ್ತಿದರು.
ಆದರೆ ಬಿಜೆಪಿ ಎಂದಿಗೂ ಜಾತಿ ಭೇದ ಮಾಡಿ ಯೋಜನೆಗಳನ್ನು ನೀಡಲಿಲ್ಲ. ಕಾಂಗ್ರೆಸ್ ಸುಳ್ಳಿನ ಕಾರ್ಡ್ ಬಿಡುಗಡೆ ಮಾಡಿದೆ ರಾಜ್ಯದ ಜನತೆ ರಾತ್ರಿಕಂಡ ಬಾವಿಗೆ ಹಗಲು ಬೀಳಲ್ಲ ಕಾಂಗ್ರೆಸ್ ಆಡಳಿತದಲ್ಲಿರುವ ರಾಜ್ಯದಲ್ಲಿ ಇವರ ಸುಳ್ಳಿನ ಕಾರ್ಡ್ ಯಾಕೆ ಬಿಡುಗಡೆ ಮಾಡುತ್ತಿಲ್ಲ.ಕಾಂಗ್ರೆಸ್ ಅನ್ಯಾಯದ ತಕ್ಕಡಿಯನ್ನು ಕೈಯಲ್ಲಿ ಇಟ್ಟುಕೊಂಡು ಆಡಳಿತ ನಡೆಸಿತು ಇಂತಹ ಸರಕಾರವನ್ನು ಮತ್ತೊಮ್ಮೆ ತರಬಾರದು ಎಂದು ಮಹಿಳೆಯರಿಗೆ ಕಿವಿ ಮಾತು ಹೇಳಿದರು.