ಚಿಕ್ಕಮಗಳೂರು: ಎ.ಐ.ಸಿ.ಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಹಿಂದೆ ಅನ್ಯಾಯವಾಗಿದೆ ಎನ್ನುವ ಕೂಗಿದೆ. ಸಿದ್ದರಾಮಯ್ಯ ಅವರು ಪಕ್ಷ ಹೇಳಿದಂತೆ ಕೇಳುತ್ತಾರೆ. ನಾನೂ ಪಕ್ಷದ ನಿರ್ಧಾರಕ್ಕೆ ಬಿಡುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾರ್ಮಿಕವಾಗಿ ಹೇಳಿದರು.
ಶೃಂಗೇರಿಯಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಡಿ.ಕೆ.ಶಿವಕುಮಾರ್, ಸಿದ್ದ ರಾಮಯ್ಯ ಜೊತೆಗೆ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರು ಪ್ರಸ್ತಾಪವಾಗಿರುವ ಕುರಿತು ಮಾಧ್ಯಮದವರ ಪ್ರಶ್ನೆಗೆ ಡಿ.ಕೆ.ಶಿವಕುಮಾರ್ ಮೇಲಿನಂತೆ ಪ್ರತಿಕ್ರಿಯಿಸಿದರು.
ಮಲ್ಲಿಕಾರ್ಜುನ ಖರ್ಗೆ ನಮ್ಮ ಹಿರಿಯ ನಾಯಕರು, ಎಐಸಿಸಿ ಅಧ್ಯಕ್ಷರು, ರಾಜ್ಯದಲ್ಲಿ ಕಾಂಗ್ರೆಸ್ ಬರಬೇಕು ಎನ್ನುವ ಇಚ್ಛೆ ಅವರದ್ದು, ಅವರಿಗೆ ಹಿಂದೆಲ್ಲಾ ಅನ್ಯಾಯವಾಗಿದೆ ಎನ್ನುವ ಕೂಗಿದೆ. ಪಕ್ಷ ಏನು ಹೇಳುತ್ತದೆ ಅದನ್ನು ನಾವು ಕೇಳಬೇಕು. ನಾನೂ ಪಕ್ಷದ ನಿರ್ಧಾರಕ್ಕೆ ಬಿಡುತ್ತೇನೆ. ಖರ್ಗೆ ಅವರು ಉನ್ನತ ಸ್ಥಾನ ದಲ್ಲಿರುವವರು, ಸಿದ್ದರಾಮಯ್ಯ ಅವರೂ ಪಕ್ಷ ಹೇಳಿದಂತೆ ಕೇಳುತ್ತಾರೆ. ಬೇರೆಯವರೂ ಪಕ್ಷ ಹೇಳಿದಂತೆ ಕೇಳುತ್ತಾರೆ. ಇಲ್ಲಿ ಪಕ್ಷ ಮುಖ್ಯ ಎಂದರು.
ಡಿ.ಕೆ.ಶಿವಕುಮಾರ್ ಅವರ ಈ ಮಾತುಗಳು ಮುಖ್ಯಮಂತ್ರಿ ರೇಸ್ ನಲ್ಲಿರುವ ಸಿದ್ದರಾಮಯ್ಯ ಅವರನ್ನು ಕಟ್ಟಿಹಾಕುವ ಪ್ರಯತ್ನದ ಮುಂದುವರಿದ ಭಾಗ ಎಂದೇ ವಿಶ್ಲೇಷಣೆಗಳು ನಡೆಯುತ್ತಿವೆ.
ರಾಜಕಾರಣದಲ್ಲಿ ಎದುರಾಳಿ ಯಾರಾದರೂ ಎದುರಿಸಲೇಬೇಕು. ಬಿಜೆಪಿಯವರ ದೊಡ್ಡ ನಿರ್ಧಾರಕ್ಕೆ ಸ್ವಾಗತ ಮಾಡುತ್ತೇನೆ. ಇದು ರಾಜಕಾರಣ ಹೋರಾಟ ಮಾಡೋಣ, ಜನ ತೀರ್ಮಾನ ಮಾಡುತ್ತಾರೆ ನಮ್ಮದೇನೂ ಅಭ್ಯಂತರವಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ಕನಕಪುರ ಕ್ಷೇತ್ರಕ್ಕೆ ಸಚಿವ ಆರ್. ಅಶೋಕ್ ಅವರನ್ನು ಕಣಕ್ಕಿಳಿಸುವ ಬಗ್ಗೆ ಬಿಜೆಪಿ ಚಿಂತನೆ ನಡೆಸಿದೆ ಎನ್ನು ವ ಮಾಧ್ಯಮ ಪ್ರತಿನಿಧಿಗಳ ಮಾತಿಗೆ ಅವರು ಶೃಂಗೇರಿಯಲ್ಲಿ ಪ್ರತಿಕ್ರಿಯಿಸಿದರು.
ನಾನೂ ಸೇರಿದಂತೆ ನಮ್ಮೆಲ್ಲಾ ಆಕಾಂಕ್ಷಿಗಳು ಅರ್ಜಿ ಸಲ್ಲಿಸುವ ಮುನ್ನ ಇಂದಿರಾ ಗಾಂಧಿ ಅವರಿಗೆ ಆಶೀರ್ವಾದ ಮಾಡಿದ ಪೀಠ ಇದು. ಇಲ್ಲಿ ನಾನು ಶಾರದಾಂಭೆಗೆ ಪ್ರಾರ್ಥನೆ ಸಲ್ಲಿಸಿ ದೇವರು, ಗುರುಗಳ ಆಶೀರ್ವಾದ ಪಡೆಯಲು ಬಂದಿದ್ದೇನೆ. ಅಷ್ಟುಬಿಟ್ಟರೆ ರಾಜಕಾರಣ ಏನಿಲ್ಲ ಎಂದರು.
ಇಲ್ಲಿಂದ ಧರ್ಮಸ್ಥಳಕ್ಕೆ ಹೋಗ ಬೇಕಿತ್ತು. ತುರ್ತಾಗಿ ದೆಹಲಿಗೆ ಹೋಗ ಬೇಕಿರುವುದರಿಂದ ಅದನ್ನು ರದ್ದು ಮಾಡಿ ಬೆಂಗಳೂರಿಗೆ ಹೊರಟಿದ್ದೇನೆ. ಇನ್ನೊಮ್ಮೆ ಧರ್ಮಸ್ಥಕ್ಕೆ ಭೇಟಿ ನೀಡುತ್ತೇನೆ ಎಂದರು.