ಚಿಕ್ಕಮಗಳೂರು: ಜಿಲ್ಲಾಧಿಕಾರಿ ಕಟ್ಟಡ ಮಾದರಿಯಾಗುವ ಜೊತೆಗೆ ಜನರಿಗೆ ಸೌಕರ್ಯಗಳನ್ನು ನೀಡುವಂತಾಗಬೇಕು ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.
ಚಿಕ್ಕಮಗಳೂರು ದಂಡರಮಕ್ಕಿ ತೋಟಗಾರಿಕಾ ಕ್ಷೇತ್ರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಲೋಕೋಪಯೋಗಿ ಇಲಾಖೆ ಸಂಯುಕ್ತಾಶ್ರಯದಲ್ಲಿ ನಡೆದ ಚಿಕ್ಕಮಗಳೂರು ಜಿಲ್ಲೆಯ ನೂತನ ಜಿಲ್ಲಾ ಕಛೇರಿಗಳ ಸಂಕೀರ್ಣ ಕಟ್ಟಡ ಶಂಕು ಸ್ಥಾಪನೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಜಿಲ್ಲಾಧಿಕಾರಿ ಕಚೇರಿಯ ಸಂಕೀರ್ಣ ಕಟ್ಟವು ಶತಮಾನದಷ್ಟು ಉಳಿಯುವಂತಾಗಬೇಕು. ಆ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಕಟ್ಟಡ ಕಟ್ಟುವುದಕ್ಕೆ ೮ ಎಕರೆ ಜಾಗವನ್ನು ತೋಟಗಾರಿಕೆ ಇಲಾಖೆಯಿಂದ ಪಡೆದುಕೊಂಡಿದ್ದು, ಆ ಜಾಗದ ಬದಲಾಗಿ ಬೇರೆ ಕಡೆ ೧೬ ಎಕರೆ ಕಂದಾಯ ತೋಟಗಾರಿಕೆ ಇಲಾ ಖೆಗೆ ಜಾಗವನ್ನು ನೀಡಲಾಗಿದೆ. ಈಗ ಜಿಲ್ಲಾಧಿಕಾರಿ ಸಂಕೀರ್ಣ ಕಟ್ಟಡ ಕಟ್ಟುವುದಕ್ಕೆ ಯಾವುದೇ ಸಮಸ್ಯೆಯಿಲ್ಲ. ಹೀಗಾಗಲೇ ೩೦ ಕೋಟಿ ರೂ. ಹಣ ನೀಡಲಾಗಿದೆ. ಇನ್ನೂ ಕೆಲಸವೇ ಪ್ರಾರಂಭವಾಗಿಲ್ಲ ಆಗಲೇ ೩೦ ಕೋಟಿ ರೂ. ನೀಡ ಲಾಗಿದೆ. ೩೦ ಕೋಟಿ ರೂ.ವನ್ನು ಆರು ತಿಂಗಳ ಒಳಗಾಗಿಯೇ ಬಿಡುಗಡೆ ಮಾಡುತ್ತೇವೆ ಎಂದರು.
ಪ್ರಸ್ತುತ ಇರುವ ಜಿಲ್ಲಾಧಿಕಾರಿ ಕಟ್ಟಡದಲ್ಲಿ ಸೌಕರ್ಯಗಳ ಕೊರತೆ, ಎಲ್ಲಾ ಇಲಾಖೆಗಳು ಕಾರ್ಯ ನಿರ್ವಹಿಸುವುದಕ್ಕೆ ಸಾಧ್ಯವಾಗದ ಹಿನ್ನಲೆಯಲ್ಲಿ ಹೊಸ ಕಟ್ಟಡವನ್ನು ಪ್ರಾರಂಭಿಸಲಾಗಿದೆ ಎಂದು ತಿಳಿಸಿದರು.
ಹೊಸ ಕಟ್ಟಡದಿಂದ ಜನರಿಗೆ ಹೆಚ್ಚಿನ ಸೌಕರ್ಯಗಳನ್ನು ದೊರೆಯುವಂತಾಗಬೇಕು. ಅಧಿಕಾರಿಗಳು ಸುಲಲಿತವಾಗಿ ಕೆಲಸ ಮಾಡಬೇಕು. ಕಚೇರಿ ಬರುವಂತಹ ಜನರಿಗೆ ಗೌರವಯುತವಾಗಿ ಕಾಣುವುದರೊಂದಿಗೆ ಅವರ ಸೌಲ ಭ್ಯಗಳನ್ನು ನೀಡುವಂತಾಗಬೇಕು ಎಂದು ಹೇಳಿದರು.
ಇನ್ನೂ ಕಂದಾಯ ಇಲಾಖೆಗಳ ಸೌಲಭ್ಯಗಳನ್ನು ಸರಳೀಕರಣ ಮಾಡುತ್ತಿದ್ದೇವೆ. ಗ್ರಾಮ ವಾಸ್ತವ್ಯದ ಮೂಲಕ ಸ್ಥಳದಲ್ಲಿಯೇ ಸವಲತ್ತುಗಳನ್ನು ನೀಡುವಂತಹ ಕೆಲಸ ಆಗಬೇಕು. ಈ ನಿಟ್ಟಿನಲ್ಲಿಯೇ ಎಲ್ಲಾ ಜಿಲ್ಲಾಧಿ ಕಾರಿಗಳ ಸೇರಿ ಒಂದು ಸಭೆ ನಡೆಸಿ ಮಾತನಾಡಲಾಗಿದೆ. ಜನರ ಹತ್ತಿರ ಹೋಗಿ ವಾಸ್ತವ ಏನು ಎನ್ನುವುದು ಗೊತ್ತಾಗುತ್ತದೆ. ಈ ನಿಟ್ಟಿನಲ್ಲಿಯೇ ಗ್ರಾಮ ವಾಸ್ತವ್ಯ ಮಾಡಲಾಗುವುದು ಎಂದು ತಿಳಿಸಿದರು.
ಶಾಸಕ ಸಿ.ಟಿ.ರವಿ ಪ್ರಾಸ್ತಾವಿಕ ಮಾತನಾಡಿ, ಚಿಕ್ಕಮಗಳೂರು ಜಿಲ್ಲಾಧಿಕಾರಿ ಕಛೇರಿಗೆ ಸಂಕೀರ್ಣ ಬೇಕು ಎನ್ನುವುದು ಬಹು ವರ್ಷಗಳ ಪ್ರಯತ್ನ. ಈ ಹಿನ್ನಲೆಯಲ್ಲಿ ೨೦೧೭ರಲ್ಲಿ ತಾಜ್ ಹೊಟೇಲ್ ಹತ್ತಿರ ಶಂಕು ಸ್ಥಾಪನೆ ನೆರವೇರಿಸಲಾಯಿತು. ತದನಂತರ ನ್ಯಾಯಾಲಯಕ್ಕೆ ಹೋಗಿ ಆ ಜಾಗಕ್ಕೆ ಸಂಬಂಧಿಸಿದಂತೆ ಅಡೆತಡೆ ಬಂದಾಗ ಮತ್ತು ಸ್ಥಳೀಯರು ಆ ಜಾಗ ದೂರವಾಯಿತು ಎನ್ನುವ ಮಾತು ಇತ್ತು ಎಂದರು.
ಜಿಲ್ಲಾಡಳಿತ ಕಚೇರಿ ಸಂಕೀ ರ್ಣ ಜಿಲ್ಲೆಯ ಆಡಳಿತ ಹೃದಯ ವಿದ್ದಂತೆ. ಅದು ಯಾವಾಗಲೂ ಜನರಿಗೆ ಹತ್ತಿರವಾಗಿಯೇ ಇರಬೇಕು ದೂರವಾಗಬಾರದು. ಈ ಹಿನ್ನಲೆಯಲ್ಲಿ ತೋಟಗಾರಿಕೆ ಇಲಾಖೆಗೆ ಕಚೇರಿಗೆ ಸೇರಿದ ಜಾಗವನ್ನು ಪಡೆದುಕೊಂಡು ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ ಕಟ್ಟುವ ಸಂಕಲ್ಪದೊಂದಿಗೆ ಕಂದಾಯ ಸಚಿವ ಆರ್. ಅಶೋಕ್ ಅವರಿಗೆ ಮನವೋಲಿಸಿ ಅವರು ಸಹಮತವನ್ನು ಪಡೆದು ಮತ್ತು ಅದಕ್ಕೆ ಇದ್ದಂತಹ ತಾಂತ್ರಿಕ ಅಡೆತಡೆ ಗಳನ್ನು ಎದುರಿಸಿ ಅವರ ನೇತೃತ್ವ ದಲ್ಲಿ ಶಂಕು ಸ್ಥಾಪನೆ ನೆರವೇರಿಸಿದ್ದು, ಸಂತೋಷ ತಂದಿದೆ ಎಂದರು.
ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ ಕಟ್ಟಡವು ಒಟ್ಟು ಎರಡು ಹಂತದ ಬಿಸಿ ಕಾಂಫ್ಲೇಕ್ಸ್ನ ಯೋಜನೆಯಾಗಿದೆ. ಮೊದಲನೇ ಹಂತ ೩೦ ಕೋಟಿ, ಎರಡನೇ ಹಂತ ೩೦ ಕೋಟಿ ಸೇರಿದಂತೆ ಒಟ್ಟು ೬೦ ಕೋಟಿ ರೂ. ವೆಚ್ಚದ ಕಟ್ಟಲಾಗುತ್ತದೆ. ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ ಮಲೆನಾಡಿನ ವಾತಾವರಣಕ್ಕೆ ತಕ್ಕಂತೆ ದೂರದೃಷ್ಠಿ ಇಟ್ಟುಕೊಂಡು ಮಾಡಲಾಗಿದೆ. ಈ ಕಟ್ಟಡ ಶತಮಾನಗಳ ಕಾಲ ಆಡಳಿತ ಕೇಂದ್ರವಾಗಿ ಯಾವುದೇ ರೀತಿಯ ಕುಂದುಕೊರತೆ ಇಲ್ಲದ ರೀತಿಯಲ್ಲಿ ಇರಬೇಕು ಎನ್ನುವುದನ್ನು ಗಮನ ದಲ್ಲಿ ಇಟ್ಟುಕೊಂಡು ವಿಶೇಷವಾಗಿ ಚರ್ಚೆ ನಡೆಸಿ, ಆ ಕಚೇರಿಯ ಸಂಕೀರ್ಣದ ಮಾದರಿಯನ್ನು ತಯಾರಿ ಅದೇ ರೀತಿಯಲ್ಲಿ ಕಟ್ಟಲಾಗುತ್ತದೆ ಎಂದು ತಿಳಿಸಿದರು.
ಪೊಲೀಸ್ ಆಡಳಿತ ಕಾಂಪ್ಲೇಕ್ಸ್ಗೂ ಕೂಡ ಜಾಗವನ್ನು ಒದಗಿಸಿದ್ದೇವೆ. ಆಡಳಿತದ ಕೇಂದ್ರ ಜಿಲ್ಲಾಧಿಕಾರಿ ಕಚೇರಿ, ಜಿಪಂ ಮತ್ತು ಪೊಲೀಸ್ ಕಚೇರಿ ಒಂದೇ ಸಾಲಿನಲ್ಲಿ ಇದ್ದರೆ ಜನಸಾಮಾನ್ಯರಿಗೆ ಏಕ ಕಾಲದಲ್ಲಿ ಮೂರು ಕಚೇರಿಗೆ ಹೋಗಿ ಕೆಲಸ ಮಾಡಿಸುವುದಕ್ಕೆ ಸುಲಭ ಆಗುತ್ತದೆ ಎನ್ನುವ ಹಿನ್ನಲೆಯಲ್ಲಿ ಜಿಲ್ಲಾಡಳಿತ ಮತ್ತು ಎಸ್ಪಿ ಕಚೇರಿಗೆ ಕಟ್ಟುವುದಕ್ಕೆ ಬೇಕಾದಂತಹ ರೂಪರೇಷೆಯನ್ನು ಸಿದ್ದಪಡಿಸಿದ್ದೇವೆ. ಇನ್ನೂ ನ್ಯಾಯಾಲಯ ಕಟ್ಟಡವು ಒಂದನೇ ಹಂತ ಮುಗಿಸಿದ್ದು, ಎರಡನೇ ಹಂತಕ್ಕೆ ಮಂಜೂರು ದೊರೆತಿದೆ. ಎಲ್ಲಾ ಕಚೇರಿಯೂ ಒಂದೇ ಸಾಲಿನಲ್ಲಿ ಇರಬೇಕು ಎನ್ನುವ ಸಂಕಲ್ಪ ಮಾಡಿದ್ದೇವೆ. ಈಗ ಇರುವ ಜಿಲ್ಲಾಧಿಕಾರಿ ಕಚೇರಿಯನ್ನು ಕಲೆ, ಸಂಸ್ಕೃತಿಯನ್ನು ಪ್ರತಿನಿಧಿಸುವ ವಸ್ತು ಪ್ರದರ್ಶನ ಕೇಂದ್ರವಾಗಿ ಮಾರ್ಪಡು ಮಾಡಲು ಸಿದ್ದ ಮಾಡಿದ್ದೇವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಉಪಸಭಾಪತಿಗಳಾದ ಎಂ.ಕೆ. ಪ್ರಣೇಶ್, ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿಯಾದ ಡಿ.ಎನ್. ಜೀವರಾಜ್, ಶಾಸಕರಾದ ಎಂ. ಕುಮಾರಸ್ವಾಮಿ, ಬೆಳ್ಳಿ ಪ್ರಕಾಶ್, ರಾಜೇಗೌಡ್ರು, ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಕೆ.ಪಿ. ವೆಂಕಟೇಶ್, ಲೋಕೋಪಯೋಗಿ ಇಲಾಖೆ ಸಂಪರ್ಕ ಮತ್ತು ಕಟ್ಟಡಗಳ ಮುಖ್ಯ ಇಂಜಿನಿಯರ್ ಬಿ.ಟಿ. ಕಾಂತ್ರಾಜ್, ಜಿಲ್ಲಾಧಿಕಾರಿಗಳಾದ ಕೆ.ಎನ್. ರಮೇಶ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯಾದ ಜಿ. ಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾದ ಉಮಾ ಪ್ರಶಾಂತ್ ಇತರರು ಇದ್ದರು.