ಚಿಕ್ಕಮಗಳೂರು: ಈಗಾಗಲೇ ಬಿಸಿಲಿನ ಝಳಕ್ಕೆ ಬೆಂದಿದ್ದ ಕಾಫಿನಾಡಿಗೆ ಮಳೆರಾಯ ತಂಪೆರೆದಿದ್ದಾನೆ. ಚಿಕ್ಕಮಗಳೂರಿನಲ್ಲಿ ಇದು ವರ್ಷದ ಮೊದಲ ಮಳೆ ಆಗಿದ್ದು, ಇಲ್ಲಿನ ಜನರು ಸಂತೋಷವನ್ನು ಹೊರಹಾಕಿದ್ದಾರೆ.
ನಗರದಲ್ಲಿ ಕಳೆದ ಒಂದು ಗಂಟೆ ಯಿಂದ ಧಾರಾಕಾರವಾಗಿ ಮಳೆ ಸುರಿ ಯುದಿದ್ದು, ಇಲ್ಲಿನ ರೈತರು ಸಂತಸಗೊಂಡಿದ್ದಾರೆ. ಇಷ್ಟು ದಿನ ಬೆಳೆ ಉಳಿಸಿಕೊಳ್ಳಲು ರೈತರು ಮುಗಿಲಿನತ್ತ ಮುಖ ಮಾಡಿದ್ದರು. ಕೊನೆಗೂ ಮಳೆರಾಯ ಅಬ್ಬರಸಿ ಬೊಬ್ಬೆರೆದ ಕಾರಣ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಜಿಲ್ಲೆಯ ಇನ್ನು ಕೆಲವೆಡೆ ಸಾಧಾರಣ ಮಳೆ ಆಗಿದ್ದು, ರಸ್ತೆಯಲ್ಲಿ ನೀರು ನಿಂತು ವಾಹನ ಸವಾರರು ಪರದಾಡಿದ ಘಟನೆಯೂ ನಡೆದಿದೆ.
ಬಿಸಿಲಿನ ಹವೆಯ ವಾತಾವರಣ ಮುಂದುವರಿಕೆ
ಕರ್ನಾಟಕ ರಾಜ್ಯಾದ್ಯಂತ ಮಳೆ ಕಡಿಮೆಯಾಗಿ ಬಿಸಿಲಿನ ಹವೆಯ ವಾತಾವರಣ ಮುಂದುವರಿದಿದೆ. ಇದಕ್ಕೆ ಬ್ರೇಕ್ ಬೀಳಲಿದ್ದು, ಮಳೆರಾಯ ಮತ್ತೆ ಧರೆಗೆ ತಂಪೆರೆಯಲು ಸಜ್ಜಾಗಿದ್ದಾರೆ. ಇದೇ ಏಪ್ರಿಲ್ ೨೧ರಿಂದ ೦೩ ದಿನಗಳ ಕಾಲ ಜೋರು ಮಳೆಯಾಗುವ ಸಂಭ ವವಿದೆ ಎಂದು ಭಾರತೀಯ ಹವಾ ಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕರ್ನಾಟಕದ ಮೂರು ಭಾಗಗಳ ಪೈಕಿ ದಕ್ಷಿಣ ಒಳನಾಡಿನ ಬಹುತೇಕ ಎಲ್ಲ ಜಿಲ್ಲೆಗಳಲ್ಲೂ ಗುಡುಗು ಮಿಂಚು ಸಹಿತ ವ್ಯಾಪಕವಾಗಿ ಮಳೆ ಬೀಳುವ ನಿರೀಕ್ಷೆ ಇದೆ. ಮಲೆನಾಡಿನ ಜಿಲ್ಲೆಗಳನ್ನು ಒಳಗೊಂಡಿರುವ ಈ ಭಾಗದ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಆಲಿಕಲ್ಲು ಮಳೆ ಬೀಳಬಹುದು ಎಂದು ಅಂದಾಜಿಸಲಾಗಿದೆ.
ಇನ್ನು ಕೆಲವು ದಿನಗಳ ಹಿಂದಷ್ಟೇ ಸಮುದ್ರ ಮಟ್ಟದಲ್ಲಿ ಗಾಳಿಯಲ್ಲಿ ಹಠಾತ್ ಬದಲಾವಣೆ ಆಗಿತ್ತು. ಹೀಗಾಗಿ ಛತ್ತೀಸ್ಗಢ ಭಾಗದಲ್ಲಿ ಸಮುದ್ರದ ಮೇಲ್ಮೈನಲ್ಲಿ ಸೃಷ್ಟಿಯಾಗಿದ್ದ ಸುಳಿಗಾಳಿ (ಸ್ಟ್ರಫ್) ಕೇರಳ ಮಾರ್ಗವಾಗಿ, ಝಾರ್ಖಂಡ್ ಓರಿಸ್ಸಾ, ಮೂಲಕ ತಮಿಳುನಾಡು ಕರಾವಳಿ ಮೂಲಕ ಹಾದು ಹೋಗಿತ್ತು. ಇದಾದ ಬಳಿಕ ಉಂಟಾದ ಹವಾಮಾನದಲ್ಲಿ ಬದಲಾವಣೆಗಳಿಂದಾಗಿ ಇದೀಗ ಮತ್ತೆ ಏಪ್ರಿಲ್ ೨೧ರಿಂದ ೨೩ರವರೆಗೆ ಕರ್ನಾಟಕಕ್ಕೆ ವರುಣಾಘಾತ ಎದುರಾಗುವ ಸಾಧ್ಯತೆ ಇದೆ.
ಬಳ್ಳಾರಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ತಮಕೂರು, ಚಿತ್ರದುರ್ಗ, ಚಾಮರಾಜನಗರ, ಮೈಸೂರು, ಮಂಡ್ಯ, ಹಾಸನ, ಚಿಕ್ಕಮಗಳೂರು, ಮಡಿಕೇರಿ, ಶಿವಮೊಗ್ಗ ಜಿಲ್ಲೆಗಳ ಹಲವೆಡೆ ವ್ಯಾಪಕ ಮಳೆ ಆಗಲಿದೆ. ಆರಂಭಿಕ ಮೊದಲ ದಿನ (ಏ.೨೧) ಅಷ್ಟಾಗಿ ಮಳೆ ಬಾರದಿರಬಹುದು. ಆದರೆ ನಂತರದ ಎರಡು ದಿನಗಳು ಈ ಜಿಲ್ಲೆಗಳ ಎಲ್ಲ ಪ್ರದೇಶಗಳು ಗುಡುಗು ಮಿಂಚು ಸಹಿತ ಮಳೆ ಕಾಣಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಇದೇ ಅವಧಿಯಲ್ಲಿ ಕರಾವಳಿ ಭಾಗದ ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಹಲವೆಡೆ ಹಗುರದಿಂದ ಸಾಧಾರಣ ಮಳೆ ಬೀಳಬಹುದು. ಇನ್ನೂ ಹೆಚ್ಚು ಒಣ ಹವೇ ಎದುರಿಸುತ್ತಿರುವ ಉತ್ತರ ಒಳನಾಡಿನ ಜಿಲ್ಲೆಗಳಾದ ಬಾಗಲಕೋಟೆ, ಬೆಳಗಾವಿ, ಬೀದರ್, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿಗಳ ಕೆಲವು ಕಡೆಗಳಲ್ಲಿ ಸಾಧಾರಣ ಮಳೆ ಆಗಲಿದೆ.
ಏಪ್ರಿಲ್ ೨೧ರವರೆಗೆ ರಾಜ್ಯದ ಬಹುತೇಕ ಕಡೆಗಳಲ್ಲಿ ಒಣಹವೆ ವಾತಾವರಣ, ಅಧಿಕ ಬಿಸಿಲಿನ ಅಲೆ ಮುಂದುವರಿಯಲಿದೆ. ಈ ವೇಳೆ ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡಿನ ಒಂದೆರಡು ಕಡೆ ತುಂತುರು ಮಳೆ ಬರಬಹುದು ಎಂದು ಇಲಾಖೆಯ ವರದಿ ಮಾಹಿತಿ ನೀಡಿದೆ.