ಚಿಕ್ಕಮಗಳೂರು: ಅಜ್ಜಂಪುರ ತಾಲ್ಲೂಕು ಶಿವನಿ ಗ್ರಾಮದಲ್ಲಿ ಈಗಾಗಲೇ ಎರಡು ಮದ್ಯದಂಗಡಿಗಳಿದ್ದು ಮತ್ತೊಂದು ಹೊಸದಾಗಿ ಮದ್ಯದಂಗಡಿ ತೆರೆಯಲು ಅವಕಾಶ ನೀಡಬಾರದು ಎಂದು ವಿವಿಧ ಮಹಿಳಾ ಸಂಘ ಹಾಗೂ ಗ್ರಾಮಸ್ಥರು ಸೋಮವಾರ ನಗರದ ಆಜಾದ್ಪಾರ್ಕ್ ಪ್ರತಿಭಟನೆ ನಡೆಸಿದರು.
ಶ್ರೀ ರೇವಣ್ಣ ಸಿದ್ದೇಶ್ವರ ಸ್ವಸಹಾಯ ಸಂಘ, ಶ್ರೀ ಬೀರಲಿಂಗೇಶ್ವರ ಸ್ವಸಹಾಯ ಸಂಘ, ಸತ್ಯ ಸಂಘದ ಮಹಿಳೆಯರು ಹಾಗೂ ಶಿವನಿ ಗ್ರಾಮಸ್ಥರು ಪ್ರತಿಭಟನೆ ನಡೆಸಿ ಕುಡಿತದ ದಾಸರಾಗಿರುವವರಿಗೆ ಮತ್ತೊಂದು ಹೊಸದಾಗಿ ಮದ್ಯದಂಗಡಿ ತೆರೆದು ಅವಕಾಶ ಕಲ್ಪಿಸಿದರೆ ಕುಟುಂಬ ಹಾಗೂ ಮಕ್ಕಳು ಬೀದಿ ಬೀಳಲಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಗ್ರಾಮದಲ್ಲಿ ಕುಡಿತದಿಂದ ಅನೇಕ ಕುಟುಂಬಗಳು ಬೀದಿಪಾಲಾಗಿ ಮಕ್ಕಳ ಮುಂದಿನ ಭವಿಷ್ಯ ವಿದ್ಯಾಭ್ಯಾ ಸವಿಲ್ಲದೇ ಮೊಳಕೆಯಲ್ಲಿ ಕರಗುವ ಸ್ಥಿತಿಗೆ ಬಂದೋದಗಿದೆ. ಈಗಾಗಲೇ ಬಾರ್ ಅಂಡ್ ರೆಸ್ಟೋರೆಂಟ್ ಹಾಗೂ ವೈನ್ಶಾಪ್ ಎರಡು ಅಂಗಡಿಗಳಿವೆ. ಆದರೂ ಕೂಡಾ ಹೊಸದಾಗಿ ಎಂ .ಎಸ್.ಐ.ಎಲ್. ಮದ್ಯದ ಅಂಗಡಿಯನ್ನು ತೆರೆಯಲು ಪ್ರಯತ್ನಿಸುತ್ತಿದ್ದು ಇದರಿಂದ ಗ್ರಾಮದ ಹಿಂದುಳಿದ ವರ್ಗದವರಿಗೆ ತೀವ್ರ ತೊಂದರೆಯಾಗಲಿದೆ ಎಂದು ಹೇಳಿದರು.
ಶಿವನಿಯಲ್ಲಿ ಹೆಚ್ಚಿನ ಮಟ್ಟದಲ್ಲಿ ರೈತರು, ಕೂಲಿಕಾರ್ಮಿಕರು, ಹಿಂದುಳಿದ ಜನಾಂಗ ಹಾಗೂ ದಲಿತ ಜನಾಂಗದವರು ವಾಸಿಸುತ್ತಿದ್ದಾರೆ. ಆದ್ದರಿಂದ ಜನರ ಹಿತಕಾಯ್ದುಕೊಳ್ಳಲು ಮತ್ತು ಶಾಂತಿ ಸುವ್ಯವಸ್ಥೆ ಕಾಪಾಡಿಕೊಳ್ಳುವ ಸಲುವಾಗಿ ಗ್ರಾಮದಲ್ಲಿ ಹೊಸದಾಗಿ ಯಾವುದೇ ಮದ್ಯದಂಗಡಿಯನ್ನು ತೆರೆಯಲು ಅವಕಾಶ ನೀಡಬಾರದು ಎಂದು ಒತ್ತಾಯಿಸಿದರು.
ಗ್ರಾಮಸ್ಥರ ಮನವಿಗೆ ಹೊರತುಪಡಿಸಿ ಶಿವನಿ ಗ್ರಾಮದಲ್ಲಿ ಹೊಸದಾಗಿ ಮದ್ಯದಂಗಡಿ ತೆರೆಯಲು ಅನು ಮತಿಯನ್ನು ನೀಡಿದ್ದಲ್ಲಿ ಮಹಿಳಾ ಸಂಘ-ಸಂಸ್ಥೆ, ಶ್ರೀಶಕ್ತಿ ಹಾಗೂ ಗ್ರಾಮಸ್ಥರು ಒಟ್ಟಾಗಿ ಜಿಲ್ಲಾಧಿಕಾರಿ ಕಚೇರಿ ಎದುರು ಅಹೋರಾತ್ರಿ ಹೋರಾಟ ನಡೆಸಲು ತೀರ್ಮಾನಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯ ನಂತರ ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಹಾಗೂ ಅಬಕಾರಿ ಇಲಾಖೆ ಅಧಿಕಾರಿಗಳಿಗೂ ಮನವಿ ಸಲ್ಲಿಸಿ ಹೊಸದಾಗಿ ಮದ್ಯದಂಗಡಿ ತೆರೆಯದಂತೆ ಅನೇಕ ಮಹಿಳೆಯರು ಅಳಲು ತೋಡಿಕೊಂಡರು. ಈ ಸಂದರ್ಭದಲ್ಲಿ ಗ್ರಾಮದ ಮಹಿಳೆಯರಾದ ಸವಿತ, ಹೇಮಾವತಿ, ಮೀನಾಕ್ಷಮ್ಮ, ಗಿರಿಜಮ್ಮ, ಪುಷ್ಪ, ಶಶಿಕಲಾ, ಕಮಾಲಮ್ಮ, ನೇತ್ರಾವತಿ, ಶೃತಿ, ನಂದಿನಿ, ಪ್ರೇಮ, ಶಾಂತಮ್ಮ, ಲಕ್ಷ್ಮಮ್ಮ, ಮಂಜಮ್ಮ, ರಮ್ಯ, ಶಾಂತಮ್ಮ, ಗೀತಾ ಚಂದ್ರಮ್ಮ ಮತ್ತಿತರರು ಹಾಜರಿದ್ದರು.