ಚಿಕ್ಕಮಗಳೂರು: ಕೆರೆ ನೀರು ಕಲುಷಿತಗೊಂಡು ಸಾವಿರಾರು ಮೀನುಗಳು ಸತ್ತಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಸಖ ರಾಯಪಟ್ಟಣ ಸಮೀಪದ ಜೋಡಿ ಲಿಂಗದಹಳ್ಳಿ ಗ್ರಾಮದಲ್ಲಿ ನಡೆದಿದೆ.
ಕೆರೆ ನೀರು ಕಲುಷಿತಗೊಂಡಿದ್ದೋ, ಅಥವಾ ಕಿಡಿಗೇಡಿಗಳು ಕೆರೆಗೆ ವಿಷ ಹಾಕಿದ್ದರಿಂದ ಮೀನುಗಳು ಸಾವನ್ನಪ್ಪಿವೆಯೋ ಎಂಬುದು ಸ್ಪಷ್ಟವಿಲ್ಲ. ಆದರೆ, ಕೆರೆಯ ದಡದಲ್ಲಿ ಸಾವಿರಾರು ಮೀನುಗಳು ಸತ್ತು ತೇಲುತ್ತಿರುವುದು ಮಾತ್ರ ಕಂಡು ಬಂದಿದೆ. ಜೋಡಿ ಲಿಂಗದಹಳ್ಳಿಯ ನೂರಾರು ರೈತರು ಇದೇ ಕೆರೆ ನೀರನ್ನ ಉಪಯೋಗಿಸುತ್ತಿದ್ದಾರೆ.
ಸುಮಾರು ೫೭ ಎಕರೆಯನ್ನು ಮೀನು ಸಾಕಾಣಿಕೆಗೆ ಗುತ್ತಿಗೆ ಪಡೆದು ಒಂದು ಲಕ್ಷಕ್ಕೂ ಅಧಿಕ ಮೀನುಗಳನ್ನ ಕೆರೆಗೆ ಬಿಡಲಾಗಿತ್ತು. ಜಾನುವಾರಗಳು ಹಾಗೂ ಹಳ್ಳಿಗರು ನಿತ್ಯ ಉಪಯೋಗಕ್ಕೆ ಇದೇ ನೀರನ್ನು ಬಳಸುತ್ತಿದ್ದು, ಇದೀಗ ಕೆರೆಯಲ್ಲಿ ಮೀನುಗಳ ಸಾವಿನಿಂದ ಗ್ರಾಮಸ್ಥರು ಆತಂಕಗೊಂಡಿದ್ದಾರೆ.
ಕೆರೆಯಲ್ಲಿ ಮೀನುಗಳ ಸಾವಿನಿಂದ ಗ್ರಾಮದಲ್ಲಿ ಸಾಂಕ್ರಾಮಿಕ ರೋಗದ ಆತಂಕ ಕಾಡುತ್ತಿದ್ದು ವೈಯಕ್ತಿಕ ದ್ವೇಷದ ಹಿನ್ನೆಲೆ ಕೆರೆಗೆ ವಿಷ ಹಾಕಿರುವ ಶಂಕೆ ವ್ಯಕ್ತವಾಗಿದೆ. ಸಖರಾಯಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ದುರ್ವಾಸನೆಯಿಂದ ಆರೋಗ್ಯ ತಪ್ಪುವ ಭೀತಿ: ಜೋಡಿಲಿಂಗದಹಳ್ಳಿ ಕೆರೆಯಲ್ಲಿ ಸಾವಿರಾರು ಮೀನುಗಳು ಸಾವನ್ನಪ್ಪಿದ್ದು ಕಳೆದ ಮೂರ್ನಾಲ್ಕು ದಿನದಿಂದ ವಿಪರೀತವಾದ ದುರ್ವಾಸನೆ ಬರುತ್ತಿದೆ. ಕೆರೆಯ ಅಕ್ಕಪಕ್ಕದ ಹಳ್ಳಿಯ ಜನರು ಓಡಾಡಲು ಒಂದು ಕ್ಷಣ ಯೋಚಿಸುವಂತ ಪರಿಸ್ಥಿತಿ ಬಂದೊದಗಿದೆ. ಇಂತಹ ಕೆಟ್ಟ ವಾಸನೆಯಿಂದ ಕೂಡಿದ ಗಾಳಿ ಸೇವನೆಯಿಂದ ಆರೋಗ್ಯ ತಪ್ಪುವ ಭೀತಿ ಸುತ್ತಮುತ್ತಲ ಗ್ರಾಮಮಸ್ಥರಲ್ಲಿ ಮನೆ ಮಾಡಿದೆ. ಕೂಡಲೆ ಸ್ಥಳೀಯ ಗ್ರಾಮ ಪಂಚಾಯ್ತಿ ಹಾಗೂ ಸಂಬಂಧಪಟ್ಟ ಇಲಾಖೆಯವರು ಇತ್ತ ಗಮನಹರಿಸಿ ಸತ್ತಿರುವ ಮೀನುಗಳನ್ನು ತೆಗೆದುಹಾಕಬೇಕೆಂದು ಆಗ್ರಹಿಸಿದ್ದಾರೆ.
ಕೆರೆ ನೀರು ಬಳಸದಂತೆ ಡಂಗುರ ಹಾಕಿಸಿದ ಗ್ರಾ.ಪಂ: ಮೂರ್ನಾಲ್ಕು ದಿನಗಳಿಂದ ನಿರಂತರವಾಗಿ ಮೀನುಗಳು ಸತ್ತು ಬೀಳುವುರೊಂದಿಗೆ ಕೆರೆ ನೀರು ಕಲುಷಿತವಾಗಿರುವುದರಿಂದ ಜೋಡಿ ಲಿಂಗದಹಳ್ಳಿ ಕೆರೆಯ ಅಕ್ಕಪಕ್ಕದಲ್ಲಿರುವ ಲಿಂಗದಹಳ್ಳಿ ತಾಂಡ್ಯ, ತಿರುಮಲ ದೇವರಹಳ್ಳಿ, ಮಲ್ಲಿಗೇನಹಳ್ಳಿ, ಹನುಮನಹಳ್ಳಿ, ನೀಲೇನಹಳ್ಳಿ, ಕಂಬದೇವರ ಹಟ್ಟಿ, ಬೀರನಹಳ್ಳಿ ಗ್ರಾಮಗಳಲ್ಲಿ ಎಸ್ ಬಿದರೆ ಗ್ರಾಮ ಪಂಚಾಯ್ತಿ ವತಿಯಿಂದ ಸಾರ್ವಜನಿಕರು ಕೆರೆಯ ನೀರನ್ನು ಬಳಸದಂತೆ ಹಾಗೂ ಜಾನುವಾರುಗಳಿಗೂ ಆ ನೀರನ್ನು ಕುಡಿಸದಂತೆ ಮುನ್ನಚ್ಚರಿಕಾ ಕ್ರಮವಾಗಿ ಡಂಗುರ ಹಾಕಿಸಲಾಗಿದೆ.
ಜೋಡಿ ಲಿಂಗದಹಳ್ಳಿ ಕೆರೆಯನ್ನು ಮೀನುಗಾರಿಕೆಗೆಂದು ಶ್ರೀ ಶಂಭುಲಿಂಗೇಶ್ವರ ಸ್ವಾಮಿ ದೇವಸ್ಥಾನದ ವತಿಯಿಂದ ನಡೆಸಿದ್ದ ಹರಾಜಿನಲ್ಲಿ ೨ ಲಕ್ಷದ ೮೧ ಸಾವಿರ ರೂ.ಗೆ ೨ ವರ್ಷದ ಅವಧಿಗೆ ಟೆಂಡರ್ ಕೂಗಿಕೊಳ್ಳಲಾಗಿತ್ತು. ಬಳಿಕ ಒಂದೂವರೆ ಲಕ್ಷ ಮೀನು ಮರಿಯನ್ನು ತಂದು ಬಿಟ್ಟಿದ್ದೆವು. ನೀರು ಕಲುಷಿತಗೊಂಡು ಸಾವಿರಾರು ಮೀನುಗಳು ಸಾವನ್ನಪ್ಪಿದ್ದು. ಈ ದುರ್ಘಟನೆಯಿಂದ ಮೂರ್ನಾಲ್ಕು ಲಕ್ಷ ರೂ. ನಷ್ಟ ಉಂಟಾಗಿದೆ. ಸಂಬಂಧಪಟ್ಟ ಇಲಾಖೆಯವರು ನಮ್ಮ ನೆರವಿಗೆ ದೇವಸ್ಥಾನದ ಆಡಳಿತ ಮಂಡಳಿ ಬರಬೇಕೆಂದು ಟೆಂಡರ್ ದಾರ ಸೋಮಶೇಖರ್ ಮನವಿ ಮಾಡಿದ್ದಾರೆ.