ಚಿಕ್ಕಮಗಳೂರು: ಬಾಳೆಹೊನ್ನೂರಿನ ಶ್ರೀ ರಂಭಾಪುರಿ ಪೀಠ ದಕ್ಷಿಣ ಭಾರತದ ಕಾಶಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಬಾಳೆಹೊನ್ನೂರಿನ ಶ್ರೀ ರಂಭಾಪುರಿ ಪೀಠದಲ್ಲಿ ನಡೆದ ಜಗದ್ಗುರು ಶ್ರೀ ರೇಣುಕಾಚಾರ್ಯ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಾರಣಾಸಿ ಕ್ಷೇತ್ರ ಉತ್ತರ ಭಾರತದ ಕಾಶಿಯಾಗಿದೆ. ಅದೇರೀತಿ ಬಾಳೆಹೊನ್ನೂರು ರಂಭಾಪುರಿ ಪೀಠ ದಕ್ಷಿಣದ ಕಾಶಿಯಾಗಿದೆ. ಇದಕ್ಕೆ ಮೂಲ ಕಾರಣ ಪೀಠದ ಇಂದಿನ ಜಗದ್ಗುರು ಶ್ರೀ ಪ್ರಸನ್ನ ವೀರ ಸೋಮೇಶ್ವರ ಶಿವಾಚಾರ್ಯ ಭಗವತ್ಪಾದ ಸ್ವಾಮೀಜಿಯವರು ಎಂದರು.
ಜಗದ್ಗುರು ಶ್ರೀ ಪ್ರಸನ್ನ ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದ ಸ್ವಾಮೀಜಿಯವರ ವಿಚಾರಧಾರೆ ಅವರ ಸಂಕಲ್ಪ ಅವರು ರಾಜ್ಯವಲ್ಲದೆ ತಮಿಳುನಾಡು ಆಂಧ್ರ ಮಹಾರಾಷ್ಟ್ರ ಸೇರಿದಂತೆ ಹೊರ ರಾಜ್ಯಗಳ ಜನರಲ್ಲಿ ಭಕ್ತಿಯ ಬೀಜವನ್ನು ಬಿತ್ತಿರುವುದು ಸಂಪ್ರದಾಯ ಸಂಸ್ಕಾರ ಸಂಸ್ಕೃತಿಯನ್ನು ಬೆಳೆಸಿರುವುದು ಭವಿಷ್ಯಕ್ಕೆ ಭದ್ರಬುನಾದಿಯಾಗಿದೆ ಎಂದರು.
ಜಗದ್ಗುರು ರೇಣುಕಾಚಾರ್ಯರ ಮಾನವ ಧರ್ಮಕ್ಕೆ ಜಯವಾಗಲಿ ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಸಂದೇಶವನ್ನು ಮತ್ತು ವೀರಶೈವಸಿದ್ದಾಂತಶಿಖಾಮಣಿಯನ್ನು ಎಲ್ಲರೂ ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡಲ್ಲಿ ನಮ್ಮ ಬದುಕಿನಲ್ಲಿ ದುಃಖ ಬರಲು ಸಾಧ್ಯವಿಲ್ಲ .ಸುಖ ಸಂತೋಷ ನೆಮ್ಮದಿಯಿಂದ ಬದುಕಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಒಂದು ಕಾಲದಲ್ಲಿ ಭಕ್ತರು ಮಠಕ್ಕೆ ಬರಬೇಕಾಗಿತ್ತು ಆದರೆ ಇಂದು ರಂಭಾಪುರಿ ಪೀಠವೇ ಭಕ್ತರ ಬಳಿಗೆ ತೆರಳುತ್ತಿದೆ ಜಗದ್ಗುರು ಶ್ರೀ ವೀರ ಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿಯವರು ರಾಜ್ಯದಲ್ಲಿ ಭೇಟಿ ನೀಡದ ಹಳ್ಳಿಗಳು ಮತ್ತು ಊರುಗಳೇ ಇಲ್ಲ ಅವರು ಇಡೀ ರಾಜ್ಯದ ಎಲ್ಲಾ ಕಡೆ ತಿರುಗಿ ಜನರಲ್ಲಿ ಧರ್ಮ ಜಾಗೃತಿ ಮೂಡಿಸುತ್ತಿದ್ದಾರೆ ಅವರಲ್ಲಿ ಸಂಪ್ರದಾಯ ಸಂಸ್ಕಾರ ಸಂಸ್ಕೃತಿಯನ್ನು ನಿರಂತರವಾಗಿ ಬೆಳೆಸುತ್ತಿದ್ದಾರೆ ಹಾಗಾಗಿ ಇಂದು ಎಲ್ಲೆಡೆ ಧರ್ಮ ಜಾಗೃತಿಯಾಗಿದೆ ಅದರ ಶ್ರೇಯಸ್ಸು ಜಗದ್ಗುರುಗಳಿಗೆ ಸಲ್ಲುತ್ತದೆ ಎಂದು ಹೇಳಿದರು.
ಜಗದ್ಗುರು ಶ್ರೀ ಪ್ರಸನ್ನ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿಯವರು ಬಹಳ ಪರಿಶ್ರಮದಿಂದ ಪೀಠವನ್ನು ಬೆಳೆಸಿ ಅಭಿವೃದ್ಧಿಗೊಳಿಸಿದ್ದಾರೆ ಜಾತಿ ಮತ ಧರ್ಮದ ಭೇದಗಳನ್ನು ತೊಡೆದುಹಾಕಿ ಮಾನವರೆಲ್ಲರೂ ಒಂದೇ ಎಂದು ಸಾರುವ ಕೆಲಸ ಮಾಡುತ್ತಿದ್ದಾರೆ ಎಂದ ಮುಖ್ಯಮಂತ್ರಿಗಳು ನಾವು ಸಹ ಬಸವಣ್ಣನವರ ವಚನದಂತೆ ಇವನಾರವ ಇವನಾರವ ಎನ್ನದೆ ಇವ ನಮ್ಮ ಯುವ ನಮ್ಮವ ಎಂಬಂತೆ ಬಾಳೋಣ ಎಂದು ತಿಳಿಸಿದರು.
ಕೇಂದ್ರ ಸಚಿವ ಶ್ರೀ ಪ್ರಹ್ಲಾದ್ ಜೋಶಿ ಮಾತನಾಡಿ ಜಗತ್ತಿನ ಅಭಿವೃದ್ಧಿ ಹೊಂದಿದ ದೇಶಗಳು ಮತ್ತು ಶ್ರೀಮಂತ ದೇಶಗಳಿಗೆ ಹೋಲಿಸಿದರೆ ನಮ್ಮ ದೇಶದ ಜನ ಶಾಂತಿ ಮತ್ತು ನೆಮ್ಮದಿಯಿಂದ ಇದ್ದಾರೆ ಇದಕ್ಕೆ ಮೂಲ ಕಾರಣ ಅವರ ಧರ್ಮಚರಣೆ ಮತ್ತು ಭಗವಂತನ ಮೇಲೆ ಅವರಿಗಿರುವ ನಂಬಿಕೆ ಎಂದರು.
ಧರ್ಮವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ರಂಭಾಪುರಿ ಪೀಠ ಸೇರಿದಂತೆ ಮಠ ಮಂದಿರಗಳು ಶ್ರಮಿಸುತ್ತಿವೆ ಹಾಗಾಗಿ ರಾಜ್ಯದಲ್ಲಿ ಬಿಎಸ್ ಯಡಿಯೂರಪ್ಪನವರ ಸರ್ಕಾರ ಮತ್ತು ಬಸವರಾಜ ಬೊಮ್ಮಾಯಿ ಅವರ ಸರ್ಕಾರ ಅವುಗಳಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತಿವೆ ಎಂದು ತಿಳಿಸಿದರು.
ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ್ ಮಾತನಾಡಿದರು. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪರವರಿಗೆ ರೇಣುಕಾಚಾರ್ಯ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ಮುಖ್ಯಮಂತ್ರಿಗಳ ಕಾರ್ಯದರ್ಶಿ ಡಿ.ಎನ್. ಜೀವರಾಜ್, ಶಾಸಕರಾದ ಸಿ.ಟಿ. ರವಿ, ಎಂ.ಪಿ. ಕುಮಾರಸ್ವಾಮಿ, ಡಿ.ಎಸ್. ಸುರೇಶ್, ಜಿಲ್ಲಾಧಿಕಾರಿ ಕೆ.ಎನ್. ರಮೇಶ್, ಜಿ.ಪಂ. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಜಿ. ಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾಪ್ರಶಾಂತ್ ಉಪಸ್ಥಿತರಿದ್ದರು.