ಚಿಕ್ಕಮಗಳೂರು: ನಗರದ ಪ್ರಜಾಪಿತ ಬ್ರಹ್ಮಾಕುಮಾರೀಸ್ ಈಶ್ವರೀಯ ವಿಶ್ವ ವಿದ್ಯಾಲಯ, ಜ್ಞಾನ ಪ್ರಕಾಶ ಭವನದಲ್ಲಿ ೫ ದಿನಗಳ ಕಾಲ ನಡೆಯುವ ಬಾಲ ವ್ಯಕ್ತಿತ್ವ ಸರ್ವಾಂಗೀಣ ವಿಕಾಸ ಶಿಬಿರದ ಉದ್ಘಾಟನಾ ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಪತ್ನಿ ರಜನಿ ಜಿ.ಪ್ರಭು ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು ಭಾರತದಲ್ಲಿ ಆಧ್ಯಾತ್ಮಿಕತೆಗೆ ವಿಶೇಷ ಮಹತ್ವ ಇದೆ, ಇಂತಹ ಕಾರ್ಯಕ್ರಮ ಗಳು ಮಕ್ಕಳ ಸೃಜನಾತ್ಮಕ ಬೆಳವಣಿಗೆಗೆ ಸಹಕಾರಿಯಾಗುತ್ತದೆ ಎಂದರು.
ಕಾರ್ಯಕ್ರಮದ ಮುಖ್ಯ ಅತಿಥಿಗ ಳಾದ ಜಿಲ್ಲಾ ಆಸ್ಪತ್ರೆಯ ಡಾ.ವಿನಯ್ ಮಾತನಾಡಿ ಮಕ್ಕಳು ಬೆಳವಣಿಗೆಯ ಜೊತೆಗೆ ಒಳ್ಳೆಯ ಸಂಸ್ಕಾರಗಳನ್ನು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು. ಸರ್ವೋದಯ ಸಂಸ್ಥೆಯ ಸಿದ್ದರಾಮು, ಬ್ರಹ್ಮಾಕುಮಾರೀಸ್ ಜಿಲ್ಲಾ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಾಕುಮಾರಿ, ಭಾಗ್ಯ ಮತ್ತಿತರರು ಪಾಲ್ಗೊಂಡಿದ್ದರು.
ಶಿಬಿರವು ಮೌಲ್ಯ ಶಿಕ್ಷಣದ ಗೇಮ್ಸ್, ಚಿತ್ರಕಲೆ, ಕ್ರಾಫ್ಟ್, ಆರೋಗ್ಯದ ಬಗ್ಗೆ ಮಾಹಿತಿ, ದೇಶಭಕ್ತಿ, ಕ್ವಿಜ್, ಮೆಮೋರಿ ಟೆಸ್ಟ್, ಯೋಗಾಸನ, ಪ್ರಾಣಾಯಾಮ, ಆಧ್ಯಾತ್ಮಿಕ ಅದ್ಬುತ ರಹಸ್ಯ, ಪ್ರಬಂಧ ಇನ್ನಿತರ ವಿಷಯಗಳಿಂದ ಕೂಡಿರುತ್ತದೆ. ೫ ದಿನಗಳ ಕಾಲ ಶಿಬಿರ ಮುಂದುವರಿಯುತ್ತಿದೆ.
ಶಿಬಿರದಲ್ಲಿ ೧೦೦ ಜನ ಮಕ್ಕಳು, ಈಶ್ವರೀಯ ವಿದ್ಯಾರ್ಥಿಗಳು(ಶಿಕ್ಷಕರು) ಭಾಗವಹಿಸಿದ್ದರು. ಎಲ್ಲರಿಗೂ ಶಿವಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.