ಚಿಕ್ಕಮಗಳೂರು: ನಾನು ಯಾವುದೇ ಜಾತಿ ಬೇಧ ಮಾಡದೆ ಅಭಿವೃದ್ಧಿ ಕೆಲಸಗಳಿಗೆ ಮೊದಲ ಆಧ್ಯತೆ ನೀಡಿ ಕೆಲಸ ಮಾಡಿ ಜನರ ಪ್ರೀತಿ ವಿಶ್ವಾಸ ಗೆದ್ದಿದ್ದೇವೆ ಎಂದು ಶಾಸಕ ಸಿ.ಟಿ.ರವಿ ತಿಳಿಸಿದರು.
ಇಂದಿರಾಗಾಂಧಿ ಬಡಾವಣೆಯ ಕಲ್ದೋಡ್ಡಿಯಲ್ಲಿ ನಗರಸಭೆ ವತಿಯಿಂದ ಇಂದಿರಾಗಾಂಧಿ, ರಾಜೀವ್ಗಾಂಧಿ, ವಾಜ ಪೇಯಿ ಬಡಾವಣೆಯ ಫಲಾನುಭವಿಗಳಿಗೆ ಹಕ್ಕಪತ್ರಗಳನ್ನು ವಿತರಿಸಿ ಮಾತನಾಡಿ ಹಕ್ಕುಪತ್ರಕ್ಕಾಗಿ ಹಲವು ವರ್ಷಗಳಿಂದ ಕಾತುರದಿಂದ ಕಾಯುತ್ತಿದ್ದ ದಿನವಿಂದು ಬಂದಿದೆ, ಈ ಭಾಗದ ಜನರ ಸಮಸ್ಯೆಗಳ ಧ್ವನಿಯಾಗಿ ಕೆಲಸ ಮಾಡುತ್ತಿದ್ದ ಗಣೇಶ್, ಜೋಸೆಫ್, ಅನ್ವರ್, ರಿಜೇಶ್, ಹಾಲಮ್ಮ, ಕಬೀರ್ ಇನ್ನೂ ಅನೇಕರು ನಮ್ಮ ಹೋರಾ ಟದಲ್ಲಿ ಜತೆಯಲ್ಲಿ ಜೊತೆಯಾಗಿ ಶಕ್ತಿಯಾಗಿ ನಿಂತವರು, ಅತಿವೃಷ್ಟಿ ಸಂದರ್ಭದಲ್ಲಿ ಯಗಚಿ ಹಳ್ಳದ ಬದಿಯಲ್ಲಿದ್ದವರನ್ನು ಈ ಬಡಾವಣೆಗೆ ಸ್ಥಳಾಂತರಿಸಲಾಯಿತು, ಯಾವುದೇ ಸವಲತ್ತುಗಳು ಇಲ್ಲದೆ ಜನರು ಬರಲು ಹೆದರುತ್ತಿದ್ದಂತಹ ಸ್ಥಳವಾಗಿತ್ತು, ನಾನು ಎಮ್.ಎಲ್.ಎ ಆಗುವುದಕ್ಕೂ ಮೊದಲು ನಾವು ಹೋರಾಟವನ್ನು ಪ್ರಾರಂಭ ಮಾಡಲಾಯಿತು, ಯೋಗ ಎಂಬಂತೆ ಅದೇ ಸಂದರ್ಭದಲ್ಲಿ ಎಂ.ಎಲ್.ಎ ಆಗಿ ಆಯ್ಕೆಗೊಂಡೆ ಎಂದರು.
ನಾನು ಮೊದಲಬಾರಿ ಎಂ.ಎಲ್.ಎ ಆಗಿ ಆಯ್ಕೆಗೊಂಡ ತಕ್ಷಣ ವಿದ್ಯುತ್ ಸೌಲಭ್ಯ ನೀಡುವ ಕೆಲಸವನ್ನು ಮಾಡಿದೆ, ನಂತರ ಹಂತ-ಹಂತವಾಗಿ ಮೂಲಭೂತ ಸೌಕರ್ಯಗಳನ್ನು ಮಾಡಿ ಇಂದು ಸುವ್ಯವಸ್ಥಿತವಾದ ಬಡಾವಣೆಯಾಗಿ ಬದಲಾಗಿದೆ, ಇದಕ್ಕೆಲ್ಲ ಕಾರಣ ನೀವು ಮತ ನೀಡಿ ನನಗೆ ಕೊಟ್ಟ ಶಕ್ತಿ, ಆ ಶಕ್ತಿಯನ್ನು ಉಪಯೋಗಿಸಿ ಕೆಲಸವನ್ನು ಮಾಡಿದ್ದೇನೆ, ವಾಜಪೇಯಿ ಬಡಾವಣೆಯಿಂದ ನಗರಾಭಿವೃದ್ಧಿ ಪ್ರಾಧಿಕಾರ ೫೫ ಕೋಟಿ ರೂ ಲಾಭವನ್ನು ಗಳಿಸಿದ್ದು ೫೦೦ ರಿಂದ ೬೦೦ ರೂಗಳಿಗೆ ನೀಡಿದ ಜಾಗವು ಇಂದು ೨೦೦೦ ವರೆಗೂ ಮಾರಾಟವಾಗುತ್ತಿದೆ ಎಂದರು.
ಚಿಕ್ಕಮಗಳೂರು ಜಿಲ್ಲೆಗೆ ೬೩೦ ಕೋಟಿ ರೂ ವೆಚ್ಚದ ಮೆಡಿಕಲ್ ಕಾಲೇಜು ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಂಜೂರು ಮಾಡಿ ಕಟ್ಟಡ ಕೆಲಸ ವೇಗಗತಿಯಲ್ಲಿ ನಡೆಯುತ್ತಿದ್ದು ಮೊದಲ ವರ್ಷದ ಕಾಲೇಜು ಪ್ರಾರಂಭ ಮಾಡಲಾಗಿದೆ, ನಾನು ಯಾವುದೇ ಜಾತಿ ಬೇದ ಮಾಡದೆ ಕೆಲಸವನ್ನು ಮಾಡಿದ್ದೇನೆ ಎಂದರು.
ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ , ನಗರ ಆಶ್ರಯ ಸಮಿತಿ ಅಧ್ಯಕ್ಷ ನಾರಾಯಣಸ್ವಾಮಿ ನಗರಸಭೆ ಉಪಾಧ್ಯಕ್ಷೆ ಉಮಾದೇವಿಕೃಷ್ಣಪ್ಪ, ನಗರಸಭೆ ಆಯುಕ್ತ ಉಮೇಶ್, ನಗರಸಭೆ ಸದಸ್ಯರುಗಳಾದ ಮಣಿಕಂಠ, ಟಿ.ರಾಜ ಶೇಖರ್, ರೂಪ, ಪುಷ್ವಮೋಹನ್, ಅರುಣ, ರಾಜು, ಅಮೃತೇಶ್, ರಾಬರ್ಟ್, ರವಿ, ಕುಮಾರ್, ಬಸವರಾಜ್, ಮಂಜು, ಮಲ್ಲೇಶ್, ಆಶ್ರಯ ಸಮಿತಿ ಸದಸ್ಯರಾದ ನವೀನ್, ರಾಜೇಶ್, ಜೇಮ್ಸ್, ಮತ್ತಿತತರು ಉಪಸ್ಥಿತರಿದ್ದರು.