ಸಖರಾಯಪಟ್ಟಣ: ಚಿಕ್ಕಮಗಳೂರು ತಾಲೂಕಿನ ಬಿಳೇಕಲ್ಲಹಳ್ಳಿ, ಲಕ್ಕುಮ್ಮನಹಳ್ಳಿ, ಹಿರೇಗೌಜ, ಲಕ್ಯಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಅಸಮರ್ಪಕ ವಿದ್ಯುತ್ ಸರಬರಾಜು ಹಾಗೂ ವಿದ್ಯುತ್ ಪ್ರಸರಣ ಕೇಂದ್ರ ಮಂಜೂರು ಮಾಡದಿರುವುದನ್ನು ಖಂಡಿಸಿ ಉದ್ದೆಬೋರನಹಳ್ಳಿ ಗ್ರಾಮದಲ್ಲಿ ಸಖರಾಯಪಟ್ಟಣ ಬ್ಲಾಕ್ ಕಾಂಗ್ರೆಸ್ ಮುಖಂಡರು ಪ್ರತಿಭಟನೆ ನಡೆಸಿದರು.
ಉದ್ದೆಬೋರನಹಳ್ಳಿ ಗ್ರಾಮದಲ್ಲಿ ಪ್ರತಿಭಟನೆ ನಡೆಸಿ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುಖಂಡರು ಶಾಸಕ ಸಿ.ಟಿ.ರವಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಸಮರ್ಪಕ ವಿದ್ಯುತ್ ನೀಡುವಂತೆ ಆಗ್ರಹಿಸಿದರು.
ಕಾಂಗ್ರೆಸ್ ಮುಖಂಡ ಎಚ್.ಡಿ.ತಮ್ಮಯ್ಯ ಮಾತನಾಡಿ, ರೈತರ ಸಮಸ್ಯೆಗಳನ್ನು ಬಗೆಹರಿಸದ ಈ ಸರ್ಕಾರ ಮತ್ತು ಇಲ್ಲಿನ ಶಾಸಕ ಸಿ.ಟಿ.ರವಿಯನ್ನು ಮುಂಬರುವ ಚುನಾವಣೆಯಲ್ಲಿ ಮಾಜಿ ಶಾಸಕರನ್ನಾಗಿ ಮಾಡುವುದೇ ನಮ್ಮೆಲ್ಲರ ಗುರಿಯಾಗಬೇಕು ಎಂದರು.
ನಮ್ಮಗೆ ರಾಜ್ಯ ರಾಷ್ಟ್ರಕ್ಕೆ ಕೆಲಸ ಮಾಡುವ ಶಾಸಕ ಬೇಡ, ಚಿಕ್ಕಮಗಳೂರಿಗೆ ಕ್ಷೇತ್ರಕ್ಕೆ ಸೀಮಿತವಾಗಿ ಕೆಲಸ ಮಾಡುವಂತೆ ಶಾಸಕರನ್ನು ಗೆಲ್ಲುವ ವಿಶ್ವಾಸವಿದೆ ಎಂದ ಅವರು, ಸಿ.ಟಿ.ರವಿ ಅವರನ್ನು ಅಕ್ರಮಗಳನ್ನು ಬಯಲಿಗೆಳೆಯಲಾಗುವುದು ಎಂದರು.
ಕೆಪಿಸಿಸಿ ಮಹಿಳಾ ವಿಭಾಗದ ಉಪಾಧ್ಯಕ್ಷೆ ರೇಖಾ ಹುಲಿಯಪ್ಪಗೌಡ ಮಾತನಾಡಿ, ಇಲ್ಲಿನ ರೈತರ ಸಮಸ್ಯೆಗಳನ್ನು ಆಲಿಸಬೇಕಿದ್ದ ಶಾಸಕ ಸಿ.ಟಿ.ರವಿ. ಕ್ಷೇತ್ರವನ್ನು ನಿರ್ಲಕ್ಷ್ಯಿಸಿದ್ದಾರೆ. ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸದೆ ದೇಶ ಸಂಚಾರ ಮಾಡುತ್ತಿದ್ದಾರೆ ಎಂದು ದೂರಿದರು.
ಗ್ರಾಮೀಣ ಪ್ರದೇಶದ ಭಾಗದಲ್ಲಿ ಸಮರ್ಪಕ ವಿದ್ಯುತ್ ವಿತರಣೆಯಾಗದಿರುವುದ ರಿಂದ ರೈತರು ಸಕಾಲದಲ್ಲಿ ಜಮೀನುಗಳಿಗೆ ನೀರು ಹಾಯಿಸಲು ಸಾಧ್ಯವಾಗುತ್ತಿಲ್ಲ. ಮೋಟಾರ್ಗಳು ಸುಟ್ಟು ಹೋಗುತ್ತಿವೆ. ಬೆಳೆಗಳು ನಾಶವಾಗುತ್ತಿವೆ ಎಂದ ಅವರು, ರಾತ್ರಿ ವೇಳೆಯಲ್ಲಿ ವಿದ್ಯುತ್ ನೀಡಲಾಗುತ್ತಿದೆ. ಈ ಭಾಗದಲ್ಲಿ ಚಿರತೆ ಕಾಟ ಇರುವು ದರಿಂದ ರೈತರು ಭಯಪಡುವ ಸ್ಥಿತಿಯೂ ಇದೆ ಎಂದರು.
ಬಿಳೇಕಲ್ಲಹಳ್ಳಿ, ಲಕ್ಕುಮ್ಮನಹಳ್ಳಿ, ಹಿರೇಗೌಜ, ಲಕ್ಯಾ ಗ್ರಾಮ ಪಂಚಾಯತ್ ವ್ಯಾಪ್ತಿ ಯಲ್ಲಿ ಸಮರ್ಪಕ ವಿದ್ಯುತ್ ಸರಬರಾಜು ವ್ಯವಸ್ಥೆಯನ್ನು ಕಲ್ಪಿಸಬೇಕು ಮತ್ತು ವಿದ್ಯುತ್ ಪ್ರಸರಣ ಕೇಂದ್ರ ನಿರ್ಮಾಣಕ್ಕೆ ಮುಂದಾಗಬೇಕು. ಒಂದು ವೇಳೆ ನಿರ್ಲಕ್ಷ್ಯವಹಿಸಿದಲ್ಲಿ ಮೇಸ್ಕಾಂ ಕಚೇರಿ ಮುತ್ತಿಗೆ ಹಾಕುವುದಾಗಿ ಎಚ್ಚರಿಸಿದರು.
ಕಾಂಗ್ರೆಸ್ ಮುಖಂಡ ಎ.ಎನ್.ಮಹೇಶ್ ಮಾತನಾಡಿ, ೨೦೦೮ರಲ್ಲಿ ದಿ.ಧರ್ಮೇಗೌಡರು ಶಾಸಕರಾಗಿದ್ದ ಅವಧಿಯಲ್ಲಿ ವಿದ್ಯುತ್ ಪ್ರಸರಣ ಕೇಂದ್ರ ಮಂಜೂರಾಗಿದ್ದರೂ ಅದನ್ನು ಕಾರ್ಯರೂಪಕ್ಕೆ ತರುವ ಕೆಲಸವನ್ನು ಇಂದಿನ ಶಾಸಕ ಸಿ.ಟಿ.ರವಿ ಮಾಡಿಲ್ಲ, ಅಡಿಕೆ ತೆಂಗಿನ ಗಿಡ ತರಕಾರಿ ಬೆಳೆಯಲು ಸಾಧ್ಯವಾಗುತ್ತಿಲ್ಲ ಎಂದರು.
ಶಾಸಕ ಸಿ.ಟಿ.ರವಿ ರೈತರ ಪಾಲಿಗೆ ಭೂತವಾಗಿ ಕಾಡುತ್ತಿದ್ದು, ನೀರಾವರಿ ಯೋಜನೆಗಳನ್ನು ಮಾಡಿಲ್ಲ. ಬೆಳವಾಡಿ ಕೆರೆ ಮಳೆಯಿಂದ ತುಂಬಿದೆ. ಆದರೆ, ಆಧುನಿಕ ಭಗೀರಥ ಪೋಸ್ಟರ್ ಹಾಕಿಸಿಕೊಂಡಿದ್ದು ನಾಚೀಕೆಗೇಡಿನ ಸಂಗತಿ ಎಂದು ಜರಿದರು.
ಯಾವುದೇ ನೀರಾವರಿ ಯೋಜನೆಗಳು ಪೂರ್ಣಗೊಂಡಿಲ್ಲ. ವಿದ್ಯುತ್ ಸಮಸ್ಯೆ ನಿರಂತರವಾಗಿ ಕಾಡುತ್ತಿದ್ದು ವಿದ್ಯಾರ್ಥಿಗಳಿಗೆ, ರೈತರಿಗೆ, ಗೃಹಿಣಿಯರಿಗೆ ತೊಂದರೆ ಯಾಗುತ್ತಿದೆ. ಆದರೆ, ಇದರ ಬಗ್ಗೆ ಗಮನಹರಿಸುತ್ತಿಲ್ಲ ಎಂದು ದೂರಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಡಿಮನೆ ಸತೀಶ್ ಮಾತನಾಡಿ, ಬಡವರ ಬದುಕಿನ ಬಗ್ಗೆ ಶಾಸಕ ಸಿ.ಟಿ.ರವಿ ಚಿಂತನೆ ಮಾಡುತ್ತಿಲ್ಲ. ದುಡ್ಡು ಮಾಡುವುದರ ಬಗ್ಗೆ ಚಿಂತನೆ ಮಾಡುತ್ತಿದ್ದಾರೆ. ರಸ್ತೆಗಳನ್ನು ಕಿತ್ತು ಡಾಂಬರ್ ಹಾಕಿ ದುಡ್ಡು ಮಾಡುವುದೇ ಕಾಯಕವಾಗಿದೆ ಎಂದು ಟೀಕಿಸಿದರು.
ಪ್ರತಿಭಟನೆಯಲ್ಲಿ ಬಿ.ಹೆಚ್.ಹರೀಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಪಿ.ಮಂಜೇಗೌಡ, ಜಿಲ್ಲಾ ಕಾರ್ಯದರ್ಶಿ ಡಿ.ವಿ.ಪುಟ್ಟೇಗೌಡ, ಗ್ರಾ.ಪಂ ಸದಸ್ಯರಾದ ಜಗಧೀಶ್, ಮಾದಯ್ಯ, ಯೂತ್ ಕಾಂಗ್ರೆಸ್ ಅಧ್ಯಕ್ಷ ಸಿದ್ದೇಶ್, ಮುಖಂಡರಾದ ಚಂದ್ರಪ್ಪ, ಭರತೇಶ್, ಸಚಿನ್, ಕಿರಣ್ ಹಾಗೂ ಸುತ್ತಮುತ್ತಲ ಗ್ರಾಮಸ್ಥರು ಉಪಸ್ಥಿತರಿದ್ದರು.