ಚಿಕ್ಕಮಗಳೂರು: ಕಾರು- ಬೈಕ್ ಮುಖಾಮುಖಿ ಡಿಕ್ಕಿಯಾಗಿದ್ದು, ಬೈಕ್ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಇನ್ನು ಬೈಕ್ ಹಿಂಬದಿ ಇದ್ದ ತೀವ್ರವಾಗಿ ಗಾಯಗೊಂಡಿದ್ದ ಮಹಿಳೆ ಸಹ ಮೃತಪಟ್ಟ ಘಟನೆ ಚಿಕ್ಕಮಗಳೂರು ನಗರದಲ್ಲಿ ಸಂಭವಿಸಿದೆ.
ಚಿಕ್ಕಮಗಳೂರು ನಗರದ ದಂಟರಮಕ್ಕಿಯಲ್ಲಿ ಘಟನೆ ಸಂಭವಿಸಿದ್ದು, ಕಾರು ಡಿಕ್ಕಿಯಾಗುತ್ತಿದ್ದಂತೆ ಬೈಕ್ ಕಂದಕಕ್ಕೆ ಬಿದ್ದಿದೆ.ಕಂದಕಕ್ಕೆ ಬಿದ್ದ ಪರಿಣಾಮ ಬೈಕ್ ಹೊತ್ತಿ ಉರಿದು, ಸುಟ್ಟು ಕರಕಲಾಗಿದೆ.
ಬೀರೂರಿನ ಕಾರೇಹಳ್ಳಿ ಮೂಲದ ದಂಪತಿ ಆನಂದ್ (35) ಮತ್ತು ಲಕ್ಷ್ಮಿ (33) ಮೃತ ದುರ್ದೈವಿಗಳಾಗಿದ್ದಾರೆ. ಬೈಕಿನಲ್ಲಿ ಧರ್ಮಸ್ಥಳಕ್ಕೆ ಹೋಗುತ್ತಿದ್ದಾಗ ಘಟನೆ ನಡೆದಿದೆ. ನಗರದ ಟ್ರಾಫಿಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.