ಕೊಪ್ಪಳ: ತುಂಗಭದ್ರೆ ರೌದ್ರಾವತಾರಕ್ಕೆ ಕೊಚ್ಚಿ ಹೋಗಿರುವ ಜಲಾಶಯದ 19ನೇ ಕ್ರಸ್ಟ್​ಗೇಟ್ ಜಾಗದಲ್ಲಿ ಸ್ಟಾಪ್​ಲಾಗ್ ಗೇಟ್ ಹಾಕಿ, ನೀರನ್ನು ಉಳಿಸುವ ಪ್ರಯತ್ನ ತಜ್ಞರಿಂದ ಆರಂಭವಾಗಿದೆ. 20 ಟನ್ ಭಾರದ ಒಂದು ಎಲಿಮೆಂಟ್ ಅಳವಡಿಕೆಗೆ ಸಿದ್ಧತೆ ನಡೆದಿದೆ. ಡ್ಯಾಂಗೆ ಸ್ಟಾಪ್​ಲಾಗ್ ಗೇಟ್ ಇಂದು ಅಳವಡಿಕೆ ಮಾಡಲಾಗುತ್ತದೆ.

ಸ್ಟಾಪ್ ಲಾಗ್ ಗೇಟ್​ನ ಐದು ಎಲಿಮೆಂಟ್​ಗಳ ಪೈಕಿ ಜಿಂದಾಲ್​ನಿಂದ ಒಂದು ಎಲಿಮೆಂಟ್ ಹೊತ್ತ ಲಾರಿ ಗುರುವಾರ ಮಧ್ಯಾಹ್ನ 12ರ ವೇಳೆಗೆ ಜಲಾಶಯದ ಮೇಲೆ ಬಂದಿದೆ. ಮೂರು ದಿನಗಳಲ್ಲಿ ಅಳವಡಿಕೆ ಕಾರ್ಯ ನಡೆಯಲಿದೆ ಎಂದು ಟಿಬಿಬಿ ಅಧಿಕಾರಿಗಳು ಹೇಳಿದ್ದಾರೆ.

ಇನ್ನೂ 4 ಎಲಿಮೆಂಟ್​ಗಳು ನಾರಾಯಣ, ಹಿಂದುಸ್ಥಾನ್ ಇಂಜನಿಯರ್ಸ್​ಗಳಿಂದ ಬರಬೇಕಿದೆ. ಜಲಾಶಯದ ಆವರಣಕ್ಕೆ ಎಲಿಮೆಂಟ್ ಬರುತ್ತಿದ್ದಂತೆ ಡ್ಯಾಂ ಗೇಟ್​ಗಳ ಎಕ್ಸ್​ಪರ್ಟ್ ಕನ್ಹಯ್ಯ ನಾಯ್ಡು ಮತ್ತು ತಂಡ ಸಂತಸಗೊಂಡಿತು. ತಜ್ಞರು ಹಾಗೂ ಅಧಿಕಾರಿಗಳು ಎಲಿಮೆಂಟ್ ಪರಿಶೀಲನೆ ಮಾಡಿದರು. ಎಲಿಮೆಂಟ್ ಅಳವಡಿಕೆ ವೇಳೆ ಅವಘಡಗಳಾಗದಂತೆ ಮುಂಜಾಗೃತ ಕ್ರಮವಾಗಿ ರಕ್ಷಣ ಪಡೆಯು ಡ್ಯಾಂ ಮುಂಭಾಗ ಹಾಗೂ ಮೇಲ್ಭಾಗದಲ್ಲಿ ಬೀಡುಬಿಟ್ಟಿದೆ. ಬೆಂಗಳೂರಿನ ಎಸ್​ಡಿಆರ್​ಪಿ ಆರು ಸಿಬ್ಬಂದಿ, ಹೊಸಪೇಟೆ ಅಗ್ನಿಶಾಮಕ ದಳದ 10 ಸಿಬ್ಬಂದಿ ಹಾಗೂ ಒಬಿಎಂ ಬೋಟ್ ಸೇರಿ ರಕ್ಷಣ ಕಾರ್ಯಕ್ಕೆ ಬೇಕಾಗಿರುವ ತಯಾರಿ ನಡೆದಿದೆ. ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ಗುರುವಾರ ಸಂಜೆ ಜಲಾಶಯದ ಬಳಿ ಗೇಟ್ ಅಳವಡಿಕೆ ವೀಕ್ಷಿಸಿದರು. ಗೇಟ್ ಅಳವಡಿಕೆ ಕಾರ್ಯದಲ್ಲಿ ತೊಡಗಿರುವ ಸಿಬ್ಬಂದಿಗೆ ವೈಯಕ್ತಿಕವಾಗಿ ಬಹುಮಾನ ನೀಡುವುದಾಗಿಯೂ ಘೊಷಿಸಿದರು. ಗೇಟ್​ನ ಬಲ ಭಾಗದಲ್ಲಿ ಸಿಲುಕಿದ್ದ ಹಳೇ ಗೇಟ್​ನ ಸರಳು ಕಾರ್ಯಾಚರಣೆಗೆ ಅಡ್ಡಿಯಾಗಿದೆ. ತಾಂತ್ರಿಕ ಸಿಬ್ಬಂದಿ ಕ್ರೇನ್ ಸಹಾಯದಿಂದ ಹರಿವ ನೀರಿನಲ್ಲಿ ಜೀವ ಪಣಕ್ಕಿಟ್ಟು ಮೇಲೆತ್ತಿದರು.

ಇನ್ನು ಗುರುವಾರ ಬೆಳಗ್ಗೆ ವೇಳೆಗೆ ಟಿಬಿ ಡ್ಯಾಂ ನೀರಿನ ಮಟ್ಟ 77.211 ಟಿಎಂಸಿ ಅಡಿಗೆ ಇಳಿಕೆಯಾಗಿತ್ತು. ಕಳೆದ ಐದು ದಿನದಲ್ಲಿ ಜಲಾಶಯದಿಂದ ಅಂದಾಜು 0 ಟಿಎಂಸಿ ಅಡಿ ನೀರು ನದಿಗೆ ಹರಿದು ಹೋಗಿದೆ. ಡ್ಯಾಂ ಮಟ್ಟ 1625 ಅಡಿಗೆ ಕುಸಿದಿದೆ. ಒಳಹರಿವು 37,173 ಕ್ಯೂಸೆಕ್​ಗೆ ಏರಿಕೆ ಕಂಡಿದೆ.