ಮಡಿಕೇರಿ: ಇಂದು ಬೆಳಗ್ಗೆ ಕಾಡಾನೆ ತುಳಿತಕ್ಕೆ ನಿವೃತ್ತ ಐಜಿಪಿ ಪತ್ನಿ ಸಾವನ್ನಪ್ಪಿದ ಘಟನೆ ಕೊಡಗು ಜಿಲ್ಲೆಯ ಪೋನ್ನಂಪೇಟೆ ತಾಲ್ಲೂಕಿನ ತಿತಿಮತಿ ಗ್ರಾಮ ಪಂಚಾಯತಿ ಸಮೀಪದ ಕೊಣ್ಣನಕಟ್ಟೆ ಗ್ರಾಮದಲ್ಲಿ ನಡೆದಿದೆ.

ಕಾಡಾನೆ ತುಳಿತಕ್ಕೆ ನಿವೃತ್ತ ಐಜಿಪಿ ಅಣ್ಣಳಮಾಡ ಸುನಿಲ್ ಅಚ್ಚಯ್ಯ ಅವರ ಪತ್ನಿ ಸಂಧ್ಯಾ (58) ಸಾವಿಗೀಡಾಗಿದ್ದಾರೆ. ಸಂಧ್ಯಾ ಅವರು ಇಂದು ಬೆಳಗ್ಗೆ ವಾಯುವಿಹಾರಕ್ಕೆ ತೆರಳಿದ್ದರು. ಹಾಗೇ ತೋಟದ ಕಾರ್ಮಿಕರು ಕೆಲಸ ಮಾಡುತ್ತಿರುವುದನ್ನ ಮೇಲ್ವಿಚಾರಣೆ ಮಾಡಿಕೊಂಡು ವಾಪಸ್‌ ಮನೆಗೆ ಮರಳುತ್ತಿದ್ದರು. ಈ ಸಂದರ್ಭದಲ್ಲಿ ಏಕಾಏಕಿ ಎರಗಿದ ಕಾಡಾನೆ ಸಂಧ್ಯಾ ಅವರ ಮೇಲೆ ದಾಳಿ ನಡೆಸಿದೆ.

ಆನೆ ದಾಳಿ ವೇಳೆ ಸಂಧ್ಯಾ ಅವರ ಕಾಲು ಮುರಿದು ಗಂಭೀರ ಗಾಯಗೊಂಡಿದ್ದಾರೆ. ಇದನ್ನು ಕಂಡು ತೋಟದ ಕಾರ್ಮಿಕರು ಕಿರುಚಾಡುತ್ತಿದ್ದಂತೆ, ಅವರ ಮೇಲೂ ದಾಳಿ ನಡೆಸಲು ಮುಂದಾಗಿದೆ. ಆನೆ ದಾಂಗುಡಿ ಇಡುತ್ತಿರುವುದನ್ನು ಕಂಡ ಕಾರ್ಮಿಕರು ಎದ್ನೋ ಬಿದ್ನೋ ಅಂತ ಸಿಕ್ಕಸಿಕ್ಕ ಕಡೆಗೆ ಓಡಿಹೋಗಿದ್ದಾರೆ.

ಇನ್ನೂ ಗಂಭೀರವಾಗಿ ಗಾಯಗೊಂಡ ಮಹಿಳೆಯನ್ನ ಕುಟುಂಬಸ್ಥರು ಗೋಣಿಕೊಪ್ಪದ ಲೋಪಮುದ್ರ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಹಿಳೆ ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.