ಮಡಿಕೇರಿ: ಸಾಕಾನೆಗಳ ಕಾದಾಟದಲ್ಲಿ ಪ್ರವಾಸಿ ಮಹಿಳೆಯೊಬ್ಬಳು ಸಾವಿಗೀಡಾದ ದುರ್ಘಟನೆ ಕುಶಾಲನಗರ ತಾಲೂಕಿನ ದುಬಾರೆ ಶಿಬಿರದಲ್ಲಿ ನಡೆದಿದೆ.
ಚೆನೈ ಮೂಲದ ಜಿನ್ಮು (33) ಸಾವಿಗೀಡಾದ ದುರ್ದೈವಿ. ಇಂದು ಬೆಳಿಗ್ಗೆ ಮಹಿಳೆ ಹಾಗೂ ಅವರ ಪತಿ ಜೋಯಲ್ ದುಬಾರೆ ಸಾಕಾನೆ ಶಿಬಿರಕ್ಕೆ ಆಗಮಿಸಿದ್ದರು. ಕೆಲ ಸಮಯ ಸಾಕಾನೆಗಳೊಂದಿಗೆ ಫೋಟೋ ಸಹ ತೆಗೆಸಿಕೊಂಡಿದ್ದರು.
ಬಳಿಕ ಸಾಕಾನೆಗಳಿಗೆ ಸ್ನಾನ ಮಾಡಿಸಿ ನೀರು ಕುಡಿಸಲು ಮಾವುತರು ಹಾಗೂ ಕಾವಾಡಿಗಳು ತೆರಳಿದ ಸಂದರ್ಭದಲ್ಲಿ, ಕೆಲ ಪ್ರವಾಸಿಗರು ಸಾಕಾನೆಗಳಿಗೆ ಸ್ನಾನ ಮಾಡಿಸಲು ಮುಂದಾಗಿದ್ದಾರೆ.
ದಂಪತಿ ಸಹ ಸಾಕಾನೆಗಳಿಗೆ ಸ್ನಾನ ಮಾಡಿಸಲು ಮುಂದಾಗಿದ್ದರು. ಈ ವೇಳೆ ಮಾರ್ತಾಂಡ ಹಾಗೂ ಕಂಜನ್ ಆನೆಗಳ ನಡುವೆ ನದಿಯಲ್ಲೇ ಕಾದಾಟ ಶುರುವಾಗಿದೆ. ನೋಡು ನೋಡುತ್ತಿದ್ದಂತೆ ಸಾಕಾನೆಗಳ ಕಾದಾಟ ವಿಕೋಪಕ್ಕೆ ತಿರುಗಿದೆ.
ಈ ವೇಳೆ ಮಾರ್ತಾಂಡ ಮಹಿಳೆಯ ಮೇಲೆ ಬಿದ್ದಿದೆ. ಆನೆ ಬಿದ್ದ ಪರಿಣಾಮ, ಜಿನ್ಮು ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅವರ ಪತಿ ಜೋಯಲ್ಗೆ ಗಂಭೀರ ಗಾಯಗಳಾಗಿವೆ. ಉಳಿದ ಪ್ರವಾಸಿಗರು ಜೋಯಲ್ ಅವರನ್ನು ಕುಶಾಲನಗರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

