ಮಡಿಕೇರಿ: ಪ್ರತಿ ವರ್ಷದಂತೆ ಈ ಬಾರಿಯೂ ಮುಂಗಾರು ಆರಂಭದ ಒಂದು ತಿಂಗಳ ಕಾಲ ಮೀನುಗಾರಿಕೆಯನ್ನು ನಿಷೇಧಗೊಳಿಸಲಾಗಿದೆ. ಆದ್ದರಿಂದ ಯಾರೂ ಕೂಡ ಮೀನುಗಾರಿಕೆ ಮಾಡದಂತೆ ಸೂಚನೆ ನೀಡಲಾಗಿದೆ.
ಮುಂಗಾರು ಮಳೆಗಾಲದ ಅವಧಿಯಲ್ಲಿ ಮೀನುಗಳ ವಂಶಾಭಿವೃದ್ಧಿ ಚಟುವಟಿಕೆಗಳು ನಡೆಯುವುದರಿಂದ ಪ್ರತಿ ವರ್ಷದ ಜೂನ್, 01 ರಿಂದ ಜುಲೈ 30 ರವರೆಗೆ ರಾಜ್ಯದ ಎಲ್ಲಾ ಸರ್ವಋತು ಕೆರೆಗಳು, ಜಲಾಶಯಗಳು,ತೊರೆಗಳ ಅಳಿವೆಗಳು ಮತ್ತು ನದಿಗಳಲ್ಲಿ ಮೀನು ಹಿಡಿಯುವುದನ್ನು ಪೂರ್ಣವಾಗಿ ನಿಷೇಧಿಸಲಾಗಿದೆ.
ಈ ಅವಧಿಯು ಮೀನಿನ ಜೀವನ ಚಕ್ರದಲ್ಲಿ ಅತಿಮುಖ್ಯವಾದ ಘಟ್ಟವಾಗಿದೆ. ಸ್ಥಳೀಯ ತಳಿಗಳು ಮುಂದಿನ ಪೀಳಿಗೆಗೆ ತಮ್ಮ ಸಂತತಿಯನ್ನು ನೀಡುವ ಸಮಯವಾಗಿರುವುದರಿಂದ ಈ ಅವಧಿಯಲ್ಲಿ ಜಿಲ್ಲೆಯ ಸಾರ್ವಜನಿಕರು ಹಾಗೂ ಮೀನುಗಾರರು ಎಲ್ಲಾ ಸರ್ವಋತು ಕೆರೆಗಳು, ಜಲಾಶಯಗಳು ತೊರೆಗಳು, ಅಳಿವೆಗಳು ಮತ್ತು ನದಿಗಳಲ್ಲಿ, ಮೀನುಗಳನ್ನು ಈ ಎರಡು ತಿಂಗಳು ಹಿಡಿಯದೇ ಅವುಗಳ ಸಂತಾನ ಅಭಿವೃದ್ದಿಗೆ ಪೂರಕ ವಾತಾವರಣ ಕಲ್ಪಿಸಿಕೊಟ್ಟು ಮೀನಿನ ಸ್ಥಳೀಯ ತಳಿಗಳ ಸಂರಕ್ಷಣೆಯಲ್ಲಿ ಇಲಾಖೆಯೊಂದಿಗೆ ಸಹಕರಿಸುವಂತೆ ಮೀನುಗಾರಿಕೆ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.

