ಕಾರವಾರ: ಪಕ್ಷದ ಬಲವರ್ಧನೆಗೆ ಕಾರ್ಯಕರ್ತರ ಕೊಡುಗೆ ಅಪಾರವಾಗಿದ್ದು ಆದರೆ ನಮ್ಮವರೇ ನಮಗೆ ಮೋಸ ಮಾಡಬಾರದು ಎಂದು ಶಾಸಕಿ ರೂಪಾಲಿ ನಾಯ್ಕ ಹೇಳಿದರು.
ತಾಲೂಕಿನ ಶಿರವಾಡ ಗ್ರಾಪಂ ವ್ಯಾಪ್ತಿಯ ಮಖೇರಿಯಲ್ಲಿ ಮಂಗಳವಾರ ಬಿಜೆಪಿ ಬೂತ್ ವಿಜಯ ಅಭಿಯಾನಕ್ಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಬೂತ್ ಸಂಘಟನೆ ಹೇಗಿರಬೇಕು ಎಂದರೆ ಬಿಜೆಪಿ ತಮ್ಮ ತಾಯಿ ಎಂದು ಕಾರ್ಯ ನಿರ್ವಹಿಸಬೇಕು ಎಂದು ಸಲಹೆ ನೀಡಿದರು. ಇನ್ನು ಕೆಲವೇ ದಿನಗಳಲ್ಲಿ ಒಳ್ಳೆಯತನದ ಮುಖವಾಡ ಧರಿಸಿ ಕೆಲವರು ಬಿಜೆಪಿಯ ಬಗ್ಗೆ ಇಲ್ಲ ಸಲ್ಲದ ಆರೋಪ ಮಾಡಲಿದ್ದಾರೆ. ಪಕ್ಷದಲ್ಲಿ ಒಡಕು ಉಂಟು ಮಾಡುವ ಕಾರ್ಯ ಮಾಡಲಿದ್ದು ನಮ್ಮವರು ಅಂತಹ ಆಸೆ ಆಮಿಷಗಳಿಗೆ ಒಳಗಾಗದೇ ಸಮರ್ಥ ಭಾರತ ನಿರ್ಮಾಣಕ್ಕೆ ಪ್ರಧಾನಿ ಮೋದಿಯವರು ತೊಟ್ಟ ಪಣಕ್ಕೆ ನಾವೆಲ್ಲ ಕಾರ್ಯ ಪ್ರವೃತ್ತರಾಗಿ ಬಿಜೆಪಿಯನ್ನು ಇನ್ನಷ್ಟು ಬಲಪಡಿಸಬೇಕು ಎಂದರು.
ಈ ಹಿಂದೆ ಗ್ರಾಮ ಪಂಚಾಯತಿಗಳಲ್ಲಿ ಬಿಜೆಪಿಯ ೧-೨ ಸದಸ್ಯರಿರುತ್ತಿದ್ದರು. ಆದರೆ ಇದೀಗ ಸುಮಾರು ೧೪-೧೫ ರಷ್ಟು ಗ್ರಾಪಂಗಳಲ್ಲೇ ಬಿಜೆಪಿ ಇದೆ. ಬೂತ್ ವಿಜಯ ಕಾರ್ಯಕ್ರಮವನ್ನು ಕ್ಷೇತ್ರದ ಗ್ರಾಮೀಣ ಭಾಗದಲ್ಲಿ ಶಿರವಾಡ ಗ್ರಾಮ ಪಂಚಾಯಿತಿಯಿಂದ ಆರಂಭಿಸಲಾಗಿದೆ. ಪ್ರತಿ ಬೂತ್ನ ೨೦೦ ರಿಂದ ೨೫೦ ಮನೆಗಳ ೮೦೦೦ ದಿಂದ ೧೦೦೦ ವರೆಗಿನ ಮತದಾರರ ಮಾಹಿತಿಯನ್ನು ಬೂತ್ ಕಾರ್ಯಕರ್ತರು ಸಂಗ್ರಹಿಸಬೇಕು. ಅವರಿಗೆ ಸರಕಾರದಿಂದ ದೊರೆಯಬಹುದಾದ ಸೌಲಭ್ಯಗಳನ್ನು ಒದಗಿಸಲು ನೆರವಾಗಬೇಕು.
ಈ ಮೂಲಕ ಭಾರತ ಮುಂದುವರಿಯಬೇಕು ಎಂಬ ಕಾರಣಕ್ಕೆ ಬಿಜೆಪಿಯನ್ನು ಮತ್ತೊಮ್ಮೆ ಗೆಲ್ಲಿಸಬೇಕಿದೆ ಎಂದರು. ವಿಧಾನ ಪರಿಷತ್ ಶಾಸಕ ಗಣಪತಿ ಉಳ್ವೇಕರ ಮಾತನಾಡಿ ಈ ಹಿಂದೆ ಮಾಡಿದ ತಪ್ಪುಗಳನ್ನು ಅಲ್ಲಿಗೇ ಬಿಟ್ಟು ಇನ್ನು ಮುಂದೆ ಅವುಗಳನ್ನು ಮಾಡಬಾರದು. ಈಗ ಬಿಜೆಪಿಯ ಅಭೂತಪೂರ್ವ ಗೆಲುವಿಗೆ ಶ್ರಮಿಸಬೇಕಿದೆ. ಕಾಂಗ್ರೆಸ್ ಆಡಳಿತದಲ್ಲಿ ಆಗಿರುವ ಹಾಗೂ ಬಿಜೆಪಿಯ ಆಡಳಿತದಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳನ್ನು ಜನರೇ ಗಮನಿಸಿದ್ದಾರೆ. ಇನ್ನು ಮುಂಬರುವ ಚುನಾವಣೆಯಲ್ಲಿ ಕಾರವಾರ-ಅಂಕೋಲಾ ಕ್ಷೇತ್ರಕ್ಕೆ ರೂಪಾಲಿ ನಾಯ್ಕ ಅವರೇ ಬಿಜೆಪಿ ಅಭ್ಯರ್ಥಿ ಆಗಿದ್ದು ಶಾಸಕರೂ ಅವರೇ ಆಗಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಶಿರವಾಡ ಗ್ರಾಪಂ ಅಧ್ಯಕ್ಷೆ ಅಶ್ವಿನಿ ದಿಲೀಪ ನಾಯ್ಕ, ತಾಲೂಕಾ ಪ್ರಭಾರಿ ಗಜಾನನ ಗುನಗಾ, ಜಿಲ್ಲಾ ಪ್ರಭಾರಿ ರಾಜೇಂದ್ರ ನಾಯ್ಕ, ಎಸ್.ಸಿ. ಎಸ್ಟಿ ಮೋರ್ಚಾ ಅಧದ್ಯಕ್ಷ ಉದಯ ಬಶೆಟ್ಟಿ, ಗ್ರಾಮೀಣ ಮಂಡಲದ ಅಧ್ಯಕ್ಷ ಸುಭಾಷ ಗುನಗಿ ಮುಂತಾದವರು ಇದ್ದರು.