ಕಾರವಾರ: ಈಗಲ್ ಇನ್ಫ್ರಾ ಇಂಡಿಯಾ ಲಿ. ಕಂಪನಿಯಲ್ಲಿ ನನ್ನ ಹೂಡಿಕೆ ಇರುವುದು ಸಾಬೀತು ಮಾಡಿದರೆ, ಶಾಶ್ವತವಾಗಿ ರಾಜಕೀಯದಿಂದ ದೂರವಾಗುತ್ತೇನೆ. ಇಲ್ಲದಿದ್ದರೆ ಶಾಸಕಿ ರೂಪಾಲಿ ನಾಯ್ಕ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು’ ಎಂದು ಮಾಜಿ ಶಾಸಕ ಸತೀಸ ಸೈಲ್ ಸವಾಲು ಹಾಕಿದ್ದಾರೆ.
ನಗರದ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಕಂಪನಿಗೆ ಸಂಬಂಧಿಸಿದ ದಾಖಲೆ ಸಮೇತ ಮಾತನಾಡಿದರು.
‘ನಗರದ 6.5 ಕೋಟಿ ರೂ. ವೆಚ್ಚದ ಕಾಮಗಾರಿ ಪಡೆದಿರುವ ಈಗಲ್ ಇನ್ಫಾç ಇಂಡಿಯಾ ಲಿ. ಕಂಪನಿಯಲ್ಲಿ ನನ್ನ ಹೂಡಿಕೆ ಇದೆ ಎಂದು ಶಾಸಕಿ ಆರೋಪಿಸಿದ್ದಾರೆ. ಅವರು ಅಪ್ಪಟ್ಟ ಸುಳ್ಳು ಹೇಳಿದ್ದಾರೆ. ಕಂಪನಿಯಲ್ಲಿ ನಯಾ ಪೈಸೆ ಹೂಡಿಕೆ ಆಗಿದ್ದರೆ, ರಾಜಕೀಯದಿಂದ ದೂರವಾಗಿ ಕಾರವಾರ ಕೂಡ ಬಿಡುತ್ತೇನೆ ಎಂದರು. ಶಾಸಕಿ ರೂಪಾಲಿ ನಾಯ್ಕ ಚುನಾವಣೆಯಲ್ಲಿ ಗೆದ್ದ ಎರಡನೇ ದಿನದಲ್ಲಿ ಫೋನ್ ಮಾಡಿದ್ದರು.
ಬೈತಖೋಲ್ ಬಳಿ ಕೆಲವರು ಕಾರು ಅಡ್ಡ ಹಾಕಿದ್ದಾರೆ ಏನು ಮಾಡಬೇಕು ಎಂದು ಕೇಳಿ ಕರೆ ಮಾಡಿದ್ದರು. ಆಗ ಅವರಿಗೆ ಸಹಾಯ ಮಾಡಿದ್ದೆ. ಅದು ಸುಳ್ಳು ಎಂದಾದರೆ ಶಾಸಕಿ ರೂಪಾಲಿ ನಾಯ್ಕ ಆರ್ಯದುರ್ಗ ದೇವರ ಎದುರು ಆಣೆ ಮಾಡಲಿ, ತಾನೂ ಮಾಡುತ್ತೇನೆ. ಜೀವ ಬೆದರಿಕೆಯಂಥ ಕ್ಷುಲ್ಲಕ ರಾಜಕಾರಣ ಎಂದೂ ಮಾಡುವುದಿಲ್ಲ ಶಾಸಕಿ ಅವರು ನನ್ನ ಲಿವರ್ ಹಾಳಾಗಿದೆ ಎಂದು ಹೇಳುತ್ತಿದ್ದಾರೆ.
ನಮಗೂ ಕುಟುಂಬ, ಹೆಂಡತಿ, ಮಕ್ಕಳು ಇದ್ದಾರೆ. ಅವರ ಮೇಲೆ ಇಂಥ ಮಾತು ಯಾವ ರೀತಿ ಪ್ರಭಾವ ಬೀರುತ್ತದೆ. ಲಿವರ್ ಹಾಳಾಗಿದೆ ಎಂದು ಹೇಳಲು ರೂಪಾಲಿ ನಾಯ್ಕ ಏನು ತಜ್ಞರೇ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಅವರೇ ಹೋಗಿ ತಪಾಸಣೆ ಮಾಡುತ್ತಾರಾ?, ಇಷ್ಟೊಂದು ಕೆಳ ಮಟ್ಟದ ಸುಳ್ಳು ಆರೋಪ ಮಾಡಬಾರದು ಎಂದು ಖಾರವಾಗಿ ಹೇಳಿದರು. ಲಿವರ್ ತಪಾಸಣೆ ಮಾಡುವುದಾದರೆ, ಅವರದ್ದೂ ಮಾಡಲಿ ಎಂದರು. ಮಾತು ಮಾತಿಗೂ ಜೈಲಿಗೆ ಹೋಗಿ ಬಂದವರು ಎಂದು ನನ್ನನ್ನು ಹಂಗಿಸುತ್ತಾರೆ. ಬಾಕಿಯವರ ಲಿಸ್ಟ್ ತೆಗೆದರೆ ದೊಡ್ಡದಾಗುತ್ತದೆ. ಅದೆಲ್ಲ ಈಗ ಬೇಡ.
ಎಲ್ಲವನ್ನು ಇಲ್ಲಿಗೇ ಮುಗಿಸಬೇಕು ಎಂದುಕೊಂಡಿದ್ದೇನೆ. ಜಿಲ್ಲಾ ಪಂಚಾಯಿತಿ ಸಿಇಒ ಕಚೇರಿಯಲ್ಲಿ ನಡೆದ ಘಟನೆಯ ಸಿಸಿಟಿವಿ ಕ್ಯಾಮೆರಾ ದೃಶ್ಯ ಪೊಲೀಸರು ಪಡೆದಿದ್ದಾರೆ ಎಂದು ಗೊತ್ತಾಗಿದೆ. ಅದು ಇನ್ನೂ ಕೊಟ್ಟಿಲ್ಲ. ನಾವು ಕೊಟ್ಟ ಕೇಸು ಏನಾಯಿತು ಎನ್ನುವುದು ಇನ್ನೂ ಹೇಳಿಲ್ಲ ಎಂದರು. ಶಾಸಕರು ಆರೋಪ ಮಾಡುವಾಗ ಸಾಕ್ಷಿ ಇಟ್ಟು ಮಾತನಾಡಲಿ ಎಂದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಮೀರ ನಾಯ್ಕ ಮಾತನಾಡಿ, ಈಗಲ್ ಇನ್ಫ್ರಾ ಇಂಡಿಯಾ ಲಿ. ಕಂಪನಿಯಲ್ಲಿ ತಾನೊಬ್ಬ ಉದ್ಯೋಗಿ. ಈ ಭಾಗದಲ್ಲಿ ಕಂಪನಿಯ ಕೆಲಸಗಳನ್ನು ನೋಡಕೊಳ್ಳುತ್ತೇನೆ. ಇದು ಬಿಟ್ಟರೆ ಕಂಪನಿಯೊಂದಿಗೆ ಬೇರೆ ಯಾವುದೇ ಹೆಚ್ಚುವರಿ ಸಂಬಂಧ ಇಲ್ಲ ಎಂದರು. ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ವಕ್ತಾರ ಕೆ ಶಂಭು ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಮೀರ್ ನಾಯ್ಕ ಹಾಗೂ ಇನ್ನಿತರರು ಇದ್ದರು.