ಕಾರವಾರ: ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉತ್ತರ ಕನ್ನಡ ಜಿಲ್ಲಾ ಉಪನಿರ್ದೇಶಕರಾಗಿ ಪ್ರಭಾರ ಹುದ್ದೆ ವಹಿಸಿಕೊಂಡಿದ್ದ ಮೋಹನ್ ಅವರನ್ನು ಮತ್ತೆ ವರ್ಗಾವಣೆ ಮಾಡಲಾಗಿದೆ.
ಕಳೆದ ಎರಡು ವರ್ಷಗಳಿಂದ ಜಿಲ್ಲೆಯಲ್ಲಿ ಉಪನಿರ್ದೇಶಕರಾಗಿದ್ದ ಸೋಮಶೇಖರ್ ಎನ್ನುವವರನ್ನು ಬಾಗಲಕೋಟೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪನಿರ್ದೇಶಕರಾಗಿ ವರ್ಗಾವಣೆ ಮಾಡಲಾಗಿತ್ತು. ಇದಾದ ನಂತರ ಇಲಾಖೆಯ ಭೂ ವಿಜ್ಞಾನಿಯಾಗಿದ್ದ ಜಯರಾಮ್ ನಾಯ್ಕ ಎನ್ನುವವರಿಗೆ ಉಪನಿರ್ದೇಶಕ ಹುದ್ದೆಯ ಪ್ರಭಾರ ನೀಡಲಾಗಿತ್ತು. ಈ ನಡುವೆ ಧಾರವಾಡ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಲ್ಲಿ ಹಿರಿಯ ಭೂ ವಿಜ್ಞಾನಿಯಾಗಿದ್ದ ಮೋಹನ್ ಅವರಿಗೆ ಉತ್ತರ ಕನ್ನಡ ಜಿಲ್ಲೆಯ ಪ್ರಭಾರ ನೀಡಿ ಆದೇಶಿಸಲಾಗಿತ್ತು. ಬುಧವಾರ ಮತ್ತೆ ಅವರಿಗೆ ನೀಡಿದ ಪ್ರಭಾರವನ್ನೂ ರದ್ದು ಮಾಡಿ ಜಯರಾಮ್ ಅವರಿಗೆ ನೀಡಿದ್ದು, ಮೋಹನ್ ಅವರಿಗೆ ಧಾರವಾಡಕ್ಕೆ ವರ್ಗಾಯಿಸಲಾಗಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆ, ಕೆಂಪು ಕಲ್ಲು ಗಣಿಗಾರಿಕೆ ಇನ್ನಿತರ ಅಕ್ರಮ ಚಟುವಟಿಕೆಗಳು ನಡೆಯುತ್ತಿದೆ ಎನ್ನುವ ಆರೋಪವಿದೆ. ಇದಲ್ಲದೇ ಸದ್ಯ ಮರಳುಗಾರಿಕೆ ಬಂದಾಗಿರುವ ಹಿನ್ನಲೆಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಅಗತ್ಯತೆ ಹೆಚ್ಚಾಗಿರುತ್ತದೆ. ಆದರೆ ಮೂರೇ ತಿಂಗಳಲ್ಲಿ ಇಬ್ಬರನ್ನು ವರ್ಗಾವಣೆ ಮಾಡಿರುವುದು ಇದೀಗ ಜಿಲ್ಲೆಯ ಜನರಲ್ಲಿ ಹಲವು ಸಂಶಯಕ್ಕೆ ಕಾರಣವಾಗಿದೆ.