ಕಾರವಾರ: ಅಮದಳ್ಳಿ ಗ್ರಾಪಂ ವ್ಯಾಪ್ತಿಯ ಹಳೆ ಮುದಗಾ ಕಡಲ ತೀರದಲ್ಲಿ ಶುಕ್ರವಾರ ಕಡಲಾಮೆ (Sea turtle )ಹಗಲಿನಲ್ಲೇ ಮೊಟ್ಟೆ ಇಟ್ಟಿದ್ದು ಅರಣ್ಯ ಇಲಾಖೆಯು ಅವುಗಳನ್ನು ಇದ್ದ ಸ್ಥಳದಲ್ಲಿಯೇ ಸಂರಕ್ಷಿಸಿದೆ.
ಸ್ಥಳಿಯ ಮೀನುಗಾರರಾದ ದಾಮೋದರ ಎನ್ನುವವರು ಕಡಲತೀರದಲ್ಲಿ ಕಡಲಾಮೆ ಮೊಟ್ಟೆ ಇಡುತ್ತಿರುವುದನ್ನು ಗಮನಿಸಿ ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದ ಡಿಸಿಎಫ್ ಪ್ರಶಾಂತ ಕುಮಾರ ಕೆ.ಸಿ. ಎಸಿಎಫ್ ಜಯೇಶ, ಮರೈನ್ ವಿಭಾಗದ ಡಿಆರ್ಎಫ್ಓಗಳಾದ ಪ್ರಕಾಶ ಯರಗಟ್ಟಿ ಹಾಗೂ ಚಂದ್ರಶೇಖರ ಕಟ್ಟಿಮನಿ, ಅರಣ್ಯ ರಕ್ಷಕ ಮೂರ್ತಿ ಅವರು ಸ್ಥಳಕ್ಕೆ ತೆರಳಿ ಕಡಲಾಮೆ ಮೊಟ್ಟೆ ಇಡುತ್ತಿರುವುದನ್ನು ಗಮನಿಸಿದ್ದಾರೆ. ಬಳಿಕ ಕಡಲಾಮೆ ಮೊಟ್ಟೆ ಇಟ್ಟು ತೆರಳಿದ ಬಳಿಕ ಆ ಮೊಟ್ಟೆಗಳನ್ನು ಇದ್ದ ಸ್ಥಳದಲ್ಲಿಯೇ ಸ್ಥಳೀಯರ ನೆರವಿನೊಂದಿಗೆ ಸಂರಕ್ಷಿಸಿಡಲಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಡಿಸಿಎಫ್ ಪ್ರಶಾಂತ ಅವರು ನವೆಂಬರ್ ನಿಂದ ಮಾರ್ಚ್ ವರೆಗೆ ಕಡಲಾಮೆಗಳು ಮೊಟ್ಟೆ ಇಡುವ ಸಮಯವಾಗಿದ್ದು ಈ ಬಗ್ಗೆ ಕಡಲತೀರದಲ್ಲಿ ನಿಗಾ ಇರಿಸುವಂತೆ ಎಲ್ಲ ಮೀನುಗಾರರಿಗೆ ಕೋಸ್ಟಲ್ ಮರೈನ್ ಸೆಲ್ ವತಿಯಿಂದ ಜಾಗೃತಿ ಮೂಡಿಸಲಾಗುತ್ತಿದೆ. ಕಳೆದ ವಾರವಷ್ಟೇ ಬ್ರೌಚರ್ ಹಂಚುವ ಮೂಲಕ ಮುದಗಾ ಮೀನುಗಾರರಲ್ಲಿ ಜಾಗೃತಿ ಮೂಡಿಸಲಾಗಿತ್ತು ಎಂದರು.
ಈ ಸಂದರ್ಭದಲ್ಲಿ ಕಡಲಾಮೆ ಮೊಟ್ಟೆ ಇಟ್ಟ ಬಗ್ಗೆ ಇಲಾಖೆಗೆ ಮಾಹಿತಿ ನೀಡಿದ ದಾಮೋದರ ಅವರಿಗೆ ಅರಣ್ಯ ಇಲಾಖೆಯಿಂದ ನೀಡಲಾಗುವ ಗೌರವ ಧನ ವನ್ನು ಡಿಸಿಎಫ್ ಅವರು ವಿತರಿಸಿದರು. ಈ ಸಂದರ್ಭದಲ್ಲಿ ಸ್ಥಳೀಯರಾದ ರವಿ ಮುಂತಾದವರಿದ್ದರು.