ಕಾರವಾರ: ಭಟ್ಕಳ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಶಾಸಕ ಸುನಿಲ್ ನಾಯ್ಕ 30 ಸಾವಿರ ಅಂತರದ ಮತಗಳಿಂದ ಸೋಲಿಸಲು ಎಲ್ಲ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಹಿಂದೂಪರ ಸಂಘಟನೆಯ ಕಾರ್ಯಕರ್ತ ಶಂಕರ್ ನಾಯ್ಕ ಭಟ್ಕಳ ಹೇಳಿದ್ದಾರೆ.
ನಗರದ ಪತ್ರಿಕಾಭವನದಲ್ಲಿ ಮಾತನಾಡಿದ ಅವರು ಹಿಂದುತ್ವದ ಆಧಾರದ ಮೇಲೆ ಮತ ಕೇಳುವ ನೈತಿಕತೆಯನ್ನು ಭಟ್ಕಳ ಬಿಜೆಪಿ ಅಭ್ಯರ್ಥಿ ಸುನೀಲ ನಾಯ್ಕ ಕಳೆದುಕೊಂಡಿದ್ದಾರೆ. ಅವರ ವಿರುದ್ಧ ಪ್ರಬಲ ಸ್ಪರ್ಧಿಯಾಗಿರುವ ಮಂಕಾಳ ವೈದ್ಯ ಅವರನ್ನು ಬೆಂಬಲಿಸುತ್ತೇವೆ. ಈಗಾಗಲೆ ಕಾಂಗ್ರೆಸ್ ಅಭ್ಯರ್ಥಿ ಮಂಕಾಳು ವೈದ್ಯ ಪರ ಪ್ರಚಾರ ಆರಂಭಿಸಿದ್ದೇವೆ.
ಹಿಂದುತ್ವದ ಹೆಸರಿನಲ್ಲಿ ಸುನೀಲ್ ನಾಯ್ಕ ಮಾಡುತ್ತಿರುವ ಅವಾಂತರಗಳು ಒಂದೆರಡಲ್ಲ. ಹೀಗಾಗಿ ಸುನೀಲ್ ಅವರಿಗೆ ಟಿಕೆಟ್ ನೀಡಬಾರದು ಎಂದು ಬಿಜೆಪಿಗೆ ಕೇಳಿಕೊಂಡಿದ್ದೆವು. ಆದರೆ ಬಿಜೆಪಿ ನಾಯಕರು ಸುನೀಲ್ ಆಮಿಷಕ್ಕೆ ಒಳಗಾಗಿ ಅವರಿಗೆ ಟಿಕೆಟ್ ಮಾರಿದ್ದಾರೆ ಎಂಬುದು ಸಾಮಾಜಿಕ ಜಾಲತಾಣಗಳಲ್ಲಿ ಕೇಳಿಬರುತ್ತಿದೆ. ಈ ನಿಟ್ಟಿನಲ್ಲಿ ಬಿಜೆಪಿಯ ಪ್ರಬಲ ವಿರೋಧಿ ಅಭ್ಯರ್ಥಿ ಮಂಕಾಳ ವೈದ್ಯ ಅವರಿಗೆ ನಾವೆಲ್ಲರೂ ಬೆಂಬಲಿಸಿ, ಅವರ ಪರ ಪ್ರಚಾರ ಮಾಡುವ ಹಾಗೂ ಅವರನ್ನು ಗೆಲ್ಲಿಸುವ ಕಾರ್ಯ ಮಾಡುತ್ತೇವೆ ಎಂದು ಘೋಷಿಸಿದರು.
ಭಟ್ಕಳ ಕ್ಷೇತ್ರದಲ್ಲಿ ಕನಿಷ್ಠ 200ಕ್ಕೂ ಅಧಿಕ ಹಿಂದೂ ಕಾರ್ಯಕರ್ತರು ಮಂಕಾಳ ವೈದ್ಯರ ಪರ ಕಾರ್ಯನಿರ್ವಹಿಸುತ್ತಿದ್ದು, ಅವರನ್ನು 30 ಸಾವಿರ ಲೀಡ್ ನಲ್ಲಿ ಗೆಲ್ಲಿಸುತ್ತೇವೆ. ಇದು ಬಿಜೆಪಿಯ ಹಿಂದೂ ವಿರೋಧಿ ನೀತಿಗೆ ನಾವು ಹೊಡೆಯುತ್ತಿರುವ ಸೆಡ್ಡು. ಸಂಸದ ಅನಂತಕುಮಾರ್ ಹೆಗಡೆ ಅವರ ಕೃಪಾ ಕಟಾಕ್ಷ ನಮ್ಮ ಮೇಲಿದೆ. ಈ ಧರ್ಮ ಯುದ್ಧದಲ್ಲಿ ನಾವು ಗೆದ್ದೇ ಗೆಲ್ಲುತ್ತೇವೆ ಎಂದ ಅವರು, ಸುನೀಲ್ ನಾಯ್ಕ ವಿರುದ್ಧ ಹಿಂದೂ ವಿರೋಧ ನೀತಿಯನ್ನು ಖಂಡಿಸಿದ್ದಕ್ಕೆ, ಅವರ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿದ್ದಕ್ಕೆ ನನ್ನ ವಿರುದ್ಧ ಗಡಿಪಾರು ಆದೇಶ ಹೊರಡಿಸಲಾಗಿತ್ತು. ಆದರೆ ಅದಕ್ಕೂ ಮುಂಚಿತವಾಗಿ ನನ್ನನ್ನು ಹೊನ್ನಾವರ ಪೊಲೀಸರು ಬಂಧಿಸಿದ್ದರು. ತದನಂತರ ಭಟ್ಕಳ ಉಪವಿಭಾಗಾಧಿಕಾರಿಗೆ ಒತ್ತಡ ಹೇರಿ ಗಡಿಪಾರು ಆದೇಶ ಹೊರಡಿಸಲಾಗಿದೆ. ಈ ಬಗ್ಗೆ ಸ್ವತಃ ಉಪವಿಭಾಗಾಧಿಕಾರಿಗಳೇ ಒಪ್ಪಿಕೊಂಡಿದ್ದಾರೆ. ಅಲ್ಲದೇ ಹೈಕೋರ್ಟ್ ಕೂಡ ನನ್ನ ಗಡಿಪಾರಿಗೆ ತಡೆ ನೀಡಿ, ಇದು ರಾಜಕೀಯ ಪ್ರೇರಿತ ಎಂದು ಆದೇಶದಲ್ಲಿ ತಿಳಿಸಿದೆ ಎಂದರು.
ಭಟ್ಕಳ- ಹೊನ್ನಾವರದಲ್ಲಿ ನಾಲ್ಕು ಮಂದಿಯ ವಿರುದ್ಧ ಐಟಿ, 25ಕ್ಕೂ ಅಧಿಕ ಹಿಂದೂ ಕಾರ್ಯಕರ್ತರ ಮೇಲೆ ಸುನೀಲ್ ನಾಯ್ಕ ಬೆಂಬಲಿಗರು ಪ್ರಕರಣ ದಾಖಲಿಸಿದ್ದಾರೆ. 100ಕ್ಕೂ ಅಧಿಕ ಹಿಂದೂ ಕಾರ್ಯಕರ್ತರ ಮೇಲೆ ಎನ್ಸಿ ಕೇಸ್ ದಾಖಲಿಸಲಾಗಿದೆ. ಇದರಲ್ಲಿ ನಾಮಧಾರಿಗಳೂ ಸೇರಿದ್ದಾರೆ. ಹಾಗಿದ್ದರೆ ಸುನೀಲ್ಗೆ ನಾಮಧಾರಿಗಳು ಯಾಕೆ ಮತ ಹಾಕಬೇಕು ಸುನೀಲ್ ನಾಯ್ಕನಿಗಾಗಿ ಬಿಜೆಪಿ ವಿರುದ್ಧ ಇದ್ದೇವೆ. ಆತನನ್ನು ಠೇವಣಿ ಕಳೆದುಕೊಳ್ಳುವಂತೆ ಮಾಡಿ, ಮಂಕಾಳ ವೈದ್ಯರವರನ್ನು ಕನಿಷ್ಠ 30 ಸಾವಿರ ಮತಗಳಿಂದ ಆರಿಸಿ ತರದಿದ್ದರೆ ನಾವು ಹಿಂದೂಪರ ಹೋರಾಟದಿಂದ ನಿವೃತ್ತಿ ಪಡೆಯುತ್ತೇವೆ ಎಂದು ಶಪಥ ಮಾಡಿದರು. ಮಾಬ್ಲು ನಾಯ್ಕ ಚಿತ್ತಾರ, ಗಣೇಶ ನಾಯ್ಕ, ವಿನಾಯಕ ನಾಯ್ಕ, ಆದಿತ್ಯ, ರಾಜಶೇಖರ, ಇದ್ದರು.