ಕಾರವಾರ: ತಾಲೂಕಿನ ದೇವಭಾಗ್ ಕಡಲತೀರದಲ್ಲಿ ಒಲಿವ್ ರೆಡ್ಲಿ ಪ್ರಜಾತಿಯ ಒಟ್ಟೂ 106 ಕಡಲಾಮೆ ಮರಿಗಳನ್ನು ಶುಕ್ರವಾರ ಸಮುದ್ರಕ್ಕೆ ಬಿಡಲಾಯಿತು. ಕಳೆದ ಕೆಲವು ದಿನಗಳ ಹಿಂದೆ ದೇವಭಾಗ್ ಕಡಲತೀರದಲ್ಲಿ ಆಮೆಯ ಮೊಟ್ಟೆಯನ್ನು ಸಂರಕ್ಷಣೆ ಮಾಡಲಾಗಿತ್ತು.
ಈ ಮೊಟ್ಟೆಗಳಿಂದ ಆಮೆಯ ಮರಿಗಳು ಹೊರ ಬಂದಿದ್ದು ಅವುಗಳನ್ನು ಕಾರವಾರ ಅರಣ್ಯ ವಿಭಾಗದ ಡಿಸಿಎಫ್ ಡಾ. ಪ್ರಶಾಂತಕುಮಾರ್ ಕೆ.ಸಿ., ಮತ್ತು ಎಸಿಎಫ್ ಜಯೇಶ್ ಕೆ.ಸಿ ಅವರ ಮಾರ್ಗದರ್ಶನದಂತೆ ಸಮುದ್ರಕ್ಕೆ ಬಿಡಲಾಯಿತು.
ನವೆಂಬರ್ ನಿಂದ ಮಾರ್ಚ್ ಅವಧಿ ಮೊಟ್ಟೆ ಇರುವ ಸಮಯವಾಗಿದ್ದರಿಂದ ಇಲ್ಲಿಯವರೆಗೆ ಕಾರವಾರ ವಿಭಾಗದ ವ್ಯಾಪ್ತಿಯ ದೇವಭಾಗ್, ಮುದಗಾ, ಮಾಜಾಳಿ, ಭಾವಿಕೇರಿ, ಹಾರವಾಡ, ಮಂಜಗುಣಿ ಸೇರಿ 30 ಗೂಡುಗಳನ್ನು ಸಂರಕ್ಷಿಸಿ ಇಡಲಾಗಿದೆ. ಕರ್ನಾಟಕದ ಕರಾವಳಿಯಲ್ಲಿ ಒಲಿವ್ ರೆಡ್ಲಿ ಕಡಲಮೆಗಳ ಮೊಟ್ಟೆಗಳು ಮಾತ್ರ ಪತ್ತೆಯಾಗಿದ್ದು ಇದು ವನ್ಯ ಜೀವಿ ಸಂರಕ್ಷಣಾ ಕಾಯ್ದೆ 1972ರ ಅನುಭಂದ 1ರಲ್ಲಿ ಸಂರಕ್ಷಿಸಲ್ಪಟ್ಟಿವೆ.
ಮೊಟ್ಟೆಗಳಿಗೆ ತಾಯಿ ಆಮೆಯ ಆರೈಕೆ ಇರದ ಕಾರಣದಿಂದ ಅವುಗಳನ್ನು ಸಂರಕ್ಷಿಸಿ ಮರಿ ಆದ ನಂತರ ಸಮುದ್ರಕ್ಕೆ ಬಿಡಲಾಗುತ್ತದೆ. ಕಳೆದ ಸಾಲಿನಲ್ಲಿ ಕಾರವಾರ ವಿಭಾಗದಲ್ಲಿ ಒಟ್ಟೂ 14 ಗೂಡುಗಳು ಪತ್ತೆಯಾಗಿದೆ. ಅರಣ್ಯ ಇಲಾಖೆಯ ಕೋಸ್ಟಲ್ ಮತ್ತು ಮರೈನ್ ಏಕೋಸಿಸ್ಟಮ್ ಘಟಕದ ಆರಂಭಗೊಂಡ ಬಳಿಕ ಕಡಲ ಜೀವಿ ವೈವಿದ್ಯತೆ ಸಂರಕ್ಷಣೆಯಲ್ಲಿ ತೊಡಗಿದೆ.
ದೇವಭಾಗದ ಸಮುದ್ರಕ್ಕೆ ಆಮೆ ಮರಿಗಳನ್ನು ಬಿಡುವ ಸಂದರ್ಭದಲ್ಲಿ ಚಿತ್ತಾಕುಲಾ ಗ್ರಾಪಂ ಅಧ್ಯಕ್ಷೆ ಸ್ವಾತಿ ದೇಸಾಯಿ, ಸದಸ್ಯರಾದ ಉಲ್ಲಾಸ್ ಜೋಶಿ, ಚಂದ್ರಹಾಸ ಗಿರಪ್, ಸೂರಜ್ ದೇಸಾಯಿ, ಕಡಲ ಜೀವಶಾಸ್ತ್ರ ಸ್ನಾತಕೋತ್ತರ ಕೇಂದ್ರದ ಪ್ರಾಚಾರ್ಯ ಡಾ. ಜೆ. ಎಲ್. ರಾಥೋಡ್, ಪ್ರಾಧ್ಯಾಪಕ ಶಿವಕುಮಾರ್ ಹರಗಿ, ಕಡಲಾಮೆ ಪ್ರೇಮಿಗಳು ಇದ್ದರು.