ಕಾರವಾರ: ಇದು ಹಲವು ವಿಶೇಷತೆಗಳನ್ನು ಹೊಂದಿರುವ ಜಾತ್ರೆ. ಸ್ಥಳೀಯವಾಗಿ ರಂಗೋಲಿ ಜಾತ್ರೆ ಎಂದೇ ಪ್ರಸಿದ್ಧವಾಗಿರುವ ನಗರದ ಮಾರುತಿಗಲ್ಲಿಯ ಶ್ರೀ ಮಾರುತಿ ದೇವರ ಜಾತ್ರಾ ಮಹೋತ್ಸವವು ಗುರುವಾರ ಸಂಪನ್ನಗೊಂಡಿತು. ದೇವಸ್ಥಾನದಲ್ಲಿ ವಿವಿಧ ಪೂಜಾ ಕೈಂಕರ್ಯಗಳು ನೆರವೇರಿದವು.
ದೇವಾಲಯವನ್ನು ವಿಧ ವಿಧದ ಹೂವುಗಳಿಂದ ಅಲಂಕರಿಸಲಾಗಿತ್ತು. ಬಗೆ ಬಗೆಯ ದೀಪಾಲಂಕಾರಗಳಿಂದ ದೇವಾಲಯವು ಶೋಭಿಸುತ್ತಿತ್ತು. ಮಾರುತಿ ಗಲ್ಲಿ, ಬ್ರಾಹ್ಮಣ ಗಲ್ಲಿ, ಕೋಣೆವಾಡಾ ರಸ್ತೆಗಳಲ್ಲಿ ಪ್ರತಿ ಮನೆ, ಅಂಗಡಿಗಳು ದೀಪಾಲಂಕಾರಗಳಿಂದ ಕಂಗೊಳಿಸುತ್ತಿದ್ದವು. ನಗರದ ಪ್ರಮುಖ ಬೀದಿಗಳಲ್ಲಿ ಉತ್ಸವ ಮೂರ್ತಿಯ ಪಲ್ಲಕ್ಕಿ ಮೆರವಣಿಗೆ ಸಾಗಿತು. ಪ್ರಮುಖವಾಗಿ ಕಾಂತಾರ ಸಿನೇಮಾದ ದೈವ ನರ್ತನ, ರಾಷ್ಟ್ರಪತಿ ದ್ರೌಪದಿ ಮುರ್ಮು, ಗಣೇಶ, ಹನುಮಂತ, ಸಾಂಪ್ರದಾಯಿಕ ಶೈಲಿಯ ಚುಕ್ಕಿ ರಂಗೋಗಳು, ಪ್ರಸ್ತುತ ವಿದ್ಯಮಾನದಲ್ಲಿರುವ ಚಿತ್ರ ನಟರುಗಳು, ರಾಜಕೀಯ ವ್ಯಕ್ತಿಗಳು, ದೇವರ ಕಲಾಕೃತಿಗಳು ರಂಗೋಲಿಯಲ್ಲಿ ಆಕರ್ಷಕವಾಗಿ ಮೂಡಿದ್ದವು.
ಏಕದಳ-ದ್ವಿದಳ ಧಾನ್ಯಗಳು, ಹೂವು-ಎಲೆಗಳು, ಹಣ್ಣು-ತರಕಾರಿಗಳಿಂದ ಮತ್ತು ಬಣ್ಣ ಬಣ್ಣದ ಪುಡಿಗಳನ್ನು ಬಳಸಿಕೊಂಡು ಹಲವು ಬಗೆಯ ರಂಗೋಲಿಗಳನ್ನು ಹಾಕಿದ್ದರು. ಸಾವಿರಾರು ಮಂದಿ ಜಾತ್ರೆಗೆ ಭೇಟಿ ನೀಡಿ ರಂಗೋಲಿ ವೀಕ್ಷಿಸಿ ಖುಷಿ ಪಟ್ಟರು. ಪಲ್ಲಕ್ಕಿ ಸಾಗುವ ರಸ್ತೆಯ ಅಕ್ಕ ಪಕ್ಕದ ಮನೆಯವರು, ಅಂಗಡಿಕಾರರು ತಮ್ಮ ತಮ್ಮ ಮನೆಯ ಎದುರಿನಲ್ಲಿ ವಿವಿಧ ರೀತಿಯ ರಂಗೋಲಿಗಳನ್ನು ಪ್ರದರ್ಶನಕ್ಕೆ ಇಟ್ಟಿದ್ದು ವಿಶೇಷವಾಗಿತ್ತು.
ರಂಗೋಲಿ ಸ್ಪರ್ಧೆಯಲ್ಲಿ ಚುಕ್ಕಿ ರಂಗೋಲಿ, ಪುಡಿ ರಂಗೋಲಿ, ಧಾನ್ಯಗಳ ರಂಗೋಲಿ ಮೊದಲಾದವುಗಳು ವಿಶೇಷ ಗಮನ ಸೆಳೆದವು. ಪ್ರತಿ ಬಾರಿಯೂ ಈ ಜಾತ್ರೆಗೆ ರಂಗೋಲಿ ನೋಡಲೇಂದೇ ತಾಲೂಕು ಮಾತ್ರವಲ್ಲದೇ ನೆರೆ ರಾಜ್ಯಗಳಾದ ಗೋವಾ ಹಾಗೂ ಮಹಾರಾಷ್ಟ್ರಗಳಿಂದಲೂ ಜನರು ಬರುತ್ತಾರೆ.