ಕಾರವಾರ: ಜಿಲ್ಲೆಯ ಮುಂಡಗೋಡ ತಾಲೂಕಿನ ಚೀಗಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಗಣೇಶಪುರದ ನರೇಗಾ ಕಾಮಗಾರಿ ಸ್ಥಳದಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕಾರ್ಯ ನಿರ್ವಹಿಸುವ ಕೂಲಿ ಕಾರರ ಆರೋಗ್ಯ ಸಮಸ್ಯೆಗಳ ನಿವಾರಣೆ ಉದ್ದೇಶದಿಂದ ಕೂಲಿಕಾರರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ರಾಷ್ಟ್ರೀಯ ರೈತ ದಿನಾಚರಣೆ ನಿಮಿತ್ತ ನಮ್ಮ ನಡಿಗೆ ಅನ್ನದಾತನ ಕಡೆಗೆ ಎಂಬ ಧ್ಯೆಯವ್ಯಾಕ್ಯದಡಿ ಜಲ ಸಂಜೀವಿನಿ-ರೈತ ಸಂವಾದವನ್ನು ನಡೆಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿದ ತಾಲೂಕು ಪಂಚಾಯತ್ನ ಕಾರ್ಯ ನಿರ್ವಾಹಕ ಅಧಿಕಾರಿಗಳಾದ ಪ್ರವೀಣ್ ಕಟ್ಟಿ ಅವರು ಮಾತನಾಡಿ, ಸರ್ಕಾರವು ನರೇಗಾದಂತಹ ಹಲವು ಯೋಜನೆಗಳನ್ನು ಜಾರಿಗೊಳಿಸಿ ಗ್ರಾಮೀಣ ಪ್ರದೇಶಗಳ ಸಮಗ್ರ ಅಭಿವೃದ್ದಿ ಕಾರ್ಯಕ್ಕೆ ಮುಂದಾಗಿದೆ. ಜೊತೆಗೆ ಸ್ಥಳಿಯ ಜನರಿಗೆ ಸಮಾನ ಕೆಲಸ, ಸಮಾನ ಕೂಲಿ ನೀಡಿ ಗ್ರಾಮಗಳ ಉನ್ನತಿಯ ಜವಾಬ್ದಾರಿಯನ್ನು ಗ್ರಾಮೀಣ ಜನರಿಗೆ ವಹಿಸಲಾಗಿದೆ. ಹೀಗಾಗಿ ಪ್ರತಿಯೊಬ್ಬರೂ ಗ್ರಾಮ ಪಂಚಾಯತಿ ಸಂಪರ್ಕಿಸಿ ಉದ್ಯೋಗ ಚೀಟಿ ಪಡೆದುಕೊಂಡು ನರೇಗಾದಡಿ ಕೈಗೊಳ್ಳುವ ಸಮುದಾಯ ಕಾಮಗಾರಿಗಳಲ್ಲಿ ಕೆಲಸ ಮಾಡಬೇಕು. ಜೊತೆಗೆ ವೈಯಕ್ತಿ ಕಾಮಗಾರಿಗಳನ್ನು ಪಡೆದುಕೊಂಡು ಆರ್ಥಿಕ ಸಬಲತೆ ಸಾಧಿಸಬೇಕು. ಹಾಗೇ ಆರೋಗ್ಯದತ್ತ ಗಮನ ಹರಿಸಿ ವೈಯಕ್ತಿ ಪೌಷ್ಠಿಕ ಕೈತೋಟ ಮಾಡಿಕೊಂಡು ಪೌಷ್ಟಿಕಾಂಶಯುಕ್ತ ಆಹಾರ ಪದಾರ್ಥ ಸೇವನೆಗೆ ಆದ್ಯತೆ ನೀಡಬೇಕು.
ಜಿಲ್ಲಾ, ತಾಲೂಕಾ ಹಾಗೂ ಗ್ರಾಮ ಪಂಚಾಯತಿ ವತಿಯಿಂದ ಕಾಮಗಾರಿ ಸ್ಥಳದಲ್ಲಿ ಕೂಲಿಕಾರರಿಗೆ ಆಯೋಜಿಸುವ ಉಚಿತ ಆರೋಗ್ಯ ತಪಾಸಣಾ ಶಿಬಿರಗಳಲ್ಲಿ ಪಾಲ್ಗೊಂಡು ತಮ್ಮ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಮೂಲಕ ಸೂಕ್ತ ಔಷಧೋಪಚಾರ ಪಡೆಯಬೇಕು ಎಂದರು.
ನರೇಗಾ ಸಹಾಯಕ ನಿರ್ದೇಶಕರಾದ ಟಿ.ವಾಯ್. ದಾಸನಕೊಪ್ಪ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಉದ್ಯೋಗ ಖಾತರಿ ಕೆಲಸದಡಿ ದುಡಿಯುವ ಕೈಗಳ ಆರೋಗ್ಯದ ಕಾಳಜಿ ನಮ್ಮ ಜವಾಬ್ದಾರಿಯಾಗಿದೆ. ಹೀಗಾಗಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ, ಜಿಲ್ಲಾ ಹಾಗೂ ತಾಲೂಕು ಪಂಚಾಯತ್ನ ಮುಖ್ಯಸ್ಥರ ನಿರ್ದೇಶನದಂತೆ ತಾಲೂಕಿನ ಚೀಗಳ್ಳಿಯಲ್ಲಿ ಕೂಲಿಕಾರರಿಗೆ ಈ ಉಚಿತ ಆರೋಗ್ಯ ತಪಾಸಣಾ ಶಿಬಿರ ಕೈಗೊಳ್ಳಲಾಗಿದೆ. ಕೂಲಿಕಾರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶಿಬಿರದ ಸದುಪಯೋಗ ಪಡೆಯಬೇಕು.
ಜೊತೆಗೆ ನೀರು, ಮಣ್ಣು, ಪರಿಸರದ ಸಂರಕ್ಷಣೆಗಾಗಿ ವೈಜ್ಞಾನಿಕ ವಿಧಾನ ಬಳಸಿ ನರೇಗಾದಡಿ ಕೈಗೊಳ್ಳುವ ಕಾಮಗಾರಿಗಳಲ್ಲಿ ಗ್ರಾಮದ ಜನರು, ರೈತರ ಪಾತ್ರವು ಅತ್ಯಗತ್ಯವಾಗಿದೆ. ಹೀಗಾಗಿ ಪ್ರತಿಯೊಬ್ಬರೂ ಗ್ರಾಮ ಪಂಚಾಯತಿಯಲ್ಲಿ ಜರುಗುವ ಜಲ ಸಂಜೀವಿನಿ ಕ್ರಿಯಾ ಯೋಜನೆ ತಯಾರಿಕೆ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ತಿಳಿಸಿದರು. ನರೇಗಾದಡಿ ಲಭ್ಯವಿರುವ ಕೃಷಿ, ತೋಟಗಾರಿಕೆ, ಹಾಗೂ ವಿವಿಧ ಕಾಮರಿಗಳ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು. ಗ್ರಾಮೀಣ ಜನರ ಮಾರ್ಗದರ್ಶನದ ಮೇರೆಗೆ ಅಮೃತ ಸರೋವರ ನಿರ್ಮಾಣಕ್ಕೆ ಮುಂದಾಗಿದ್ದೆವೆ. ಇದಕ್ಕೆ ಪೂರಕ ಸಲಹೆ ಸೂಚನೆಗಳನ್ನು ನೀಡಬೇಕು. ಹಾಗೇ ಎಲ್ಲರಿಗೂ ಇ-ಶ್ರಮ ಕಾರ್ಡ್ ಪಡೆಯಲು ಅನುಕೂಲತೆ ಕಲ್ಪಿಸಲಾಗಿದ್ದು, ಇದರ ಸದುಪಯೋಗ ಪಡೆಯಬೇಕು ಎಂದರು.
ಚಿಗಳ್ಳಿ ಡ್ಯಾಂಗೆ ಹೊಂದಿಕೊಂಡಿರುವ ಕಾಲುವೆ ಹೂಳೆತ್ತುವ ಕಾರ್ಯದಲ್ಲಿ ಭಾಗಿಯಾಗಿದ್ದ ಈ ವೇಳೆ 65 ಕೂಲಿಕಾರರು ಕೆಲಸದ ಮಧ್ಯೆ ಆರೋಗ್ಯ ತಪಾಸಣಾ ಶಿಬಿರದಲ್ಲಿ ಪಾಲ್ಗೊಂಡು ಬಿಪಿ, ಶುಗರ್, ಇತರೆ ಸಾಮಾನ್ಯ ತಪಾಸಣೆಗೆ ಒಳಗಾದರು. ಇದೇ ವೇಳೆ ಆರೋಗ್ಯ ಇಲಾಖೆ ಅಧಿಕಾರಿಗಳು ಕೂಲಿಕಾರರಿಗೆ ಆರೋಗ್ಯ ಸಮಸ್ಯೆಗಳಿಗೆ ಅನುಗುಣವಾಗಿ 100ಕ್ಕೂ ಅಧಿಕ ಮಂದಿಗೆ ಚಿಕಿತ್ಸೆ ಹಾಗೂ ಔಷಧೋಪಚಾರ ಮಾಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಭಾರತಿ ನಿಂಬಾಯಿ, ಉಪಾಧ್ಯಕ್ಷರು ಹುಲಿಗೆವ್ವ ಶ್ರೀಗೇರ, ಸದಸ್ಯರು, ಪಂಚಾಯತ್ ಅಭಿವೃದ್ದಿ ಅಧಿಕಾರಿ ಶಿವಾಜಿ ವಾಯ್. ವಾಸಂಬಿ, ತಾಲೂಕು ಪಂಚಾಯತ್ ತಾಂತ್ರಿಕ ಸಂಯೋಜಕರು, ಜಿಲ್ಲಾ ಹಾಗೂ ತಾಲೂಕು ಐಇಸಿ ಸಂಯೋಜಕರು, ತಾಂತ್ರಿಕ ಸಹಾಯಕರು, ಪಂಚಾಯತ್ ಸಿಬ್ಬಂದಿಗಳು, ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು, ಊರ ನಾಗರಿಕರು ಹಾಜರಿದ್ದರು.