ಕಾರವಾರ: ನಗರದ ಕೋಡಿಭಾಗದ ಕಡಲತೀರದಲ್ಲಿ ಕಳೆದ ಒಂದು ವಾರದಿಂದ ನಡೆಯುತ್ತಿರುವ ನೌಸೇನಾ ಸಮುದ್ರಯಾನ ತರಬೇತಿ ಶಿಬಿರಕ್ಕೆ ಎನ್ಸಿಸಿ ಕರ್ನಾಟಕ ಮತ್ತು ಗೋವಾ ಉಪ ಮಹಾನಿರ್ದೇಶಕ ಏರ್ ಕಮೋಡೊರ್ ಬಿ.ಎಸ್ ಕನ್ವರ್ ಮಂಗಳವಾರ ಭೇಟಿ ನೀಡಿ ಕೆಡೆಟ್ಗಳ ತರಬೇತಿ ವೀಕ್ಷಿಸಿದರು.
ರಾಜ್ಯದ ವಿವಿಧ ಭಾಗಗಳಿಂದ ಆಯ್ಕೆಯಾದ ಸುಮಾರು ೬೦ಕ್ಕೂ ಹೆಚ್ಚು ಕೆಡೆಟ್ಗಳು ತರಬೇತಿಯಲ್ಲಿ ಪಾಲ್ಗೊಂಡಿದ್ದು, ಸಮುದ್ರಯಾನ, ಹಾಯಿ ದೋಣಿ ಚಲಾವಣೆ ಬಗ್ಗೆ ತರಬೇತಿ ಪಡೆಯುತ್ತಿದ್ದಾರೆ. ಇದನ್ನು ವೀಕ್ಷಿಸಿ ಮಾಹಿತಿ ಪಡೆದ ಏರ್ ಕಮೋಡೊರ್ ಬಿ.ಎಸ್ ಕನ್ವರ್ ಬಳಿಕ ಜಿಲ್ಲೆಯ ಎನ್ಸಿಸಿ ಭೂಸೇನಾ ಹಾಗೂ ನೌಸೇನಾ ಪ್ರಧಾನ ಕಚೇರಿಗೆ ಭೇಟಿ ನೀಡಿದ್ದರು.
ಈ ವೇಳೆ ಕೆಡೆಟ್ಗಳಿಂದ ಗೌರವ ವಂದನೆ ಸಲ್ಲಿಸಲಾಯಿತು. ಬಳಿಕ ನಗರದ ಪಾಲಿಟೆಕ್ನಿಕ್ ಮಹಾವಿದ್ಯಾಲಯದಲ್ಲಿ ನಡೆಯುತ್ತಿರುವ ತರಬೇತಿ ಶಿಬಿರಕ್ಕೆ ಭೇಟಿ ನೀಡಿ ಕರ್ನಾಟಕ ಗೋವಾ ರಾಜ್ಯವನ್ನು ಪ್ರತಿನಿಧಿಸುತ್ತಿರುವ ಕೆಡೆಟ್ಗಳೊಂದಿಗೆ ಸಂವಾದ ನಡೆಸಿದರು. ಬಳಿಕ ವಿಶಾಖಪಟ್ಟಣದ ನೆವೆಲ್ ಬೆಸ್ ಐಎನ್ಎಸ್ ಸರ್ಕಾರದಲ್ಲಿ ಅ.೨ ರಿಂದ ಅ.೧೨ರವರೆಗೆ ನಡೆಯಲಿರುವ ಅಂತಿಮ ಶಿಬಿರದಲ್ಲಿ ಉತ್ತಮ ಸಾಧನೆ ಮಾಡುವಂತೆ ಕೆಡೆಟ್ಗಳಿಗೆ ಸಲಹೆ ನೀಡಿದರು.
ಈ ವೇಳೆ ನೆವೆಲ್ ಘಟಕದ ಮುಖ್ಯಸ್ಥರಾದ ಕಮಾಂಡರ್ ಸತ್ಯನಾಥ ಭೋಸ್ಲೆ, ಕುಮಟಾ ಎವಿ ಬಾಳಿಗಾ ಮಹಾವಿದ್ಯಾಲಯದ ಎನ್ಸಿಸಿ ನೆವೆಲ್ ವಿಂಗ್ ಅಧಿಕಾರಿ ಲೆಪ್ಟಿನೆಂಟ್ ವಿ.ಆರ್. ಶಾನಭಾಗ, ಕಾರವಾರದ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಎನ್ಸಿಸಿ ಅಧಿಕಾರಿ ಸಬ್ ಲೆಪ್ಟಿನೆಂಟ್ ಗೀತಾ ತಳವಾರ್ ಸೇರಿದಂತೆ ಇನ್ನಿತರ ಸಿಬ್ಬಂದಿಗಳು ಇದ್ದರು.