ಕಾರವಾರ: ತಮಗೆ ಜೀವ ಬೆದರಿಗೆ ಇರುವುದಾಗಿ ನಗರದ ಪತ್ರಿಕಾಭವನದಲ್ಲಿ ಶಾಸಕಿ ರೂಪಾಲಿ ನಾಯ್ಕ ಅವರು ಬಹಿರಂಗಪಡಿಸಿದರು. ಕಳೆದ ಚುನಾವಣೆಯ ಮೊದಲಿನಿಂದ, ಚುನಾವಣೆಯ ಬಳಿಕ ಹಾಗೂ ಇಲ್ಲಿಯವರೆಗೆ ಬೆದರಿಕೆಗಳು, ತಮ್ಮ ವಾಹನ ಬೆನ್ನಟ್ಟಿ ಕೇರಳ, ಪಶ್ಚಿಮ ಬಂಗಾಳ ಮತ್ತಿತರ ರಾಜ್ಯದ ನೋಂದಣಿ ಸಂಖ್ಯೆಯ ಕಾರು, ಲಾರಿಗಳು ರಾತ್ರಿಯ ವೇಳೆಯಲ್ಲಿ ಬರುತ್ತಿವೆ.
ನಂಬರ್ ಪ್ಲೇಟ್ ಇಲ್ಲದ, ಹೆಲ್ಮಟ್ ಹಾಕಿಕೊಂಡು ಬೈಕ್ಗಳಲ್ಲಿ ನನ್ನ ಕಾರುಗಳನ್ನು ಹಿಂಬಾಲಿಸುವ ಮೂಲಕ ನನಗೆ ಬೆದರಿಕೆ ಒಡ್ಡುವ ಘಟನೆಗಳು ನಡೆದಿವೆ. ಮಧ್ಯರಾತ್ರಿ ನನ್ನ ಮನೆಯ ಓಣಿಗಳಲ್ಲಿನ ವಿದ್ಯುತ್ ತೆಗೆದು. ಬೈಕ್ ಗಳನ್ನು ಮನೆಯ ಸುತ್ತ ಅಪರಿಚಿತರು ತಿರುಗಾಡುವ ಘಟನೆಗಳೂ ನಡೆದಿವೆ ಎಂದರು. ನನ್ನನ್ನು ಬೆದರಿಸುವ ಮೂಲಕ ರಾಜಕೀಯವಾಗಿ ಹಿನ್ನಡೆ ತಂದು ತಾವು ಬೇಳೆ ಬೇಯಿಸಿಕೊಳ್ಳಬೇಕು ಎಂದು ಕೆಲವರು ಹೊಂಚು ಹಾಕುತ್ತಿದ್ದಾರೆ. ಆದರೆ, ಅದು ಸಾಧ್ಯವಿಲ್ಲ.
ಪ್ರಾಮಾಣಿಕವಾಗಿ ಜನರ ಸೇವೆ ಮಾಡುತ್ತಿದ್ದೇನೆ. ಕಳೆದ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ನನ್ನ ಮೇಲೆ ಅನೇಕ ಬಾರಿ ಹಲ್ಲೆಗೆ ಪ್ರಯತ್ನ ನಡೆದಿತ್ತು. ಆ ಬಗ್ಗೆ ಆ ಸಂದರ್ಭದಲ್ಲಿ ದೂರುಗಳನ್ನು ನೀಡಿದ್ದೇನೆ ಎಂದು ಶಾಸಕರು ತಿಳಿಸಿದರು. ಚುನಾವಣೆಯ ನಂತರದಲ್ಲಿಯೂ ಬೆದರಿಸುವ ಘಟನೆಗಳು ನಿರಂತರವಾಗಿ ನಡೆದುಕೊಂಡು ಬಂದಿದೆ. ನಾನು ಮನೆಗೆ ಬರುವ ಹೊತ್ತಿಗೆ ಮನೆಯ ಮುಂದೆ ಇರುವ ಬೀದಿದೀಪ ತೆಗೆಯುತ್ತಾರೆ. ಈ ಬಗ್ಗೆ ಹಿಂದಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಪೆನ್ನೆಕರ್ ಅವರ ಗಮನಕ್ಕೆ ತಂದಿದ್ದೇನೆ.
ವಿಷಯ ತಿಳಿದ ನಂತರದಲ್ಲಿ ಅವರು ಮಹಿಳಾ ಪೊಲೀಸರನ್ನು ಮನೆಯ ಹತ್ತಿರ ನೇಮಕ ಮಾಡಿದ ಬಳಿಕ ದೀಪ ಆರಿಸುವುದು ನಿಂತು ಹೋಗಿದೆ ಎಂದರು. ಯಾರೂ ಈ ರೀತಿ ಮಾಡುತ್ತಿದ್ದಾರೆ ಎನ್ನುವುದನ್ನು ಪತ್ತೆ ಮಾಡಲು ಕೆಇಬಿ ಅಧಿಕಾರಿಗಳಿಗೆ ತಿಳಿಸಿದ್ದೇನೆ. ಈ ಬಗ್ಗೆ ಡಿವೈಎಸ್ಪಿ ಡಿಸೋಜಾ ಅವರಿಗೂ ತಿಳಿಸಿದ್ದೇನೆ.
ಮನೆಗೆ ಪೊಲೀಸರ ನಿಯೋಜನೆ ಮಾಡಿದ ಬಳಿಕ ಈ ಪ್ರಕರಣಗಳು ಕಡಿಮೆಯಾಗಿದೆ ಎಂದು ಅವರು ಮಾಹಿತಿ ನೀಡಿದರು. ಟ್ರಕ್ ಮೂಲಕ ನಾನಿರುವ ವಾಹನಕ್ಕೆ ಗುದ್ದಿಸಲು ಪ್ರಯತ್ನಿಸಿದರು. ಟ್ರಕ್ ನಮ್ಮ ವಾಹನದ ಹಿಂದೆ ಬರುವುದನ್ನು ಗಮನಿಸಿ ನಾವು ಅಲರ್ಟ್ ಆದ ಬಳಿಕ ವಿರೋಧಿಗಳ ಪ್ಲಾನ್ ಕೈಕೊಟ್ಟಿತು ಎಂದರು.
ನನ್ನ ಮತ್ತು ನನ್ನ ಅಕ್ಕನ ಮಗನ ಕಿಡ್ನಾಪ್ ಮಾಡಲು ಪ್ರಯತ್ನಗಳು ಈ ಹಿಂದೆ ನಡೆದಿತ್ತು. ಈಗಲೂ ನಡೆಯುತ್ತಿದೆ. ಏನಾದರೂ ಮಾಡಿ ರಾಜಕೀಯವಾಗಿ ನಮ್ಮನ್ನು ದೂರ ಮಾಡಿದರೆ ತಮ್ಮ ಲೆಕ್ಕಚಾರ ಸುಲಭವಾಗಲಿದೆ ಎನ್ನುವುದನ್ನು ವಿರೋಧಿಗಳು ಲೆಕ್ಕಹಾಕಿದ್ದಾರೆ ಎಂದು ರೂಪಾಲಿ ನಾಯ್ಕ ಅವರು ತಿಳಿಸಿದರು.