ಕಾರವಾರ: ಡಿ.21 ರಂದು ತಾಲೂಕಿನ ಅರ್ಗಾ ಸಂಕ್ರುಭಾಗದ ಸೀಬರ್ಡ್ ಗೇಟನ್ನು ಬಂದ್ ಮಾಡಿ ಜಿಲ್ಲಾಧಿಕಾರಿ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ಮಾಡಲಿದ್ದೇವೆ ಎಂದು ಜಿಲ್ಲಾ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ರಾಘು ನಾಯ್ಕ ಹೇಳಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು ಸೀಬರ್ಡ್ ನಿರಾಶ್ರಿತರಿಗೆ ಉದ್ಯೋಗ ಒದಗಿಸುವ ನಿಟ್ಟಿನಲ್ಲಿ ಸೀಬರ್ಡ್ ಟೈಗರ್ಸ್ ಎನ್ನುವ ಸಂಘಟನೆಯನ್ನು ಕಟ್ಟಿಕೊಂಡಿದ್ದೇವೆ. ಸೀಬರ್ಡ್ ಯೋಜನೆಯಲ್ಲಿ ಜಮೀನು ಕಳೆದುಕೊಂಡು ನಿರಾಶ್ರಿತರಾದ ಕಾರವಾರದ ಸ್ಥಳೀಯರು ಉದ್ಯೋಗದಿಂದ ವಂಚಿರಾಗಿದ್ದಾರೆ. ಬದಲಾಗಿ ಬಿಹಾರ, ರಾಜಸ್ಥಾನ, ಉತ್ತರ ಪ್ರದೇಶ ಸೇರಿದಂತೆ ಹೊರ ರಾಜ್ಯದವರಿಗೆ ಮಣೆ ಹಾಕಲಾಗಿದೆ. ಹೀಗಾಗಿ ಡಿ. 21 ರಂದು ಇಲ್ಲಿನ ಸಂಕ್ರುಭಾಗದ ಸೀಬರ್ಡ್ ಗೇಟನ್ನು ಬಂದ್ ಮಾಡಿ ಪ್ರತಿಭಟನೆ ಮಾಡುತ್ತೇವೆ. ಜತೆಗೆ ಅಲ್ಲಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಪಾದಯಾತ್ರೆ ನಡೆಸಿ ಜಿಲ್ಲಾಧಿಕಾರಿ ಕಚೇರಿ ಎದುರು ಒಂದು ದಿನದ ಉಪವಾಸ ಸತ್ಯಾಗ್ರಹ ಮಾಡುತ್ತೇವೆ ಎಂದರು.
ಸಿಬರ್ಡ್ ಯೋಜನೆಗೆ ಅಡಿಗಲ್ಲು ಹಾಕಿದಾಗ ರಾಜೀವ ಗಾಂಧಿಯವರೇ ಸ್ಥಳೀಯರಿಗೆ ಉದ್ಯೋಗ ನೀಡುವುದಾಗಿ ಹೇಳಿದ್ದರು. ಅದರಂತೆ ಐಟಿಐ ತರಬೇತಿಯನ್ನು ಕೂಡ ಪ್ರಾರಂಭಿಸಿದ್ದರು. ಆದರೆ ಈ ವರೆಗೆ ಉದ್ಯೋಗವೇ ದೊರೆತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾರವಾರದಲ್ಲಿ ಸಾಕಷ್ಟು ವಿದ್ಯಾವಂತರಿದ್ದಾರೆ. ಆದರೆ ಕೆಲವೇ ಜನರು ಮಾತ್ರ ಸೀಬರ್ಡ್ ನಲ್ಲಿ ದಿದಗೂಲಿ ಕೆಲಸಕ್ಕಿದ್ದಾರೆ. ಇನ್ನು ಕೆಲವರನ್ನು ಕೇವಲ ವಾಹನ ಚಾಲಕರಾಗಿ ನೆಮಿಸಿಕೊಂಡು ಹೆಚ್ಚುವರಿ ಕೆಲಸಗಳನ್ನು ಮಾಡಿಸುತ್ತಿದ್ದಾರೆ. ಸರಿಯಾದ ಉದ್ಯೋಗ ಭತ್ಯಯನ್ನೂ ನೀಡುತ್ತಿಲ್ಲ.
ಈ ಎಲ್ಲಾ ಸಮಸ್ಯೆಗಳ ಜತೆಗೆ ಸ್ಥಳೀಯರಿಗೆ ಉದ್ಯೋಗ ನೀಡುವ ಕುರಿತು ಈ ಹಿಂದೆ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರಿಗೆ ಮನವಿ ನೀಡಿದ್ದೆವು. 10 ದಿನಗಳ ಬಳಿಕ ಸೀಬರ್ಡ್ ಅಧಿಕಾರಿಗಳು ಹಾಗೂ ನಿರಾಶ್ರಿತರ ಸಭೆ ನಡೆಸುತ್ತೇವೆ ಎಂದಿದ್ದರು. ಆದರೆ ಅದಿನ್ನೂ ಆಗದ ಕಾರಣ ಪ್ರತಿಭಟನೆಗೆ ಮುಂದಾಗಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಅರುಣ ಹರ್ಕಡೆ, ಶಬ್ಬೀರ್ ಶೇಕ್, ನಿಖಿಲ್ ದೇಶಮುಖ, ಅನ್ವರ್ ಖಾನ, ಶಂಕರ ಗುನಗಿ, ಚಂದ್ರಕಾಂತ ನಾಯ್ಕ ಮುಂತಾದವರು ಇದ್ದರು.