ಕಾರವಾರ: ಸಮಾಜದಲ್ಲಿ ದುಡಿಯುವ ವರ್ಗದವರಿಗೆ ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಾಗ ಮಾತ್ರ ಸಾಮಾಜಿಕ, ಆರ್ಥಿಕ ನ್ಯಾಯ ಸಿಗುತ್ತದೆ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಡಿ. ಎಸ್. ವಿಜಯಕುಮಾರ್ ಅವರು ಹೇಳಿದರು.
ನಗರದ ಕೋಡಿಭಾಗದ ಸಾಗರ ದರ್ಶನ ಹಾಲ್ ಬಳಿಯ ಮೀನುಗಾರರ ಸಮುದಾಯ ಭವನದಲ್ಲಿ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಮೀನುಗಾರಿಕೆ ಇಲಾಖೆಯ ವತಿಯಿಂದ ಶನಿವಾರ ನಡೆದ ಮೀನುಗಾರರಿಗೆ ಕಾನೂನು ಸೇವೆಗಳ ಶಿಬಿರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮೀನುಗಾರರ ಸಮುದಾಯದಲ್ಲಿ ಬೇರೆ ಬೇರೆ ವರ್ಗದ ದುಡಿಯುವ ಜನರು ಇದ್ದಾರೆ. ಆದರೆ ಜೀವನದ ಯಶಸ್ಸಿಗೆ ದುಡಿಮೆಯ ಶ್ರಮದೊಂದಿಗೆ ಶಿಸ್ತು ಕೂಡಾ ಮುಖ್ಯವಾಗುತ್ತದೆ. ಇವೆಲ್ಲದ ನಡುವೆ ಮೂಡನಂಬಿಕೆಗಳನ್ನು ಬಿಟ್ಟು ವೈಜ್ಞಾನಿಕವಾಗಿ ಚಿಂತನೆ ನಡೆಸಿದಾಗ ಸಾಮಾಜಿಕ ಹಾಗೂ ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಸಾಧ್ಯ ಎಂದರು. ಮೀನುಗಾರರಿಗೆ ಕಾನೂನಿನ ಬಗ್ಗೆ ವಿವರಿಸುತ್ತ ಮಾಹಿತಿ ಹಕ್ಕು ಹಾಗೂ ಸಕಾಲ ಅಧಿನಿಯಮಗಳ ಬಗ್ಗೆ ಮಾಹಿತಿ ನೀಡಿದರು. ಇಂತಹ ಅವಕಾಶಗಳಿಂದ ವಿವಿಧ ಯೋಜನೆಗಳ ಮಾಹಿತಿ ಮತ್ತು ಅನುಕೂಲಗಳನ್ನು ಪಡೆದುಕೊಳ್ಳಬೇಕು ಎಂದರು.
ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಮಾತನಾಡಿ ಜಿಲ್ಲೆಯಲ್ಲಿ ಮೀನುಗಾರಿಕೆಯನ್ನು ಅಭಿವೃದ್ಧಿ ಪಡಿಸಲು ಸರಕಾರ ಹಲವು ಯೋಜನೆಗಳನ್ನು ಜಾರಿಯಲ್ಲಿದೆ. ಜಿಲ್ಲೆಯ ಮೀನುಗಾರರು ಸಾಂಸ್ಕೃತಿಕ ವಿಷಯದ ಜೊತೆಗೆ ಹೊಸದಾಗಿರುವ ವೈಜ್ಞಾನಿಕ ವಿಷಯಗಳನ್ನು ಅಳವಡಿಸಿಕೊಂಡರೆ ಆರ್ಥಿಕವಾಗಿ ಸಭಲರಾಗಲು ಸಾಧ್ಯ ಎಂದರು.ಈಗಾಗಲೇ ಆಳ ಸಮುದ್ರ ಮೀನುಗಾರಿಕೆಗೆ ಸರಕಾರದಿಂದ ಸಬ್ಸಿಡಿಗಳನ್ನು ನೀಡಲಾಗುತ್ತಿದೆ.
ಆದರೆ ಜಿಲ್ಲೆಯ ಮೀನುಗಾರರು ಯೋಜನೆಯನ್ನು ಪಡೆಯಲು ಮುಂದಾಗುತ್ತಿಲ್ಲ. ಇವೆಲ್ಲವನ್ನೂ ಬಳಸಿದರೆ ಮೀನುಗರಿಕೆಯಲ್ಲಿ ಜಿಲ್ಲೆಯ ಹೆಸರು ಮುಂಚೂಣಿಗೆ ಬರಲು ಸಾಧ್ಯ ಎಂದರು. ಕಾರ್ಯಕ್ರಮದ ಬಳಿಕ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಕಾರ್ಮಿಕ ಇಲಾಖೆ, ಕಂದಾಯ ಮತ್ತು ಮೀನುಗಾರಿಕೆ ಇಲಾಖೆಯ ವಿಭಿಧ ಯೋಜನೆಗಳನ್ನು ಪಡೆಯಲು ಮೀನುಗಾರರು ಸ್ಥಳದಲ್ಲಿಯೇ ಅರ್ಜಿ ಸಲ್ಲಿಸಿದರು.
ಹೆಚ್ಚುವರಿ ಸೆಷನ್ ನ್ಯಾಯಧೀಶ ಶಿವಾಜಿ ಎ ನೆಲವಡೆ, ಎರಡನೇ ಹೆಚ್ಚುವರಿ ಸೆಷನ್ ನ್ಯಾಯಧೀಶ ಬಿ ಗಣೇಶ, ನ್ಯಾಯವಾದಿಗಳ ಸಂಘದ ಜಿಲ್ಲಾಧ್ಯಕ್ಷ ಅರವಿಂದ ಜಿ ನಾಯಕ, ತಹಸೀಲ್ದಾರ ಎನ್ ಎಫ್ ನರೋನ, ಜಿಲ್ಲಾ ಸಹಕಾರಿ ಮೀನು ಮಾರಾಟಗಾರರ ಸಂಘದ ಅಧ್ಯಕ್ಷ ರಾಜು ತಾಂಡೇಲ, ನ್ಯಾಯವಾದಿ ಆರ್ ಎಸ್ ಹೆಗಡೆ ಗಾಳಿ, ಸಿವಿಲ್ ನ್ಯಾಯಾದೀಶೆ ರೇಷ್ಮಾ ಡಿ ರೋಡ್ರಗೀಸ್, ಮಹಾಂತೇಶ ಎಸ್ ದರಗದ, ರೇಣುಕಾ ಡಿ ರಾಯ್ಕರ, ಅಂಕೋಲಾ ತಾಲೂಕಿನ ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕಿ ರೇನಿಟ ಡಿಸೋಜ, ನ್ಯಾಯಧೀಶ ಶ್ರೀನಿವಾಸ ಪಾಟೀಲ, ಕಾರವಾರ ತಾಲೂಕಿನ ಮೀನುಗಾರಿಕೆ ಇಲಾಖೆಯ ಉಪ ನಿರ್ದೇಶಕಿ ಆರ್ ಕೆ ಕವಿತಾ, ಕಾರವಾರ ನಗರ ಠಾಣೆಯ ಪೊಲೀಸ್ ವೃತ್ತ ನಿರೀಕ್ಷಕ ಸಿದ್ದಪ್ಪ ಬೀಳಗಿ ಹಾಗೂ ಮೀನುಗಾರರು ಇದ್ದರು.