ಕಾರವಾರ: ಜಿಲ್ಲೆಯ ಭಟ್ಕಳ ತಾಲೂಕಿನಲ್ಲಿ ಭಾರಿ ಮಳೆಯಾಗಿದ್ದು ಅನೇಕ ಗ್ರಾಮಗಳು ಮುಳುಗಡೆಯಾಗಿದೆ. ಭಟ್ಕಳದ ಮುಟ್ಟಳ್ಳಿ ಗ್ರಾಮದಲ್ಲಿ ಗುಡ್ಡ ಕುಸಿತದಿಂದ ಮನೆಯಲ್ಲಿ ನಾಲ್ವರು ಸಿಲುಕಿದ್ದಾರೆ.
ತಾಯಿ ಲಕ್ಷ್ಮೀ ನಾಯ್ಕ(48), ಮಗಳು ಲಕ್ಷ್ಮೀ ನಾಯ್ಕ(33), ಮಗ ಅನಂತ ನಾಯ್ಕ(32), ತಾಯಿಯ ಸಹೋದರಿಯ ಮಗ ಪ್ರವೀಣ ನಾಯ್ಕ(20) ಸಿಲುಕಿಕೊಂಡಿದ್ದು ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಅದರಂತೆ ಬೆಂಗಳೂರು ಕಾರವಾರ ರೈಲ್ವೆ ಸಂಚಾರಕ್ಕೆ ತೊಂದರೆ ಆಗಿದೆ. ರೈಲ್ವೆ ಹಳಿಯ ಮೇಲೆ ನೀರು ತುಂಬಿದ್ದರಿಂದ ಸಂಚಾರ ಸಾಧ್ಯವಾಗುತ್ತಿಲ್ಲ. ಹೆಚ್ಚು ಮಳೆಯಾದ ಕಾರಣ ಶಿರಾಲಿ, ಕಾಯ್ಕಿಣಿ, ಮುಂಡಳ್ಳಿ, ಮುಟ್ಟಳ್ಳಿ ಬೆಂಗ್ರೆ ಹಾಗೂ ಮತ್ತೀತರ ಜಲಾವೃತವಾಗಿದೆ.
ಅಗ್ನಿಶಾಮಕ ಇಲಾಖೆ, ಎಸ್.ಡಿ.ಆರ್.ಎಫ್ ತಂಡ, ಪೋಲಿಸ್ ಹಾಗೂ ಜಿಲ್ಲಾಡಳಿತದ ವತಿಯಿಂದ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿರುತ್ತದೆ. ಪ್ರಸ್ತುತ ಶಿರಾಲಿ ಚಂಡಮಾರುತ ಆಶ್ರಯತಾಣ ಹಾಗೂ ಪುರವರ್ಗ ಶಾಲೆಯಲ್ಲಿ ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ.
ಭಟ್ಕಳಕ್ಕೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಭೇಟಿ ನೀಡಿದ್ದಾರೆ. ಸಾರ್ವಜನಿಕರು ಮಳೆಯಿಂದ ತೊಂದರೆ ಒಳಗಾಗಿದ್ದರೆ ಭಟ್ಕಳ ತಾಲೂಕಾ ಕಂಟ್ರೋಲ್ ರೂಮ್ ನಂಬರ 08385-226422, ಜಿಲ್ಲಾ ಕಂಟ್ರೋಲ್ ರೂಮ್ 1077/ 08382-229857 ಸಂಪರ್ಕಿಸಲು ಜಿಲ್ಲಾಡಳಿತ ಕೋರಿದೆ.