ಕಾರವಾರ: ತಾಲೂಕಿನ ಕದ್ರಾ ಗ್ರಾಪಂ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಸೋಮವಾರ ನಡೆದಿದ್ದು, ಬಿಜೆಪಿ ಬೆಂಬಲಿತ ಅಭ್ಯರ್ಥಿ ಶ್ಯಾಮನಾಥ ನಾಯ್ಕ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಕದ್ರಾ ಗ್ರಾ.ಪಂ.ದ 9 ಸದಸ್ಯರಲ್ಲಿ ಶ್ಯಾಮನಾಥ ನಾಯ್ಕರಿಗೆ 5 ಮತಗಳು ಬಿದ್ದರೆ, ಅಶ್ವಿನಿ ಪೆಡ್ನೇಕರರಿಗೆ 4 ಮತಗಳು ಬಿದ್ದವು. ಕದ್ರಾ ಗ್ರಾ.ಪಂ. ಅಧ್ಯಕ್ಷರಾಗಿದ್ದ ಬಿ.ಪಿ.ನಾಯ್ಕರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರಿಂದ ಅಧ್ಯಕ್ಷ ಸ್ಥಾನಕ್ಕೆ ಮರುಚುನಾವಣೆ ನಡೆದಿತ್ತು. ಮಾಜಿ ಅಧ್ಯಕ್ಷ ಬಿ.ಪಿ.ನಾಯ್ಕ ಹಾಗೂ ಬಿಜೆಪಿ ಬೆಂಬಲಿತ ಸದಸ್ಯರು ಶ್ಯಾಮನಾಥ ನಾಯ್ಕರನ್ನು ಬೆಂಬಲಿಸಿದರು.
ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಅಶ್ವಿನಿ ಪೆಡ್ನೇಕರ ಪ್ರತಿಸ್ಪರ್ಧಿಯಾಗಿದ್ದರು. ಶ್ಯಾಮನಾಥ ನಾಯ್ಕ ಅಧ್ಯಕ್ಷರಾಗಿ ಆಯ್ಕೆಯಾಗುತ್ತಿದ್ದಂತೆ ಗ್ರಾ.ಪಂ. ಆವರಣದಲ್ಲಿ ಎಲ್ಲರೂ ಶಾಸಕಿ ರೂಪಾಲಿ ಎಸ್. ನಾಯ್ಕರ ಪರ ಘೋಷಣೆಗಳನ್ನು ಹಾಕಿದರು.
ಈ ಸಂದರ್ಭದಲ್ಲಿ ಮಲ್ಲಾಪುರ ಗ್ರಾ.ಪಂ. ಸದಸ್ಯ ಚಂದ್ರಶೇಖರ ಬಾಂದೇಕರ, ಬಿಜೆಪಿ ಗ್ರಾಮೀಣ ಘಟಕದ ಕಾರ್ಯದರ್ಶಿ ಘನಶ್ಯಾಮ ಬಾಂದೇಕರ, ಎನ್ಪಿಸಿಐಎಲ್ ಕೈಗಾ ಹಾಗೂ ಕೆ.ಪಿ.ಟಿ.ಸಿ.ಎಲ್ ಕದ್ರಾ ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಾರುತಿ ನಾಯ್ಕ, ಕದ್ರಾ ಗ್ರಾ.ಪಂ. ಸದಸ್ಯರಾದ ಬಿ.ಪಿ.ನಾಯ್ಕ ಅಂಬರೀಶ ವಾಸ್ವಾನ, ಸಂಜನಾ ಗೌಡ, ಸಾವಿತ್ರಿ ಎಂ. ಗಂಟಿ, ಮುಖಂಡರಾದ ಅಭಿಲಾಷ ವಾಸ್ವಾನ, ಸಂಜಯ ಗೌಡ, ಮಾನಸಪ್ಪ ಗಂಟಿ ಮುಂತಾದವರು ಇದ್ದರು.