ಕಾರವಾರ: ಡಿ.17 ಮತ್ತು 18 ರಂದು ಜೋಯಿಡಾ ತಾಲ್ಲೂಕಿನ ಉಳವಿಯಲ್ಲಿ ಆಯೋಜಿಸಲಾಗಿರುವ ಉತ್ತರಕನ್ನಡ ಜಿಲ್ಲಾ 22ನೇ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆಯನ್ನು ನಗರದ ಜಿಲ್ಲಾ ಪತ್ರಿಕಾಭವನದಲ್ಲಿ ಗುರುವಾರ ಕಸಾಪ ಜಿಲ್ಲಾಧ್ಯಕ್ಷ ಬಿ. ಎನ್. ವಾಸರೆ ಬಿಡುಗಡೆಗೊಳಿಸಿದರು.
ಬಳಿಕ ಮಾತನಾಡಿದ ಅವರು, ವಚನ ಸಾಹಿತ್ಯಕ್ಕೆ ತನ್ನದೆಯಾದ ಕೊಡುಗೆಯನ್ನು ನೀಡಿರುವ ಉಳವಿಯಲ್ಲಿ 22ನೇ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿದೆ. ಗಡಿ ತಾಲ್ಲೂಕಿನಲ್ಲಿ ನಮ್ಮ ಅವಧಿಯ ಮೊದಲ ಸಮ್ಮೇಳನ ಆಯೋಜಿಸಲಾಗಿದೆ. ದಟ್ಟಾರಣ್ಯದ ಮಧ್ಯೆ ಇರುವ ಉಳವಿಯಲ್ಲಿ ಸಮ್ಮೇಳನ ಆಯೋಜನೆ ಸವಾಲಾಗಿದ್ದರೂ ಕೂಡ ಇಲ್ಲಿಯೇ ಮಾಡಬೇಕೆಂಬ ಉದ್ದೇಶದೊಂದಿಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.
ಸಮ್ಮೇಳನದ ಅಧ್ಯಕ್ಷತೆಯನ್ನು ಅಂಕೋಲಾದ ಸಾಹಿತಿ ಶಾಂತಾರಾಮ ನಾಯ್ಕ ಹಿಚ್ಕಡ ಅವರು ವಹಿಸಲಿದ್ದಾರೆ. ಸಮ್ಮೇಳನವನ್ನು ನಿವೃತ್ತ ನ್ಯಾಯಮೂರ್ತಿ ಎಚ್. ಎನ್. ನಾಗಮೋಹನದಾಸ್ ಉದ್ಘಾಟಿಸಲಿದ್ದಾರೆ. ಆರು ಗೋಷ್ಠಿಗಳು ನಡೆಯಲಿದ್ದು ಎರಡು ದಿನವೂ ಊಟ ವಸತಿ ವ್ಯವಸ್ಥೆಯನ್ನು ಮಾಡಲಾಗಿದೆ. ಅಲ್ಲದೆ ಪುಸ್ತಕ, ವಾಣಿಜ್ಯ ಸೇರಿದಂತೆ ಇತರೆ ಯಾವುದೇ ಮಳಿಗೆ ಇಡುವವರಿಗೆ ಉಚಿತವಾಗಿ ಅವಕಾಶ ಕಲ್ಪಿಸಲಾಗಿದೆ ಎಂದರು.
ಈ ವೇಳೆ ಕಸಾಪ ಗೌರವ ಕಾರ್ಯದರ್ಶಿ ಜಾರ್ಜ್ ಫರ್ನಾಂಡಿಸ್, ಪಿ. ಆರ್. ನಾಯ್ಕ, ಮುರ್ತುಜಾ ಹುಶೇನ, ಕಾರವಾರ ತಾಲ್ಲೂಕಾ ಅಧ್ಯಕ್ಷ ರಾಮಾ ನಾಯ್ಕ, ಪಾಂಡುರಂಗ ಪಟಗಾರ, ಬಾಬು ಶೇಖ್, ಮಾಧವ ನಾಯಕ, ರಮೇಶ ಗುನಗಿ, ಮಹೇಶ ಗೋಳಿಕಟ್ಟಿ ಮುಂತಾದವರು ಇದ್ದರು.