ಕಾರವಾರ: ಉತ್ತರ ಕನ್ನಡ ಜಿಲ್ಲೆಯ ವಿಭಜನೆ ವಿಷಯಕ್ಕೆ ಸಂಬಂಧಿಸಿದಂತೆ ಎಲ್ಲರ ಭಾವನಾತ್ಮಕ ಅಂಶ ಗಮನದಲ್ಲಿಟ್ಟುಕೊಂಡು ಜಿಲ್ಲೆಯ ಶಾಸಕರೊಂದಿಗೆ ಸಭೆ ನಡೆಸಿ ತೀರ್ಮಾನ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಕಾರವಾರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಜಿಲ್ಲೆ ವಿಭಜನೆಯಾದರೆ ಅಭಿವೃದ್ಧಿಯಾಗುತ್ತದೆ. ಯೋಜನೆಗಳು ಬರುತ್ತವೆ ಎನ್ನುವ ಭಾವನೆ ಕೆಲವರಿಗೆ ಇರಬಹುದು. ಆದರೆ ಉತ್ತರ ಕನ್ನಡ ಜಿಲ್ಲೆ ಒಂದಾಗಿರಬೇಕು ಎನ್ನುವ ವಿಚಾರವೂ ಇದೆ. ಇದು ಭಾವನಾತ್ಮ ವಿಷಯವಾಗಿದ್ದರಿಂದ ಶಾಸಕರೊಂದಿಗೆ ಚರ್ಚೆ ನಡೆಸಲಾಗುವುದು ಎಂದರು.
ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆ ವಿಭಜನೆಯದಾಗ ಅಭಿವೃದ್ಧಿಯ ದೃಷ್ಟಿಯಿಂದ ಉತ್ತಮವಾಗಿದೆ. ಇನ್ನು ಭಾವನಾತ್ಮಕ ಅಂಶಗಳು ಇರುವುದರಿಂದ ಉತ್ತರ ಕನ್ನಡ ಜಿಲ್ಲೆಯ ವಿಭಜನೆಯಲ್ಲಿ ಕೆಲವರ ವಿರೋಧ ಇದೆ. ಹೀಗಾಗಿ ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಶಿವರಾಮ ಹೆಬ್ಬಾರ ಸೇರಿದಂತೆ ಶಾಸಕರೊಂದಿಗೆ ಪ್ರತ್ಯೇಕ ಚರ್ಚೆ ನಡೆಸಿ ತೀರ್ಮಾನಕ್ಕೆ ಬರುತ್ತೇವೆ ಎಂದರು.
ಸಿ ಆರ್ ಝೆಡ್ ವಲಯದಲ್ಲಿ ಮರಳು ತೆಗೆಯದಂತೆ ಹಸಿರು ಪೀಠವು ಕೊಟ್ಟಿರುವ ಆದೇಶದ ಹಿನ್ನೆಲೆಯಲ್ಲಿ ಮಂಗಳವಾರ ಕರಾವಳಿಯ ಮೂರು ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಅಧಿಕಾರಿಗಳು ಸಭೆ ನಡೆಸಲಿದ್ದಾರೆ. ಜಿಲ್ಲೆಯಲ್ಲಿ ಸಿ ಆರ್ ಝೆಡ್ ವ್ಯಾಪ್ತಿ ಹೊರತುಪಡಿಸಿ ಇರುವಂತಹ ನದಿಯ ಹರಿವಿನಲ್ಲಿ ಮರಳು ತೆಗೆಯಲು ಅನುಮತಿ ಕೋರಿ ಕೆಲವರು ಮನವಿ ನೀಡಿದ್ದರು. ಹೀಗಾಗಿ ಸಿ ಆರ್ ಝೆಡ್ ವಲಯವನ್ನು ಪುನಃ ಸರ್ವೇ ಮಾಡಲಾಗುತ್ತದೆ ಎಂದರು.