ಕಾರವಾರ: ಪರಿಸರದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಹೊಸ ದೆಹಲಿಯ ಕಂಪ್ಯೂಟರ್ ಶಿಕ್ಷಕರೊಬ್ಬರು ಕಾಶ್ಮಿರದಿಂದ ಕನ್ಯಾಕುಮಾರಿವರೆಗೆ ಸೈಕಲ್ ಪರ್ಯಟನೆಯಲ್ಲಿ ತೊಡಗಿಕೊಂಡಿದ್ದಾರೆ. ಕಳೆದ ಸೆ.26ರಿಂದ ಸೈಕಲ್ ಚಲಾಯಿಸಿ ಪರಿಸರ ಉಳಿಸಿ ಎನ್ನುವ ಅಭಿಯಾನದೊಂದಿಗೆ ಹೊಸ ದೆಹಲಿಯ ವಿಕಾಸ್ ಕುಮಾರ್ ತಮ್ಮ ಸೈಕಲ್ ಮೂಲಕ ಪ್ರಯಾಣವನ್ನು ಆರಂಭಿಸಿದ್ದಾರೆ.
ಜಮ್ಮು-ಕಾಶ್ಮೀರದಿಂದ ಆರಂಭಗೊಂಡು ಕನ್ಯಾಕುಮಾರಿಯಲ್ಲಿ ಸೈಕ್ಲಿಂಗ್ ಮುಕ್ತಾಯವಾಗಲಿದೆ ಈಗಾಗಲೇ ಪಂಜಾಬ, ಹರಿಯಾಣ, ಉತ್ತರ ಪ್ರದೇಶ, ದೆಹಲಿ, ರಾಜಸ್ಥಾನ, ಮಧ್ಯಪ್ರದೇಶ, ಮಹಾರಾಷ್ಟ್ರ, ಗೋವಾ ಹಾಗೂ ಈ ಕರ್ನಾಟಕದ ಕಾರವಾರದಿಂದ ಮುಂದೆ ಸಾಗಿದ್ದಾರೆ. ದೆಹಲಿಯ ಮಂಜಿಲ್ ವೆಲ್ಪೇರ್ ಸೊಸೈಟಿ (ಎನ್.ಜಿಒ) ಮೂಲಕ ಬಡ ಮಕ್ಕಳಿಗೆ ಉಚಿತವಾಗಿ ಕಂಪ್ಯೂಟರ್ ಶಿಕ್ಷಣ ನೀಡುತ್ತಿರುವ ವಿಕಾಸ್ ಕುಮಾರ್ ಪ್ರತಿನಿತ್ಯ 130-150 ಕಿ.ಮೀ. ಸೈಕಲ್ ತುಳಿಯುತ್ತಿದ್ದಾರೆ.
ಕೋವಿಡ್ ಸಂದರ್ಭದಲ್ಲಿ ವಿಕಾಸ್ ಕುಮಾರ್ ಸೇರಿದಂತೆ ಸಮಾನ ಮನಸ್ಕರೆಲ್ಲ ಸೇರಿ ಸಾಕಷ್ಟು ಸಮಾಜ ಸೇವಾ ಕಾರ್ಯ ಮಾಡಿರುವುದಾಗಿ ನೆನೆಸಿಕೊಂಡ ವಿಕಾಸ್, ಕೋವಿಡ್ ಮಹಾಮಾರಿಯಿಂದ ದೇಶದೆಲ್ಲೆಡೆ ಆಮ್ಲಜನಕದ ಕೊರತೆಯಿಂದ ಸಾಕಷ್ಟು ಜನರು ಮೃತಪಟ್ಟಿದ್ದಾರೆ. ಅನೇಕರು ತಮ್ಮ ಆಧಾರ ಸ್ಥಂಭವನ್ನೇ ಕಳೆದುಕೊಡಿದ್ದಾರೆ. ಇದರಿಂದ ತಮಗೆ ಪರಿಸರ ಅವಶ್ಯಕತೆ ಎಷ್ಟಿದೆ ಎನ್ನುವುದನ್ನು ಅರಿತು, ಪರಿಸರ ಜಾಗೃತಿಯ ಬಗ್ಗೆ ಅರಿವು ಮೂಡಿಸುವ ನಿರ್ಧಾರವನ್ನು ಕೈಗೊಳ್ಳಲಾಯಿತು.
ಅದರಂತೆ ಸೆ. 26ರಿಂದ ಸೈಕಲ್ ಚಲಾಯಿಸಿ ಪರಿಸರ ಉಳಿಸಿ ಅಭಿಯಾನ ಆರಂಭಿಸಲಾಯಿತು. ಯಾತ್ರೆಯ ಮಧ್ಯೆ ಜನರಲ್ಲಿ ಮರಗಿಡಗಳನ್ನು ಅವಶ್ಯಕತೆ ಹಾಗೂ ಅವುಗಳನ್ನು ನೆಡುವುದರ ಬಗ್ಗೆ ಜನರಲ್ಲಿ ಕೇಳಿಕೊಳ್ಳಲಾಗಿದೆ. ದೆಹಲಿ, ರಾಜಸ್ಥಾನದಂಥ ರಾಜ್ಯದಲ್ಲಿ ಹೆಚ್ಚಿನ ಗಿಡ-ಮರಗಳನ್ನು ನೆಡುವ ಅವಶ್ಯಕತೆ ಇದೆ ಎನ್ನುತ್ತಾರೆ ವಿಕಾಸ್. ಸೈಕಲ್ ಯಾತ್ರೆಯ ನಡುವೆ ವಿವಿಧ ಶಾಲೆಗಳಿಗೆ ತೆರಳಿ ಮರ-ಗಿಡಗಳ ಅವಶ್ಯಕತೆಗಳ ಬಗ್ಗೆ ತಿಳಿ ಹೇಳಲಾಗಿದೆ.
ಉಳಿದಂತೆ ಸೈಕ್ಲಿಂಗ್ ಮಾಡುವುದರಿಂದ ಆರೋಗ್ಯ ಉತ್ತಮವಾಗಿರುತ್ತದೆ. ನಿತ್ಯ ಸೈಕಲ್ ಬಳಕೆ ಮಾಡುವುದರಿಂದ ಪರಿಸರ ಮಾಲಿನ್ಯ ಸಹ ತಡೆಯಬಹುದು. ಪರಿಸರ ರಕ್ಷಣೆಗೆ ಇದು ಉತ್ತಮ ದಾರಿಯಾಗಿದೆ. ಸೈಕ್ಲಿಂಗ್ ಯಾತ್ರೆಯ ನಡುವೆ ಅನೇಕ ಜನರು, ಸಂಘ ಸಂಸ್ಥೆಗಳು ಸೇರಿದಂತೆ ಆಯಾ ರಾಜ್ಯದ ಪೊಲೀಸರು ತನಗೆ ಸಹಕಾರ ಮಾಡಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಆಮ್ಲಜನಕದ ಕೊರತೆಯಿಂದ ಸಾಕಷ್ಟು ತೊಂದರೆ ಆಗಿದೆ. ಇದರಿಂದ ಪರಿಸರದ ಬಗ್ಗೆ ಜಾಗೃತಿ ಹೆಚ್ಚಿದೆ ಎನ್ನುವುದನ್ನು ಅರಿತಿದ್ದೇನೆ. ಇದರಿಂದ ಸೈಕಲ್ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜಮ್ಮು ಕಾಶ್ಮೀರ್ ದಿಂದ ಕನ್ಯಾಕುಮಾರಿ ಅವರೆಗೆ ಯಾತ್ರೆ ಆರಂಭಿಸಿದ್ದೇನೆ ಎನ್ನುತ್ತಾರೆ ವಿಕಾಸ್ ಕುಮಾರ್.