ಕಾರವಾರ: ಮುಂಬರುವ ಚುನಾವಣೆಯಲ್ಲಿ ಕಾರವಾರ-ಅಂಕೋಲಾ ಕ್ಷೇತ್ರದಲ್ಲಿ ಕ್ಷತ್ರಿಯ ಕೋಮಾರಪಂತ ಸಮಾಜದವರಿಗೆ ಬಿಜೆಪಿ ಪಕ್ಷದಿಂದ ಟಿಕೇಟ್ ನೀಡಬೇಕು ಎಂದು ಸಮಾಜದ ಮುಖಂಡ ಗಜೇಂದ್ರ ನಾಯ್ಕ ಆಗ್ರಹಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು ಕ್ಷತ್ರಿಯ ಕುಲದವರಾದ ಕೋಮಾರಪಂತ ಸಮಾಜದವರು ಇಲ್ಲಿನ ಮೂಲ ನಿವಾಸಿಗಳಾಗಿದ್ದಾರೆ. ಕಾರವಾರ-ಅಂಕೋಲಾ ಕ್ಷೇತ್ರದಲ್ಲಿ ಅತೀ ಹೆಚ್ಚು ಜನಸಂಖ್ಯೆ ಇರುವ ಸಮುದಾಯವಾಗಿದ್ದು 45,000ಕ್ಕೂ ಹೆಚ್ಚು ಮತದಾರರಿದ್ದಾರೆ. ಹಿಂದಿನ ಕಾಲದಲ್ಲಿ ಮೊಘಲರ, ಬ್ರಿಟಿಷರ ವಿರುದ್ಧ ಕೆಚ್ಚೆದೆಯಿಂದ ಹೋರಾಟ ಮಾಡಿರುವ ಇವರಲ್ಲಿ ಹಲವಾರು ಮಂದಿ ನಾಡಿಗಾಗಿ ವೀರ ಮರಣ ಹೊಂದಿದ್ದಾರೆ. ಇಲ್ಲಿನ ಆಡಳಿತ ನೋಡಿಕೊಳ್ಳುತ್ತಿದ್ದ ಚಕಮಕ್ ಜಂಗ್ ಹೆಂಜಾ ನಾಯ್ಕ ಇವರಲ್ಲಿ ಪ್ರಮುಖರಾಗಿದ್ದು ಪೊರ್ಚುಗೀಸರು, ಟಿಪ್ಪು, ಬ್ರಿಟಿಷರ ವಿರುದ್ಧ ಹೋರಾಟ ಮಾಡಿ ನಾಡಿನ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಿದವರಾಗಿದ್ದಾರೆ ಎಂದರು.
ಇದುವರೆಗೂ ಕಾಂಗ್ರೆಸ್, ಜೆಡಿಎಸ್ ಅಥವಾ ಕಾಂಗ್ರೆಸ್ ಯಾವುದರಿಂದಲೂ ಟಿಕೇಟ್ ನೀಡಲಾಗಿಲ್ಲ. ಸಮಾಜದ ಯಾರೂ ಇದುವರೆಗೆ ಶಾಸಕರಾಗಿಲ್ಲ. ಈ ಹಿಂದೆ ಸಮುದಾಯದ ಬಹುತೇಕರು ಕಾಂಗ್ರೆಸ್ ಗೆ ಬೆಂಬಲಿಗರಾಗಿದ್ದರೂ ಆ ಪಕ್ಷದಿಂದ ಯಾವುದೇ ರಾಜಕೀಯ ಲಾಭವಾಗಲಿಲ್ಲ. ಹೀಗಾಗಿ ಸಮಾಜದ ಎಲ್ಲರೂ ಒಮ್ಮತವಾಗಿ ನಿರ್ಧಾರಕ್ಕೆ ಬಂದಿದ್ದು ನಮಗೂ ರಾಜಕೀಯ ಸ್ಥಾನಮಾನ ದೊರೆಯಬೇಕು. ನಾವು ನರೇಂದ್ರ ಮೋದಿಯವರ ಆಡಳಿತದ ಮೇಲೆ ನಂಬಿಕೆ ಇರಿಸಿದ್ದು ಅವರ ದಕ್ಷ ಆಡಳಿತದ ಪರಿಣಾಮ ಬಿಜೆಪಿಗೆ ಸಮುದಾಯದ ಬಹುಸಂಖ್ಯಾತರು ಸೇರ್ಪಡೆಯಾಗಿದ್ದೇವೆ. ಹೀಗಾಗಿ ಈ ಬಾರಿ ಕಾರವಾರ-ಅಂಕೋಲಾ ಕ್ಷೇತ್ರದ ಶಾಸಕ ಅಭ್ಯರ್ಥಿಯ ಟಿಕೆಟ್ ನಮ್ಮ ಸಮುದಾಯದವರಿಗೆ ನೀಡಬೇಕು ಎಂದರು.
ಕೋಮಾರಪಂತ ಸಮಾಜದ ಯಾರಿಗೇ ಆಗಲಿ ಟಿಕೆಟ್ ನೀಡಿದರೂ ಎಲ್ಲರೂ ಅವರಿಗೆ ಬೆಂಬಲವಾಗಿ ನಿಲ್ಲುತ್ತೇವೆ. ಅದನ್ನು ಪಕ್ಷವೇ ನಿರ್ಧರಿಸಲಿ ಎಂದರು.
ಈ ಸಂದರ್ಭದಲ್ಲಿ ಕರಾವಳಿ ಸ್ತ್ರೀ ಶಕ್ತಿ ಒಕ್ಕೂಟದ ಅಧ್ಯಕ್ಷೆ ಚಂದಾ ವಿಜಯ ನಾಯ್ಕ, ಗೋವಾ ಕೋಮಾರಪಂತ ಸಮಾಜದ ಸ್ಥಾಪಕ ರಾಮಚಂದ್ರ ನಾಯ್ಕ ಪ್ರಮುಖರಾದ ಮೋಹನ ಮಾಧು ನಾಯ್ಕ, ವಸಂತ ನಾಯ್ಕ ಅಂಕೋಲಾ, ಸಾಯಿನಾಥ ಮೇತ್ರಿ, ಕಾಶಿನಾಥ ನಾಯ್ಕ, ಜನಾರ್ಧನ ನಾಯ್ಕ, ಶ್ರೀಪಾದ ನಾಯ್ಕ, ಕುಮಾರ ನಾಯ್ಕ, ಅರುಣ ನಾಯ್ಕ, ಸುಧಾಕರ ನಾಯ್ಕ, ಮೀರಾ ನಾಯ್ಕ ಗೋವಾ ಮುಂತಾದವರು ಇದ್ದರು.