ಕಾರವಾರ: ಕಳೆದ ಕೆಲವು ವರ್ಷಗಳ ಹಿಂದೆ ಕೇವಲ ಕೆರೆಯ ರೂಪದಲ್ಲಿದ್ದ ಭೀಮಕೋಲ್ ಕೆರೆ ಈಗ ಪ್ರವಾಸಿಗರ ಮೆಚ್ಚಿನ ತಾಣವನ್ನಾಗಿ ಮಾರ್ಪಾಡು ಮಾಡಲಾಗಿದೆ. ವಿವಿಧ ಯೋಜನೆ ಅಡಿಯಲ್ಲಿ ಲಕ್ಷಾಂತರ ರೂ. ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗಿದೆ. ಈಗ ಈ ತಾಣ ಮಾರ್ಚ್ 17ರಂದು ಲೋಕಾರ್ಪಣೆಗೊಳ್ಳಲಿದೆ.
ಕಾರವಾರ ತಾಲೂಕಿನ ಹಣಕೋಣ ಗ್ರಾಪಂ ವ್ಯಾಪ್ತಿಯ ಗೋಟೆಗಾಳಿ ಗ್ರಾಮದಿಂದ ಸುಮಾರು 4 ಕಿ.ಮೀ. ದೂರದಲ್ಲಿರುವ ಈ ಪ್ರವಾಸಿ ತಾಣಿ ಕಳೆದ 2004 ರಲ್ಲಿ ಕೃಷಿ ಚಟುವಟಿಕೆಗಳಿಗೆ ನೀರು ಪೂರೈಸಲು ಮಾಡಿದ ಚಿಕ್ಕ ಆಣೆಕಟ್ಟು. ಪ್ರಕೃತಿ ಸೌಂದರ್ಯದ ನಡುವೆ ಈ ತಾಣಕ್ಕೆ ಆಗಾಗ ಸ್ಥಳೀಯರು, ಪ್ರವಾಸಿಗರು ಆಗಮಿಸುತ್ತಿದ್ದರಿಂದ ಪ್ರಖ್ಯಾತಿ ಪಡೆಯಿತು. ಬಳಿಕ ಈ ಯೋಜನೆಯನ್ನು ಅಮೃತ ಸರೋವರ ಮಿಶನ್ ಯೋಜನೆ ಅಡಿ ಸೇರಿಸಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಯಿತು. 2021 -22ನೇ ಸಾಲಿನಲ್ಲಿ ಗ್ರಾಪಂ ವ್ಯಾಪ್ತಿಯಲ್ಲಿ ಭೀಮಕೋಲ್ ಕರೆ ತಡೆಗೋಡೆಯ ಮೇಲೆ ವಿಹಾರ ಮಾರ್ಗ ಮತ್ತು ಕುಳಿತುಕೊಳ್ಳುವ ಆಸನ ವ್ಯವಸ್ಥೆ ಮತ್ತು ಕೆರೆಗೆ ಹೋಗಲು ಮೆಟ್ಟಿಲುಗಳನ್ನು ನಿರ್ಮಿಸಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ನಡೆಸಿ ಈಗ ‘ಪಂಚವಟಿ ವನ’ ಭೀಮಕೋಲ್ ಎಂದು ಹೆಸರು ನೀಡಲಾಗಿದೆ. ಸಾಮಾಜಿಕ ಅರಣ್ಯ ವಿಭಾಗದಿಂದ ಪಂಚವಟಿ ವನ ಸೇರಿದಂತೆ ಇತರೆ ಮೂಲಭೂತ ಸೌಕರ್ಯ ಕಲ್ಪಿಸಲಾಗಿದ್ದು ಅತ್ಯಾಕರ್ಷಕ ಪರಗೋಲಾ ಸುತ್ತಮುತ್ತಲಿನ ಪ್ರದೇಶವನ್ನು ಸುಂದರ ಕಾಣಲು ಹಲವು ಅಭಿವೃದ್ಧಿ ಪಡಿಸಲಾಗಿದೆ.
ಕೆರೆಯನ್ನು ಜಿಲ್ಲಾ ಪಂಚಾಚಾಯತ್ನ ಈ ಹಿಂದಿನ ಸಿಇಓ ಪ್ರಿಯಾಂಗ ಎಂ ಅಭಿವೃದ್ಧಿ ಪಡಿಸುವಲ್ಲಿ ಹೆಚ್ಚು ಮುತುವರ್ಜಿ ವಹಿಸಿದ್ದರು. ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಅನುದಾನ ನೀಡಿ ಅಭಿವೃದ್ಧಿ ಪಡಿಸಿದ್ದರು. ಇದೀಗ ಭೀಮಕೋಲ್ ಕೆರೆ ಪ್ರವಾಸಿಗರ ಆಕರ್ಷಣೀಯ ಕೇಂದ್ರವಾಗಿ ರೂಪುಗೊಂಡಿದೆ. ಕೆರೆಯಂಚಿನ ದಡದಲ್ಲಿ ಚೀರೆಕಲ್ಲಿನ ಹಾಸು ನಿರ್ಮಿಸಿ ಮದ್ಯದಲ್ಲಿ ಹುಲ್ಲಿನ ಹಾಸು ಬೆಳೆಸಲಾಗಿದೆ. ಅಲ್ಲದೆ ವಾಕಿಂಗ್ ಪಾತ್, ದಡದುದ್ದಕ್ಕೂ ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಮಾಡಲಾಗಿದೆ. ಇದೀಗ ಸ್ಥಳೀಯರು ಮಾತ್ರವಲ್ಲದೆ ಜಿಲ್ಲೆ ಹೊರ ಜಿಲ್ಲೆಯಿಂದಲೂ ಸಾಕಷ್ಟು ಪ್ರವಾಸಿಗರು ಬಂದು ತೆರಳುತ್ತಿದ್ದಾರೆ.
ದಿನದಿಂದ ದಿನಕ್ಕೆ ಪ್ರವಾಸಿಗರ ಸಂಖ್ಯೆ ಸಹ ಹೆಚ್ಚಾಗುತ್ತಿದ್ದರಿಂದ ಇದರ ಪಕ್ಕದ ಅರಣ್ಯ ಇಲಾಖೆ ಜಾಗದಲ್ಲಿಯೂ ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಜಿಲ್ಲಾ ಪಂಚಾಯತ 15ನೇ ಹಣಕಾಸು ಅನುದಾಣದಲ್ಲಿ 5 ಲಕ್ಷ ಹಾಗೂ ತಾಲೂಕು ಪಂಚಾಯತ್ ಅನಿರ್ಭಂದಿತ ಯೋಜನೆ ಅಡಿ 4.50 ಲಕ್ಷ ರೂ., ತಾಪಂ 15ನೇ ಹಣಕಾಸು ಯೋಜನೆ ಅಡಿಯಲ್ಲಿ 5 ಲಕ್ಷ ರೂ. ಹಾಗೂ ಮಹಾತ್ಮಾ ಗಾಂಧಿ ನರೇಗಾ ಯೋಜನೆ ಅಡಿಯಲ್ಲಿ 4.30 ಲಕ್ಷ ರೂ. ಅನುದಾನದಲ್ಲಿ ಭೀಮಕೋಲ್ ಕೆರೆಯಲ್ಲಿ ಈಗ ಸುಂದರ ಪಂಚವಟಿ ಎನ್ನುವ ಪ್ರವಾಸಿ ತಾಣ ನಿರ್ಮಿಸಲಾಗಿದೆ.
ರಾಮಾಯಣದಲ್ಲಿ ಬರುವ ಪಂಚವಟಿ ವನದಂತೆ ಇಲ್ಲಿಯೂ ಅದೇ ಹೆಸರಿನಲ್ಲಿ ಪಂಚ ಗಿಡಗಳನ್ನು ನೆಟ್ಟು ವನ ನಿರ್ಮಿಸಲಾಗುತ್ತಿದೆ. ಇದರೊಂದಿಗೆ ರಾಶಿ ವನ, ನವಗ್ರಹ ವನ, ಚಿಟ್ಟೆ ಉದ್ಯಾನವನ್ನು ಕೂಡ ನಿರ್ಮಾಣ ಮಾಡಲಾಗುತ್ತಿದೆ ಎಂದು ಸಾಮಾಜಿಕ ಅರಣ್ಯ ವಿಭಾಗದ ಡಿಎಫ್ಒ ಮಂಜುನಾಥ ನಾವಿ ಮಾಹಿತಿ ನೀಡಿದರು.
ಈಗಾಗಲೇ ಸಾಮಾಜಿಕ ಅರಣ್ಯ ಸಮಿತಿಯಿಂದ ಕೆರೆ ಪಕ್ಕದಲ್ಲಿಯೆ ಆಸನ ವ್ಯವಸ್ಥೆ ಕಲ್ಪಿಸಲಾಗಿದೆ. ಒಂದು ಕುಟೀರದ ರಿತಿ ಇನ್ನೊಂದನ್ನು ಅಣಬೆ ಆಕಾರದಲ್ಲಿ ಕಲಾವಿದರೇ ನಿರ್ಮಾಣ ಮಾಡುತ್ತಿದ್ದಾರೆ. ಮುಂದಿನ ದಿನದಲ್ಲಿ ಹಂತ ಹಂತವಾಗಿ ಅಭಿವೃದ್ಧಿ ಪಡಿಸಿರುವ ಭೀಮಕೋಲ್ ಕೆರೆಗೆ ಇದೀಗ ಎಲ್ಲೇಡೆಯಿಂದಲೂ ಪ್ರವಾಸಿಗರು ಆಗಮಿಸುತ್ತಿದ್ದು ಜನರ ಗಮನ ಇನ್ನಷ್ಟು ಸೆಳೆಯಲು ಈ ತಾಣದಲ್ಲಿ ಮುಂದಿನ ದಿನಗಳಲ್ಲಿ ಬೋಟಿಂಗ್ ವ್ಯವಸ್ಥೆ ಕೂಡ ಮಾಡುವ ಪ್ರಯತ್ನ ನಡೆಸಿದೆ ಎಂದರು.