ಕಾರವಾರ: ನೌಕಾನೆಲೆಯ ಸಿಬ್ಬಂದಿ ಮೀನುಗಾರರಿಗೆ ತೊಂದರೆ ಕೊಡುತ್ತಿರುವ ಕುರಿತು ಚುನಾವಣೆ ಮುಗಿದ ಬಳಿಕ ಶಾಸಕಿ ರೂಪಾಲಿ ನಾಯ್ಕ ಅವರೊಂದಿಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರನ್ನು ಭೇಟಿ ಮಾಡಿ ಚರ್ಚಿಸುವುದಾಗಿ ಬಿಜೆಪಿ ಮುಖಂಡ ಪ್ರಮೋದ ಮಧ್ವರಾಜ್ ಅವರು ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೀನುಗಾರಿಕೆಗೆ ತೆರಳುವ ದೋಣಿಗಳಿಗೆ ಯಾವುದೇ ರೀತಿಯ ತೊಂದರೆ ನೀಡಬಾರದಂತೆ ಕೇಂದ್ರ ಸಚಿವರ ಬಳಿ ಮನವಿ ಮಾಡಿಕೊಳ್ಳಲಾಗುವುದು ಎಂದರು. ಕೇಂದ್ರ ಸರ್ಕಾರವೇ ಮೀನುಗಾರರ ದೋಣಿಗಳಿಗೆ 1488 ಲೀಟರ್ ಸೀಮೆಎಣ್ಣೆ ಕೊಡುವ ಯೋಜನೆ ಜಾರಿಗೆ ತಂದಿದೆ.
ಕೇಂದ್ರ ಸರ್ಕಾರವೇ ನೇರವಾಗಿ ಮೀನುಗಾರರಿಗೆ ಸೀಮೆಎಣ್ಣೆ ವಿತರಣೆ ಮಾಡುತ್ತಿರುವುದು ಇದೇ ಮೊದಲು ಎಂದು ಅವರು ತಿಳಿಸಿದರು. ರಾಜ್ಯ ಸರ್ಕಾರವೂ ಮೀನುಗಾರರಿಗೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಸಬ್ಸಿಡಿ ಡಿಸೇಲ್ ಪ್ರಮಾಣವನ್ನು ಒಂದು ಲಕ್ಷದಿಂದ ಎರಡು ಲಕ್ಷ ಕಿಲೋ ಲೀಟರ್ಗೆ ಏರಿಕೆ ಮಾಡಲಾಗಿದೆ ಎಂದು ಮಧ್ವರಾಜ ತಿಳಿಸಿದರು. ಸೀಬರ್ಡ್ ಯೋಜನೆಯಿಂದ ನಿರಾಶ್ರಿತರಾದವರಿಗೆ ಮಾಜಾಳಿಯಲ್ಲಿ ಮೀನುಗಾರಿಕೆ ಬಂದರು ನಿರ್ಮಾಣ ಮಾಡಲಾಗುತ್ತಿದ್ದು, ಮೀನುಗಾರರ ಗತವೈಭವ ಮರುಕಳುಹಿ ಸಲಿದೆ ಎಂದು ಅವರು ತಿಳಿಸಿದರು.
ಬಿಜೆಪಿ ಹಿಂದೂತ್ವ ರಕ್ಷಣೆ ಮಾಡುತ್ತಿದ್ದರೆ, ಕಾಂಗ್ರೆಸ್ ಹಿಂದೂ ವಿರೋಧಿ ನಿಲುವು ಗಳನ್ನು ಅನುಸರಿಸುತ್ತಿದೆ. ಇದನ್ನು ಅವರು ನೇರವಾಗಿ ಹೇಳುತ್ತಾರೆ. ಉತ್ತರ ಕನ್ನಡ ಜಿಲ್ಲೆ ಅದರಲ್ಲೂ ಕರಾವಳಿ ಕ್ಷೇತ್ರಗಳು ಬಿಜೆಪಿಯ ಭದ್ರಕೋಟೆಯಾಗಿದೆ ಎಂದರು.
ಸ್ಥಳೀಯ ಶಾಸಕಿ ರೂಪಾಲಿ ನಾಯ್ಕ ಅವರು, ಉತ್ತಮ ರೀತಿಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದು, ಚುನಾವಣೆಯಲ್ಲಿ ಅವರು ಜಯಗಳಿಸಿದ್ದಾರೆ. ಗೆಲುವಿನ ಅಂತರ ಹೆಚ್ಚಿಸಿಕೊಳ್ಳಲು ಈ ಹೋರಾಟ ನಡೆಯುತ್ತಿದೆ ಎಂದು ಮಧ್ವರಾಜ ತಿಳಿಸಿದರು.