ಕಾರವಾರ: ಹೊನ್ನಾವರ ತಾಲೂಕಿನ ಮುಗಳಿ ಕಡಲ ತೀರಕ್ಕೆ ಅಳಿವಿನಂಚಿನಲ್ಲಿರುವ ಬೃಹತ್ ಗಾತ್ರದ ನೀಲಿ ತಿಮಿಂಗಿಲದ ಕಳೆಬರಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ತಿಮಿಂಗಿಲವು ಸುಮಾರು 35 ಮೀಟರ್ ಉದ್ದವಿದೆ. ಅದರ ಕಳೆಬರಹ ದೊರೆತ ಬಗ್ಗೆ ಸ್ಥಳೀಯ ಮೀನುಗಾರರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಬಲೀನ್ ತಳಿಗೆ ಸೇರಿದ ತಿಮಿಂಗಿಲ ಇದಾಗಿದ್ದು ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಕಳೆಬರಹವಿದೆ.
ತಿಮಿಂಗಿಲ ಮೃತಪಟ್ಟು ಹಲವು ದಿನಗಳಾಗಿವೆ. ಅಲೆಗಳ ರಭಸಕ್ಕೆ ಈಗ ದಡಕ್ಕೆ ತೇಲಿ ಬಂದಿದೆ. ಇದರ ಸಾವಿಗೆ ಕಾರಣ ಏನು ಎಂಬುದು ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಸ್ಪಷ್ಟವಾಗಲಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.