ಅಂಕೋಲಾ: ರಾಷ್ಟ್ರಧ್ವಜ ವಿತರಣೆಯ ಸಂದರ್ಭದಲ್ಲಿ ಬಿಜೆಪಿ ಮುಖಂಡರೊಬ್ಬರು ಎಡವಟ್ಟು ಮಾಡಿದ್ದಾರೆ. ರಾಷ್ಟ್ರಧ್ವಜ ತಲೆ ಕೆಳಗಾಗಿ ವಿತರಿಸಿ ಜನರ ಆಕ್ರೋಶಕ್ಕೆ ಕಾರಣರಾಗಿದ್ದಾರೆ.
‘ಹರ್ ಘರ್ ತಿರಂಗಾ’ ಕರೆಯ ಹಿನ್ನೆಲೆ ಆ.15ರವರೆಗೆ ಪ್ರತಿ ಮನೆಗಳಲ್ಲಿ ರಾಷ್ಟ್ರಧ್ವಜ ಹಾರಿಸಲು ಕರೆಕೊಟ್ಟಿದ್ದರು. ಈ ಹಿನ್ನೆಲೆ ಬಿಜೆಪಿ ಮುಖಂಡರು, ಕಾರ್ಯಕರ್ತರು ಮನೆ ಮನೆಗಳಿಗೆ ರಾಷ್ಟ್ರಧ್ವಜ ನೀಡುತ್ತಿದ್ದಾರೆ. ಅಂಕೋಲಾ ತಾಲೂಕಿನ ಡೋಂಗ್ರಿ ಶಕ್ತಿ ಕೇಂದ್ರದ ಅಧ್ಯಕ್ಷ ನಾರಾಯಣ ಹೆಗಡೆ ರಾಷ್ಟ್ರಧ್ವಜವನ್ನು ತಲೆ ಕೆಳಗೆ ವಿವರಿಸಿದ್ದಾರೆ.
ನಾರಾಯಣ ಹೆಗಡೆ, ಬೂತ್ ಅಧ್ಯಕ್ಷರಿಗೆ ವಿತರಿಸುವಾಗ ತಲೆ ಕೆಳಗಾಗಿ ವಿತರಣೆ ಮಾಡಿ, ಅದನ್ನೇ ಫೋಟೋ ತೆಗೆದುಕೊಂಡು ತಮ್ಮದೇ ವಾಟ್ಸಪ್ ಗ್ರೂಪ್ನಲ್ಲಿ ಹರಿಯಬಿಟ್ಟಿದ್ದಾರೆ. ಬಿಜೆಪಿ ಕಾರ್ಯಕರ್ತರು ಹಾಗೂ ಜನರು ತಲೆ ಕೆಳಗಾಗಿ ಧ್ವಜ ನೀಡಿರುವ ಬಗ್ಗೆ ಹೇಳಿದಾಗಲೇ ನಾರಾಯಣ ಹೆಗಡೆಗೆ ತಪ್ಪಿನ ಅರಿವಾಗಿದೆ. ನಂತರ ಕಾರ್ಯಕರ್ತರ ಬಳಿ ಕ್ಷಮೆ ಯಾಚಿಸಿ, ವಾಟ್ಸಪ್ ಗ್ರೂಪ್ ನಲ್ಲಿ ಮೆಸೇಜ್ ಹಾಕಿದ್ದಾರೆ.
ಪ್ರಸ್ತುತ ಬಿಜೆಪಿ ಮುಖಂಡ ಮಾಡಿರುವ ಎಡವಟ್ಟು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದು ಆಕ್ರೋಶಕ್ಕೆ ಕಾರಣವಾಗಿದೆ.