ಕಾರವಾರ: ಸದ್ಯದ ಪರಿಸ್ಥಿತಿಯಲ್ಲಿ ಯಾವುದೇ ಇಲಾಖೆ ಬಳಿ ಹಣವಿಲ್ಲ. ಈಗ ಅದನ್ನು ಕಾಂಗ್ರೆಸ್ ಸರಿ ಮಾಡಬೇಕಿದೆ ಎಂದು ಮೀನುಗಾರಿಕೆ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಸಚಿವ ಮಂಕಾಳ ವೈದ್ಯ ಟೀಕಿಸಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾತನಾಡಿದ ಅವರು ನಾನು ಮಾತನಾಡಿದರೆ ರಾಜಕೀಯವಾಗುತ್ತದೆ ಯಾವ ಇಲಾಖೆಯಲ್ಲಿ ಹಣವಿಲ್ಲ. ಬಿಜೆಪಿ ಸರಕಾರ ಶೇ.40 ದೋಚಿಕೊಂಡು ಹೋಗಿದ್ದಾರೆ. ಹೀಗಾಗಿ ಯಾವ ಇಲಾಖೆಯಲ್ಲಿ ಹಣ ಇಟ್ಟಿಲ್ಲ. ಬಿಜೆಪಿಯವರು ಎಲ್ಲವನ್ನೂ ದಿವಾಳಿ ಮಾಡಿಟ್ಟಿದ್ದಾರೆ. ಎಲ್ಲವನ್ನೂ ನಾವು ಮರುಸ್ಥಾಪನೆ ಮಾಡಬೇಕಾಗಿದೆ ಎಂದರು. ಹಿಂದಿನ ಸರಕಾರ ವಿದ್ಯುತ್ ದರ ಏರಿಕೆ ಮಾಡಿತ್ತು. ಜನವರಿಯಲ್ಲಿ ಆದೇಶ ಮಾಡಿದ್ದು ಫೆಬ್ರುವರಿಯಲ್ಲಿ ಜಾರಿಗೆ ಬಂದಿತ್ತು. ಆದರೆ, ಚುನಾವಣೆ ಮುಗಿಯಲಿ ಎನ್ನುವ ಕಾರಣಕ್ಕೆ ಆದೇಶ ಜಾರಿಯಾಗಿರಲಿಲ್ಲ. ಚುನಾವಣೆ ಮುಗಿದಿದ್ದು, ಈ ಬಾರಿ ವಿದ್ಯುತ್ ಬಿಲ್ ಹೆಚ್ಚಳ ಬಂದಿದೆ. ಬಿಜೆಪಿ ಸರಕಾರ ಏನು ಮಾಡಿದೆ ಎನ್ನುವುದರ ಬಗ್ಗೆ ಪರಿಶೀಲನೆ ಮಾಡಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಅವರು ತಿಳಿಸಿದರು.