ದಾಂಡೇಲಿ: ಮೀನು ಹಿಡಿಯಲು ಕಾಳಿ ನದಿಯ ತೀರದಲ್ಲಿ ಗಾಳ ಹಾಕಿ ಕುಳಿತ ಬಾಲಕನಿಗೆ ಮೊಸಳೆ ಎಳೆದುಕೊಂಡು ಹೋದ ಘಟನೆ ದಾಂಡೇಲಿಯಲ್ಲಿ ಹಳಿಯಾಳ ರಸ್ತೆ ಸಮೀಪ ಸಂಭವಿಸಿದೆ.
ಮೋಹಿನ್ ಮೆಹಬೂಬ್ ಗುಲ್ಬರ್ಗವಾಲೆ(15) ಎಂಬ ಬಾಲಕನೇ ಮೊಸಳೆ ದಾಳಿಗೆ ಸಿಲುಕಿ ನದಿಯಲ್ಲಿ ಕಣ್ಮರೆಯಾಗಿದ್ದು ಮೀನು ಹಿಡಿಯಲು ನದಿಯಲ್ಲಿ ಗಾಳ ಹಾಕಿ ಕುಳಿತಿರುವಾಗ ಈ ದುರ್ಘಟನೆ ಸಂಭವಿಸಿರುವುದಾಗಿ ತಿಳಿದು ಬಂದಿದೆ.
ಬಾಲಕನಿಗಾಗಿ ನದಿಯಲ್ಲಿ ನಿರಂತರವಾಗಿ ಶೋಧ ಕಾರ್ಯ ನಡೆಸಲಾಗುತ್ತಿದ್ದು ಪೊಲೀಸ್, ಅಗ್ನಿಶಾಮಕ ಮತ್ತು ಅರಣ್ಯ ಇಲಾಖೆ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಜಂಗಲ್ ಲಾಡ್ಜಿನ ರಾಪ್ಟಿಂಗ್ ಪರಿಣಿತರ ತಂಡ ನದಿಯಲ್ಲಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ನೀರಿನ ಹರಿವನ್ನು ನಿಯಂತ್ರಣಕ್ಕೆ ತರುವ ದಿಶೆಯಲ್ಲಿ ಕೆ.ಪಿ.ಸಿ ಸೂಪಾ ಜಲಾಶಯದಿಂದ ನೀರಿನ ಹೊರ ಹರಿವನ್ನು ಸ್ಥಗಿತಗೊಳಿಸಿ ಕಾರ್ಯಾಚರಣೆಗೆ ಸಹಕಾರ ನೀಡಿದ್ದಾರೆ.