ಕಾರವಾರ: ಉದ್ಯೋಗ ನೌಕರಿ ಕೊಡಿಸುವುದಾಗಿ ಪರ ಊರಿಗೆ ಕರೆಸಿಕೊಂಡು ಕೂಡಿಹಾಕಿ ಚಿತ್ರೀಕರಣ ಮಾಡಿಕೊಂಡ ನಗ್ನ ಫೋಟೊ ಹಾಗೂ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಮೂವರನ್ನು ಶಿರಸಿ ಹೊಸ ಮಾರುಕಟ್ಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಶಿರಸಿಯ ಉಂಚಳ್ಳಿಯ ಕೆರೆಜಡ್ಡಿಯ ಅಜಿತ ಶ್ರೀಕಾಂತ ನಾಡಿಗ (25), ಬನವಾಸಿ ರಸ್ತೆಯ ಗೋಲಗೇರಿ ಓಣಿಯ ಧನುಶ್ಯ ಕುಮಾರ ದಿಲೀಪಕುಮಾರ ಶೆಟ್ಟಿ (25) ಹಾಗೂ ಶಿವಮೊಗ್ಗ ಗೋಪಾಲದ ರಂಗನಾಥ ಬಡಾವಣೆಯ ಪದ್ಮಜಾ ಡಿ. ಎನ್. (50) ಅವರ ಮೇಲೆ ಶಿರಸಿಯ ಹೊಸ ಮಾರುಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಈ ಮೂವರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಇವರುಗಳು ದೂರುದಾರರಿಗೆ ಸರ್ಕಾರಿ ಕಾಯಂ ಉಪನ್ಯಾಸಕ ಹುದ್ದೆ ಕೊಡಿಸುತ್ತೇವೆ ಎಂದು ನಂಬಿಸಿ ಕಳೆದ ಜ.17 ರಂದು ಶಿವಮೊಗ್ಗಕ್ಕೆ ಕರೆಸಿಕೊಂಡಿದ್ದರು. ಬಳಿಕ ಬ್ಲ್ಯಾಕ್ ಮೇಲ್ ಮಾಡುವ ಉದ್ದೇಶದಿಂದ ಕೋಣೆಯಲ್ಲಿ ಕೂಡಿಹಾಕಿ ನಗ್ನಗೊಳಿಸಿ, ದೂರುದಾರರ ಫೋಟೊ ಹಾಗೂ ವಿಡಿಯೋ ಚಿತ್ರೀಕರಣ ಮಾಡಿಕೊಂಡಿದ್ದರು. ನಂತರ ಜ.18 ರಂದು ದೂರುದಾರರ ತಂದೆಯನ್ನು ಭೇಟಿ ಮಾಡಿ ವಿಡಿಯೋ ಡಿಲೀಟ್ ಮಾಡಬೇಕು ಎಂದಾದರೆ 15 ಲಕ್ಷ ರೂ ನೀಡಬೇಕು ಎಂದು ಬೇಡಿಕೆ ಇಟ್ಟರು. ಹಣ ಕೊಡದೇ ಇದ್ದರೆ ಕೊಲೆ ಮಾಡುವುದಾಗಿ ಹೆದರಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ದೂರು ದಾಖಲಾದ 24 ತಾಸಿನಲ್ಲಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.