ಉಡುಪಿ: ಸ್ಯಾಂಟ್ರೊ ರವಿ ಸುಳಿವು ಸಿಕ್ಕಿದೆ, ಶೀಘ್ರದಲ್ಲೆ ಆತನನ್ನು ಬಂಧಿಸುತ್ತೇವೆ. ಆತ ಯಾವುದೇ ಬಿಲದಲ್ಲಿ ಅಡಗಿದ್ದರೂ ಬಿಡುವುದಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಉಡುಪಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೊಲೀಸರು ಕಾರ್ಯಾಚರಣೆ ಮಾಡ್ತಾ ಇದ್ದಾರೆ. ಆತ ಸ್ವಲ್ಪ ಬುದ್ಧಿವಂತನಾಗಿದ್ದು, ಪದೇ ಪದೇ ಸ್ಥಳ ಬದಲಾಯಿಸುತ್ತಿದ್ದಾನೆ. ಆತ ಇಪ್ಪತ್ತು ವರ್ಷದಿಂದ ಈ ಕೆಲಸ ಮಾಡ್ತಾ ಇದ್ದಾನೆ. ಮೈಸೂರಲ್ಲಿ ಆತನ ವಿರುದ್ಧ ರೌಡಿ ಲಿಸ್ಟ್ ಇದೆ. ಆತನ ವಿರುದ್ಧ ಗೂಂಡಾ ಆಕ್ಟ್ ಕೂಡ ಹಾಕಿದ್ದರು. ಯಾರ್ಯಾರ್ ಜೊತೆ ಫೋಟೋ ತೆಗೆಸಿಕೊಂಡಿದ್ದಾನೆ. ಏನು ವ್ಯವಹಾರ ಮಾಡ್ತಾನೆಂಬುವುದು ವಿಚಾರಣೆಯಲ್ಲಿ ಗೊತ್ತಾಗುತ್ತೆ ಎಂದರು.
ನನ್ನ ಜೊತೆ ಆತ ಫೋಟೋ ತೆಗೆಸಿಕೊಂಡಿರಬಹುದು. ನೂರಾರು ಜನ ಬರ್ತಾರೆ ಫೋಟೋ ತೆಗೆಸಿಕೊಳ್ತಾರೆ. ಫೋಟೋ ತೆಗೆಸಿಕೊಳ್ಳುವವರಿಗೆ ಬೇಡ ಎನ್ನಲಾಗುವುದಿಲ್ಲ. ನಮ್ಮದು ಒಂಥರಾ ಸಿನಿಮಾ ನಟರ ಗ್ರೇಡ್ ಆಗಿದೆ. ಜನ ಪ್ರೀತಿಯಿಂದ ಹತ್ತಿರಬಂದು ಫೋಟೋ ತೆಗೆಸಿಕೊಳ್ಳುತ್ತಾರೆ. ಈಗಲೂ ಕೂಡ ಸ್ಯಾಂಟ್ರೋ ರವಿ ಎದುರು ಬಂದು ನಿಂತರೆ ನನಗೆ ಗುರುತ ಆಗಲ್ಲ. ಆದ್ರೆ, ಆತ ಎಲ್ಲಿದ್ರೂ ಬಿಡಲ್ಲ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ. ಪೊಲೀಸರು ಕಾರ್ಯಾಚರಣೆ ಮಾಡ್ತಾ ಇದ್ದಾರೆ ಎಂದ ಹೇಳಿದರು.