ಉಡುಪಿ: ಠೇವಣಿದಾರರಿಗೆ ನೂರಾರು ಕೋಟಿ ರೂ. ವಂಚನೆ ಎಸಗಿರುವ ಪ್ರಕರಣಕ್ಕೆ ಸಂಬಂಧಿಸಿ ಉಡುಪಿಯ ಕಮಲಾಕ್ಷಿ ವಿವಿದ್ದೋದ್ದೇಶ ಸಹಕಾರಿ ಸಂಘಕ್ಕೆ ಉಡುಪಿ ಸೆನ್ ಅಪರಾಧ ಠಾಣೆಯ ಪೊಲೀಸರು ಬೀಗ ಜಡಿದಿದ್ದಾರೆ.
ಕಮಲಾಕ್ಷಿ ಸೊಸೈಟಿಯವರು ಸಾರ್ವಜನಿಕರಿಗೆ ಶೇ.10ರಿಂದ ಶೆ. 12ರಷ್ಟು ಬಡ್ಡಿ ನೀಡುವುದಾಗಿ ಆಮಿಷವೊಡ್ಡಿ ಸುಮಾರು 700 ಜನರಿಂದ 40 ರಿಂದ 50 ಕೋಟಿ ರೂ. ಹಣ ಹೂಡಿಕೆ ಮಾಡಿಸಿಕೊಂಡಿದ್ದಾರೆ. ಒಂದು ವರ್ಷದವರೆಗೆ ಠೇವಣಿದಾರರಿಗೆ ಬಡ್ಡಿ ನೀಡಿದ್ದರು. 2022ರ ಜೂನ್ ತಿಂಗಳಿನಿಂದ ಹೂಡಿಕೆದಾರರಿಗೆ ಬಡ್ಡಿ ನೀಡಿದೆ ಕಚೇರಿಯನ್ನು ಮುಚ್ಚಿದ್ದರು. ಈ ಕುರಿತು ಠೇವಣಿದಾರರಾಗಿರುವ ಉಡುಪಿಯ ಪ್ರಕಾಶ್ ಕಾಮತ್ ಡಿ.21ರಂದು ಸೆನ್ ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ನ್ಯಾಯಾಲಯದಿಂದ ಸರ್ಚ್ ವಾರೆಂಟ್ ಪಡೆದು, ಸೊಸೈಟಿಯ ಸೊತ್ತುಗಳನ್ನು ಪರಿಶೀಲಿಸಿ ಕಚೇರಿಗೆ ಬೀಗ ಜಡಿದಿದ್ದಾರೆ.
ಕಮಲಾಕ್ಷಿ ಸೊಸೈಟಿ ಹಾಗೂ ಆರೋಪಿಗಳಿಗೆ ಸಂಬಂಧಿಸಿದ ಆಸ್ತಿಯನ್ನು ಜಪ್ತಿ ಮಾಡಿ, ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು. ಈ ಆಸ್ತಿಗಳನ್ನು ನಿಯಮಾನುಸಾರ ವಿಲೇವಾರಿ ಮಾಡಿ, ಹೂಡಿಕೆದಾರರಿಗೆ ಪರಿಹಾರವನ್ನು ನೀಡುವ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತದೆ. ಆದ್ದರಿಂದ ಈವರೆಗೆ ಈ ಸೊಸೈಟಿಯಲ್ಲಿ ಹೂಡಿಕೆ ಮಾಡಿರುವ ಠೇವಣಿದಾರರು ಸೆನ್ ಅಪರಾಧ ಪೊಲೀಸ್ ಠಾಣೆಗೆ ಮಾಹಿತಿ ನೀಡದೆ ಇದ್ದಲ್ಲಿ, ತಕ್ಷಣ ಮಾಹಿತಿ ನೀಡಬೇಕು ಎಂದು ಎಸ್ಪಿ ಅಕ್ಷಯ್ ಮಚ್ಚೀಂದ್ರ ಸೂಚನೆ ನೀಡಿದ್ದಾರೆ.